ಸಾರಾಂಶ
ಕೊಪ್ಪಳ:
ಭಾರತವು ಮಕ್ಕಳ ರಕ್ಷಣೆಗಾಗಿ ವ್ಯಾಪಕ ಶ್ರೇಣಿಯ ಕಾನೂನು ಹೊಂದಿದೆ ಮತ್ತು ಅವರ ರಕ್ಷಣೆಯನ್ನು ಸಾಮಾಜಿಕ ಅಭಿವೃದ್ಧಿಯ ಪ್ರಮುಖ ಅಂಶವಾಗಿ ಸ್ವೀಕರಿಸಲಾಗುತ್ತಿದೆ ಎಂದು ನ್ಯಾಯಾಧೀಶ ಮಹಾಂತೇಶ ದರಗದ ಹೇಳಿದರು.ನಗರದ ಶಿವಪ್ರಿಯಾ ಕಾನೂನು ವಿದ್ಯಾಲಯದಲ್ಲಿ ಜರುಗಿದ ಕಾನೂನು ನೆರವು ಮತ್ತು ಜಾಗೃತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾನವ ಸಂಪನ್ಮೂಲ ಸಾಮರ್ಥ್ಯದ ಕೊರತೆ ಮತ್ತು ಗುಣಮಟ್ಟದ ತಡೆಗಟ್ಟುವಿಕೆ ಮತ್ತು ಪುನರ್ವಸತಿ ಸೇವೆಗಳಿಂದ ಕಾನೂನು ಅನುಷ್ಠಾನಗೊಳಿಸುವುದು ಸವಾಲಾಗಿದೆ. ಪರಿಣಾಮವಾಗಿ ಲಕ್ಷಾಂತರ ಮಕ್ಕಳು ಹಿಂಸೆ, ನಿಂದನೆ ಮತ್ತು ಶೋಷಣೆಗೆ ಗುರಿಯಾಗುತ್ತಿದ್ದಾರೆ ಎಂದರು.ಯುನಿಸೆಫ್ ಜಿಲ್ಲಾ ಸಂಯೋಜಕ ಹರೀಶ್ ಜೋಗಿ ಮಾತನಾಡಿ, ಹಿಂಸೆ ಎಲ್ಲ ಸಂದರ್ಭಗಳಲ್ಲಿಯೂ ನಡೆಯುತ್ತದೆ, ಮನೆ, ಶಾಲೆ, ಮಕ್ಕಳ ಆರೈಕೆ ಸಂಸ್ಥೆಗಳು, ಕೆಲಸ ಮತ್ತು ಸಮುದಾಯದಲ್ಲಿ ಹೆಚ್ಚಾಗಿ ಮಗುವಿಗೆ ತಿಳಿದಿರುವ ಯಾರಾದರೂ ಹಿಂಸಾಚಾರ ಮಾಡುತ್ತಾರೆ. ಭಾರತವು ಮಕ್ಕಳ ಹಕ್ಕುಗಳು ಮತ್ತು ರಕ್ಷಣೆ ಪರಿಹರಿಸುವ ಸಮಗ್ರ ನೀತಿ ಮತ್ತು ಕಾನೂನು ಚೌಕಟ್ಟು ಹೊಂದಿದೆ. ಎಲ್ಲ ಮಕ್ಕಳು ಗುಣಮಟ್ಟದ ರಕ್ಷಣಾ ಸೇವೆಗಳಿಗೆ ಸಮಾನ ಪ್ರವೇಶ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ಅವಕಾಶ ಒದಗಿಸುತ್ತದೆ ಎಂದು ಹೇಳಿದರು.
ಹಿರಿಯ ತರಬೇತಿದಾರ ರಾಘವೇಂದ್ರ ಭಟ್ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ತ್ವರಿತ ನ್ಯಾಯಾಲಯ ಸ್ಥಾಪಿಸಲು ಮತ್ತು ಮಕ್ಕಳು ಮತ್ತು ಮಹಿಳೆಯರ ವಿರುದ್ಧ ಸೈಬರ್ ಅಪರಾಧ ನಿಭಾಯಿಸಲು ಗಮನಾರ್ಹ ಪ್ರಯತ್ನ ಮಾಡಲಾಗಿದೆ. 2019ರಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಮಸೂದೆ ತಿದ್ದುಪಡಿ ಮಾಡಲಾಯಿತು. ಇದು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಗೆ ಕಠಿಣ ಶಿಕ್ಷೆ ನಿಗದಿಪಡಿಸಿತು ಎಂದರು.ಈ ವೇಳೆ ಹಿರಿಯ ವಕೀಲ, ಶಿವಪ್ರಿಯಾ ಕಾಲೇಜ್ ಕೌನ್ಸಿಲ್ ಪೀರಾ ಹುಸೇನ್ ಪ್ರಾಂಶುಪಾಲ ಡಾ. ಬಸವರಾಜ ಹನಸಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ನರೇಂದ್ರ, ರಾಜಶೇಖರ ಗಾಂಜಿ ಸೇರಿದಂತೆ ಉಪನ್ಯಾಸಕರು, ಕಾನೂನು ವಿದ್ಯಾರ್ಥಿಗಳು ಹಾಜರಿದ್ದರು.