ಸಾರಾಂಶ
ಶಿರಸಿ: ಭೋವಿ ಸಮಾಜದಲ್ಲಿ ಅಕ್ಷರ, ಆರ್ಥಿಕ, ಆಧ್ಮಾತ್ಮಿಕ ಕ್ರಾಂತಿಯಾಗಬೇಕು ಎಂದು ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನುಡಿದರು.
ಅವರು ಸೋಮವಾರ ನಗರದ ವೀರಭದ್ರಗಲ್ಲಿಯ ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯತ, ತಾಲೂಕು ಭೋವಿ ಸಮಾಜದ ಸಂಘದ ಆಶ್ರಯದಲ್ಲಿ ೮೫೩ನೇ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯಲ್ಲಿ ಸಾನ್ನಿಧ್ಯ ನೀಡಿ ಮಾತನಾಡಿದರು.ಅಕ್ಷರದಿಂದ ನಾಡನ್ನು ಆಳಬಹುದು. ಜ್ಞಾನವನ್ನು ಪಡೆದಿರುವವರ ಮಾತನ್ನು ಎಲ್ಲರೂ ಕೇಳುತ್ತಾರೆ. ನಾವು ಜ್ಞಾನಿಗಳಾಗಬೇಕು. ನಾವು ಅಕ್ಷರದ ವಾರಸುದಾರರಾಗಬೇಕು. ಆದಿ ಮಾನವನಿಂದ ಹಿಡಿದು ಆಧುನಿಕ ಮಾನವದವರೆ ಆಧುನಿಕ ಸಮಾಜ ಕಟ್ಟಿದವರು ಭೋವಿ ಸಮಾಜದವರು ಎಂದರೆ ತಪ್ಪಾಗಲಾರದು. ಬೆಳಿಗ್ಗೆ ಸಂಜೆಯಿಂದ ಕಾಯಕವೇ ಕೈಲಾಸ ಎಂದು ಮೈತುಂಬ ದುಡಿಯುತ್ತಾರೆ. ಕೇವಲ ದುಡಿಯುವುದದು ಜೀವನವಲ್ಲ. ಗಳಿಕೆ, ಬಳಕೆ, ಉಳಿಕೆ ಸೂತ್ರವನ್ನು ಅಳವಡಿಸಿಕೊಳ್ಳಬೇಕು. ₹೧೦೦ ದುಡಿದು ₹೫೦ ಉಳಿಸುವ ಸಮಾಜ ಆರ್ಥಿಕ ಅಭಿವೃದ್ಧಿಯಾಗುತ್ತದೆ. ಆದರೆ ₹೧೦೦ ದುಡಿದು ₹೧೫೦ ಖರ್ಚು ಮಾಡಿದರೆ ಆ ಸಮಾಜ ಆರ್ಥಿಕವಾಗಿ ಹಿಂದುಳಿಯುತ್ತದೆ. ದುಡಿಯುವ ಹಣವನ್ನು ಉಳಿಸಬೇಕು. ದುಶ್ಚಟಗಳ ಶಾಪಗಳಿಗೆ ಬಲಿಯಾಗಿ ದುಡಿದ ಹಣವೆಲ್ಲ ಚಟಳಿಗೆ ಖಾಲಿಯಾಗುತ್ತದೆ ಎಂದ ಅವರು, ಬಡತನದಲ್ಲಿ ಹುಟ್ಟುವುದು ತಪ್ಪಲ್ಲ. ಬಡತನದಿಂದ ಸಾಯುವುದು ತಪ್ಪು ಎಂದರು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉತ್ತರಕನ್ನಡ ಜಿಲ್ಲಾ ಭೋವಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಹಿರೇಹಳ್ಳಿ, ರಾಜ್ಯ ಭೋವಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಶಿರಸಿ ನಗರ ಠಾಣೆ ಪಿ.ಎಸ್.ಐ ನಾಗಪ್ಪ ಬಿ, ತಾಲೂಕಾಧ್ಯಕ್ಷ ಮಂಜಣ್ಣ ರಾಮಾಪುರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೇಶವಮೂರ್ತಿ ಇಮ್ಮಡಿ, ಎ.ಎಸ್.ಐ ಶಿವಕುಮಾರ, ನಿವೃತ್ತ ಉಪನ್ಯಾಸಕ ಎಂ.ಎಂ.ಕಮನಳ್ಳಿ, ನಿವೃತ್ತ ತಹಸೀಲ್ದಾರ ನಾಗರಾಜ ನಾಯ್ಕಡ ಮತ್ತಿತತರು ಉಪಸ್ಥಿತರಿದ್ದರು.ತಹಸೀಲ್ದಾರ ಶ್ರೀಧರ ಮುಂದಲಮನಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಶಿವಾನಂದ ದೇಶಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಮಾರಿಕಾಂಬಾ ಪ್ರೌಢ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರಸನ್ನ ಹೆಗಡೆ ನಿರೂಪಿಸಿದರು.
ಶಿವಯೋಗಿ ಸಿದ್ಧರಾಮೇಶ್ವರ ಜೀವನದ ಕುರಿತು ಕೊಳಗಿಬೀಸ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಹನುಮಂತಪ್ಪ ಹೊಕ್ಕಳಬೈಲ್ ಉಪನ್ಯಾಸ ನೀಡಿದರು.