ಬಳ್ಳಾರಿ: ಭಯೋತ್ಪಾದಕರಿಗೆ ಬಿರಿಯಾನಿ ಕೊಟ್ಟು ಸಾಕುವ ಸರ್ಕಾರ ಈಗಿಲ್ಲ. ಭಯೋತ್ಪಾದಕರನ್ನು ಸಂಪೂರ್ಣ ಮಟ್ಟಹಾಕುವ ಸರ್ಕಾರ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಚಿಕ್ಕಮಗಳೂರಿನ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಭಯೋತ್ಪಾದಕರಿಗೆ ಇಲ್ಲಿ ಉಳಿಗಾಲವಿಲ್ಲ. ಭಯೋತ್ಪಾದಕರನ್ನು ಬ್ರದರ್ಸ್ ಎಂದು ಕರೆದದ್ದು ಕಾಂಗ್ರೆಸ್ಸು. ಅವರು ನಕ್ಸಲರನ್ನು ಬೆಂಬಲಿಸುತ್ತಿದ್ದರು. ದೇಶದಲ್ಲಿ ಕಾಂಗ್ರೆಸ್ ಆಡಳಿತ ಇರುವ ಕಡೆ ನಕ್ಸಲ್ ತುಕಡೆ ಗ್ಯಾಂಗ್ ಬೇರೆ ಸಿದ್ಧಾಂತದ ಮೂಲಕ ರೂಪಾಂತರಗೊಂಡು ಜೀವಂತವಿದೆ ಎಂದು ತಿಳಿಸಿದರು.ಎಸ್ಐಆರ್ ಮೂಲಕ ಮತದಾರರ ಪಟ್ಟಿಯಲ್ಲಿನ ಅಕ್ರಮ ಮತದಾರರನ್ನು ತೆಗೆದುಹಾಕುವ ಕೆಲಸವಾಗುತ್ತಿದೆ. ವಿರೋಧಿಸುವವರು ದೇಶದ್ರೋಹಿಗಳು. ತುಕಡೆ ಗ್ಯಾಂಗ್‌ಗಳು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದ್ದು, ಭಾರತ ಸರ್ಕಾರ ತುಕಡೆ ಗ್ಯಾಂಗ್‌ಗಳನ್ನು ಸಮರ್ಥವಾಗಿ ಎದುರಿಸಲಿದೆ. ನಕ್ಸಲ್ ಮುಕ್ತ ಭಾರತ ನಿರ್ಮಾಣವಾಗಲಿದೆ. ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ಅಭಿವೃದ್ಧಿಯ ಪಥದತ್ತ ಸಾಗಿದೆ. ನಾವು ಬರೀ ಹೇಳುವುದಲ್ಲ. ಪೂರಕ ದಾಖಲೆಗಳು, ಪ್ರಗತಿಯ ಅಂಶಗಳೇ ತಿಳಿಸುತ್ತವೆ. ಆರ್ಥಿಕ ಸಂಕಷ್ಟದಲ್ಲಿದ್ದ ಭಾರತ ಆರ್ಥಿಕ ಸುಸ್ಥಿತಿಗೆ ತಲುಪಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬೆಲೆ ಏರಿಕೆ ನಿಯಂತ್ರಣದಲ್ಲಿದೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನು ಅಲ್ಲ. ಪಕ್ಷದ ನಾಯಕರು ಅವರನ್ನೇ ಮುಂದುವರಿಸಬಹುದು ಅಥವಾ ಬೇರೆಯವರನ್ನಾದರೂ ಮಾಡಬಹುದು ಅದು ಗೊತ್ತಿಲ್ಲ. ಯಾರೇ ಅಧ್ಯಕ್ಷರಾದರೂ ಕಾರ್ಯನಿರ್ವಹಿಸುತ್ತೇವೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.ಪ್ರಿಯಾಂಕ್ ಮಿನಿ ಸರ್ವಾಧಿಕಾರಿ:

ಆರ್‌ಎಸ್‌ಎಸ್ ಕುರಿತು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಿಯಾಂಕ್ ಖರ್ಗೆ ಮಿನಿ ಸರ್ವಾಧಿಕಾರಿಯಾಗಿದ್ದಾನೆ. ಈ ಸರ್ವಾಧಿಕಾರಿ ಎಷ್ಟು ಕಾಲ ಅಧಿಕಾರ ದರ್ಪ ತೋರಿಸ್ತಾರೆ ನೋಡೋಣ. ತುರ್ತು ಪರಿಸ್ಥಿತಿಗೆ ನಾವು ಹೆದರಿಲ್ಲ. ಇನ್ನು ಇವರಿಗೆ ನಾವು ಹೆದರುತ್ತೇವಾ? ಎಂದು ಪ್ರಶ್ನಿಸಿದರಲ್ಲದೆ, ತುರ್ತು ಪರಿಸ್ಥಿತಿ ಹಾಕಿದವರು ಅಧಿಕಾರ ಕಳೆದುಕೊಳ್ಳುವಂತಾಯಿತು. ಆ ಸರ್ವಾಧಿಕಾರಿಯೇ ಬಹಳ ದಿನ ಉಳಿಯಲಿಲ್ಲ ಎಂದರು.