ನಾಪೋಕ್ಲು: ತಡಿಯಂಡಮೋಲ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ಬಳಿಕ ನಾಪತ್ತೆಯಾಗಿ ಭಾನುವಾರ ಪತ್ತೆಯಾದ ಕೇರಳದ ಶರಣ್ಯ ನಡುವಳಿಕೆಯು ಸಂಶಯಾಸ್ಪದವಾಗಿದೆ ಎಂದು ನಾಪೋಕ್ಲು ಬಿಜೆಪಿ ಮಂಡಲ ಪ್ರಮುಖರು ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿ, ತನಿಖೆಗೆ ಒತ್ತಾಯಿಸಿದ್ದಾರೆ.
ಕೇರಳದ ಟೆಕ್ಕಿ ಶರಣ್ಯ ಏ. 2ರಂದು ತಡಿಯಂಡ ಮೋಲ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ಮೂರು ದಿನದ ಬಳಿಕ ಪತ್ತೆಯಾಗಿದ್ದು ಈ ಸಂದರ್ಭದಲ್ಲಿ ಕೆಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರಕರಣದಲ್ಲಿ ಕಾಣದ ಕೈಗಳ ಕೈವಾಡವಿದೆ ಎಂದು ಮಡಿಕೇರಿ ತಾಲೂಕು ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪೊಕ್ಕುಳಂಡ್ರ ಧನುಜ್ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ನಮ್ಮ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕೆಟ್ಟ ಹೆಸರು ತರಲು ನಾಟಕವಾಡಿದ ರೀತಿಯಲ್ಲಿ ಈ ಪ್ರಕರಣ ಕಂಡುಬರುತ್ತದೆ.ಸೂಕ್ತ ತನಿಖೆ ನಡೆಸಿ ನೈಜ ಅಂಶವನ್ನು ಜನತೆ ಮುಂದಿಡಬೇಕು ಎಂದು ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಮುಖಂಡ ಅಂಬಿ ಕಾರ್ಯಪ್ಪ ಒತ್ತಾಯಿಸಿದರು. ದೂರು ಸ್ವೀಕರಿಸಿದ ಠಾಣಾಧಿಕಾರಿ ರಾಘವೇಂದ್ರ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭ ಗ್ರಾಮಾಂತರ ಮಂಡಲ ಬಿಜೆಪಿ ಪ್ರಮುಖರಾದ ಬಿದ್ದಂಡ ರಾಜೇಶ್, ಬೊಲಿಯಾಡಿರ ಸಂತು ಸುಬ್ರಮಣಿ, ಅಮ್ಮಂಡ ಮನು ಮಹೇಶ್, ಪವನ್ ತೋಟಬೈಲು, ಕಲಿಯಂಡ ಸುನಂದ, ನೀಲಮ್ಮ, ಸಂಪತ್, ಕೃತಿ, ನಿರಂಜನ್ ಉಪಸ್ಥಿತರಿದ್ದರು.