ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ ಪ್ರಸಕ್ತ ವರ್ಷದಲ್ಲಿ ಮರ ಹಾಗೂ ಮರದ ರೆಂಬೆ-ಕೊಂಬೆ ಬಿದ್ದು ಈವರೆಗೆ ಇಬ್ಬರು ಮೃತಪಟ್ಟಿದ್ದು, 17 ಮಂದಿಗೆ ಗಾಯಗಳಾಗಿವೆ. ನಗರದಲ್ಲಿ ಪೂರ್ವ ಮುಂಗಾರು ಆರಂಭಗೊಂಡ ಮಾರ್ಚ್‌ನಿಂದ ಈವರೆಗೆ ಬರೋಬ್ಬರಿ 1,233 ಮರಗಳು ಸಂಪೂರ್ಣವಾಗಿ ಧರೆಗುರುಳಿದ್ದು, 3,308 ರಂಬೆ ಕೊಂಬೆಗಳು ಧರೆಗುರುಳಿವೆ. ಮಳೆ-ಗಾಳಿ ಇಲ್ಲದ ಸಂದರ್ಭದಲ್ಲಿಯೂ ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿದ ಉದಾಹರಣೆಯೂ ಇದೆ.

ಹೀಗೆ, ಮರ ಹಾಗೂ ಮರದ ರೆಂಬೆಕೊಂಬೆ ಬಿದ್ದ ಸಂದರ್ಭದಲ್ಲಿ ಇಬ್ಬರು ಆಟೋ ಚಾಲಕರು ಪ್ರಾಣ ಕಳೆದುಕೊಂಡಿದ್ದಾರೆ. ಉಳಿದಂತೆ 16 ಮಂದಿಗೆ ಎದೆ, ಬೆನ್ನು ಮೂಳೆ, ಕೈ-ಕಾಲಿನ ಮೂಳೆಗಳು ಮುರಿತವಾಗಿ, ಗಾಯಗಳಾಗಿವೆ. ಕೆಲವರಿಗೆ ಶಾಶ್ವತ ದೈಹಿಕ ಅಂಗವೈಕಲ್ಯ ಉಂಟಾಗಿದೆ.

ಬಿಬಿಎಂಪಿಯು ಈ ರೀತಿಯ ಪ್ರಾಣ ಹಾನಿ ಹಾಗೂ ಶಾಶ್ವತ ಅಂಗವೈಕಲ್ಯ ಉಂಟಾದವರಿಗೆ ತಲಾ ಐದು ಲಕ್ಷ ರು. ಪರಿಹಾರ ನೀಡಲಾಗಿದೆ. ಇನ್ನು ಮೂಳೆ ಮುರಿತ ಸೇರಿದಂತೆ ಮೊದಲಾದ ಚಿಕಿತ್ಸೆಗೆ ಆಸ್ಪತ್ರೆ ವೆಚ್ಚವನ್ನು ಭರಿಸಿದೆ.

ಇಬ್ಬರು ಮೃತಪಟ್ಟ ಕುಟುಂಬ ಪರಿಹಾರ ನೀಡಿರುವುದು ಸೇರಿದಂತೆ 18 ಮಂದಿಯ ಪೈಕಿ 7 ಮಂದಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗಿದೆ. ಉಳಿದವರೆಗೆ ಚಿಕಿತ್ಸೆ ವೆಚ್ಚವಾಗಿ ₹3.56 ಲಕ್ಷ ನೀಡಲಾಗಿದೆ. ಒಟ್ಟು ಈವರೆಗೆ ಬಿಬಿಎಂಪಿ ಮರ ಬಿದ್ದು ಹಾನಿ ಪರಿಹಾರ ಮತ್ತು ಚಿಕಿತ್ಸೆಗೆ ₹10 ಕೋಟಿ ಅಧಿಕ ವೆಚ್ಚ ಮಾಡಿದೆ.