ಉಡುಪಿ: ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ ವತಿಯಿಂದ, ಭೀಮ ಗೋಲ್ಡ್ ಬೆಂಗಳೂರು ಪ್ರಾಯೋಜಕತ್ವದಲ್ಲಿ ನಡೆಯಲಿರುವ ಒಂದು ವಾರದ ಯಕ್ಷಶಿಕ್ಷಣ ಸನಿವಾಸ ಶಿಬಿರ – 2026ನ್ನು ಬುಧವಾರ ಗೀತಾನಂದ ಫೌಂಡೇಶನ್ ಅಧ್ಯಕ್ಷ ಆನಂದ ಸಿ. ಕುಂದರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಯಕ್ಷಗಾನ ಕಲಾರಂಗದ ಕೆಲಸ ಎಲ್ಲ ಸಂಘಟನೆಗಳಿಗೆ ಮಾದರಿ, ಯಕ್ಷಗಾನ ಕಲಾರಂಗವು ಸಾಂಕೃತಿಕ-ಸಾಮಾಜಿಕ ಕಾರ್ಯಗಳಿಗೆ ತನ್ನನ್ನೇ ಸಮರ್ಪಿಸಿಕೊಂಡಿದೆ. ಯಕ್ಷಗಾನ ಕಲೆ, ಕಲಾವಿದರ ಕ್ಷೇಮಚಿಂತನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಯಕ್ಷಗಾನ ಕಲಿಕೆ ಕುರಿತಂತೆ ಅವರು ಮಾಡುತ್ತಿರುವ ಕೆಲಸ ಅಸಾಧಾರಣವಾದುದು. ಪರಿಶ್ರಮದ ದುಡಿಮೆ ಮತ್ತು ಪಾರದರ್ಶಕ ವ್ಯವಹಾರದಿಂದ ಈ ಸಂಸ್ಥೆ ಸಮಾಜದ ಮನ್ನಣೆಗೆ ಪಾತ್ರವಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಉಡುಪಿಯ ಶಾಸಕ ಯಶ್‌ಪಾಲ್ ಎ. ಸುವರ್ಣ, ಯಕ್ಷಗಾನ ಕಲಾರಂಗದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಹಕಾರದಿಂದ ಯಕ್ಷಶಿಕ್ಷಣ ಯಶಸ್ವಿಯಾಗಿ ಮುನ್ನಡೆಯುತ್ತಿದೆ, ಟ್ರಸ್ಟಿನ ಅಧ್ಯಕ್ಷನಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು. ಅಭ್ಯಾಗತರಾಗಿ ಆಗಮಿಸಿದ್ದ ಉದ್ಯಮಿ ಪಿ. ನಟರಾಜ ಹೆಗ್ಡೆ, ಸಾಮಾಜಿಕ ಕಾರ್ಯಕರ್ತ ಸುಧೀರ್ ಕುಮಾರ್ ಶೆಟ್ಟಿ, ಪಶುವೈದ್ಯಾಧಿಕಾರಿ ಡಾ. ಪ್ರಶಾಂತ್ ಶೆಟ್ಟಿ ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾಪ್ರಸಾದ್ ವಂದಿಸಿದರು. ನಿರಂಜನ್ ಭಟ್ ಕಾರ್ಯಕ್ರಮ ನಿರೂಪಿಸಿದರು.

104 ವಿದ್ಯಾರ್ಥಿಗಳು ಭಾಗಿ: ಶಿಬಿರದಲ್ಲಿ 104 ವಿದ್ಯಾರ್ಥಿಗಳು ಭಾಗವಹಿಸಿದ್ದು, ಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ, ನರಸಿಂಹ ತುಂಗ ಲಂಬೋದರ ಹೆಗಡೆ, ಸುವರ್ಣರ ಶಿಷ್ಯರಾದ ಶ್ರೀಧರ ಹೆಗಡೆ, ಮನೋಜ್, ಆದ್ಯತಾ ಭಟ್, ಶಿಶಿರ, ಪ್ರಶಾಂತ, ಶ್ರುತಿ, ಕಾರ್ತಿಕ್ ಭಟ್ ಸಹಕರಿಸಲಿದ್ದಾರೆ. ಉದ್ಘಾಟನಾ ಸಂದರ್ಭದಲ್ಲಿ ಯಕ್ಷಶಿಕ್ಷಣದ ಗುರುಗಳಾದ ಮಹೇಶ ಮಂದಾರ್ತಿ, ನಿತ್ಯಾನಂದ ಶೆಟ್ಟಿಗಾರ್ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಿಗೆ ನೃತ್ಯ, ಅಭಿನಯ, ಮುಖವರ್ಣಿಕೆ, ವೇಷಭೂಷಣದ ತರಬೇತಿಯೊಂದಿಗೆ ಯಕ್ಷಗಾನದ ಕುರಿತ ಹಲವು ಮಾಹಿತಿಗಳನ್ನು ನೀಡಲಾಗುವುದು.