ಸಾರಾಂಶ
ಕನ್ನಡಪ್ರಭ ವಾರ್ತೆ ನಾಲತವಾಡ ಮಕ್ಕಳು ಹಾಗೂ ಯುವಜನರು ತಂಬಾಕು ಉತ್ಪನ್ನಗಳ ಸೇವನೆಯ ಚಟಕ್ಕೆ ಒಳಪಡುವುದನ್ನು ತಪ್ಪಿಸಲು ಎಲ್ಲೆಡೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಐ.ಬಿ.ತಳ್ಳೊಳ್ಳಿ ಹೇಳಿದರು.
ಕನ್ನಡಪ್ರಭ ವಾರ್ತೆ ನಾಲತವಾಡ
ಮಕ್ಕಳು ಹಾಗೂ ಯುವಜನರು ತಂಬಾಕು ಉತ್ಪನ್ನಗಳ ಸೇವನೆಯ ಚಟಕ್ಕೆ ಒಳಪಡುವುದನ್ನು ತಪ್ಪಿಸಲು ಎಲ್ಲೆಡೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಐ.ಬಿ.ತಳ್ಳೊಳ್ಳಿ ಹೇಳಿದರು.ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದ ಸಹಯೋಗದಡಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಜಾಗತೀಕರಣದ ಆಧುನಿಕ ದಿನಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಫ್ಯಾಶನ್ ಮತ್ತು ಪ್ರತಿಷ್ಠೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ತಂಬಾಕು ಮತ್ತು ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟ್, ಹುಕ್ಕಾ ಇವೆಲ್ಲವು ಕ್ಷಣಿಕ ಸುಖ ನೀಡುತ್ತವೆಯೇ ಹೊರತು ವ್ಯಕ್ತಿಯನ್ನು ಕ್ಷಣಕ್ಷಣಕ್ಕೂ ಕೊಲ್ಲುತ್ತಿರುತ್ತವೆ. ಜಗತ್ತಿನಲ್ಲಿ ಇಂದಿಗೂ ಶಾಶ್ವತ ಚಿಕಿತ್ಸೆ ಇಲ್ಲ, ಅತ್ಯಂತ ಮಾರಕ ರೋಗವಾದ ಕ್ಯಾನ್ಸರಿಗೆ ತಂಬಾಕು ಉತ್ಪನ್ನಗಳು ಕಾರಣೀಭೂತವಾಗಿವೆ. ತಂಬಾಕು ಉತ್ಪನ್ನಗಳ ಬಳಕೆಯಿಂದ ಹೃದಯಾಘಾತ, ಮೆದುಳಿನ ಆಘಾತ ಅಥವಾ ಸ್ಟ್ರೋಕ್, ಶ್ವಾಸಕೋಶದ ರೋಗಗಳು ಪಾರ್ಶ್ವ ವಾಯು, ನ್ಯುಮೋನಿಯಾ, ಟೊಳ್ಳು ಮೂಳೆ, ನಪುಂಸಕತೆ ಮುಂತಾದ ಭೀಕರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಣ್ಣು, ಚರ್ಮ ಕಾಂತಿ ಹೀನ ವಾಗುವುದು, ಇನ್ನು ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್, ಮುಟ್ಟಿನ ತೊಂದರೆ, ಲೈಂಗಿಕ ನಿರಾಸಕ್ತಿ, ಬಂಜೆತನ, ಅಕಾಲಿಕ ಗರ್ಭಪಾತ ಮುಂತಾದ ಹತ್ತು ಹಲವು ಸಮಸ್ಯೆಗಳು ಒಟ್ಟಾಗಿ ಕಾಣಿಸುತ್ತವೆ. ಅಲ್ಲದೆ ತಂಬಾಕು ಸೇವನೆಯು ಮಾರಕ ಚಟವಾಗಿದ್ದು, ಇದರಿಂದಾಗಿ ಆ ವ್ಯಕ್ತಿಯಷ್ಟೆ ಅಲ್ಲದೆ ಅವರ ಕುಟುಂಬ ಹಾಗೂ ಸಮಾಜ ಕೂಡ ಸಂಕಷ್ಟಕ್ಕೊಳಗಾಗುತ್ತದೆ ಎಂದು ಹೇಳಿದರು.ಈ ವೇಳೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಇತರೆ ಸಿಬ್ಬಂದಿ ಮತ್ತು ಒಳ, ಹೊರ ರೋಗಿಗಳು ಉಪಸ್ಥಿತರಿದ್ದರು.