ನವಲಗುಂದ:
46 ವರ್ಷಗಳಿಂದ ರೈತ ಹೋರಾಟಗಳು ನಡೆಯುತ್ತಿದ್ದರೂ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ರೈತರನ್ನು ಶೋಷಿಸುತ್ತಿರುವ ಸರ್ಕಾರಗಳ ವಿರುದ್ಧ ಒಗ್ಗಟ್ಟಾಗಿ ಚಳವಳಿ ಆರಂಭಿಸದಿದ್ದರೆ ರೈತ ಕುಲಕ್ಕೆ ಉಳಿವಿಲ್ಲವೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಕರೆ ನೀಡಿದರು.ಪಟ್ಟಣದಲ್ಲಿ ಜರುಗಿದ 46ನೇ ಹುತಾತ್ಮ ರೈತ ದಿನದಂಗವಾಗಿ ಇಲ್ಲಿನ ಹುತಾತ್ಮ ರೈತ ವೀರಗಲ್ಲಿಗೆ ನಮನ ಸಲ್ಲಿಸಿ ಮಾತನಾಡಿದ ಅವರು, ಮಹದಾಯಿ ಹಾಗೂ ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆ ಜಾರಿ ಹಾಗೂ ರೈತರ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ನೀಡದ ರಾಜಕಾರಣಿಗಳು ಹಾಗೂ ಸರ್ಕಾರ ವಿರುದ್ಧ ರೈತರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.ಸುಭಾಶ್ಚಂದ್ರಗೌಡ ಪಾಟೀಲ, ರವಿ ತೋಟದ, ಮಾಬೂಸಾಬ್ ಯರಗುಪ್ಪಿ, ಮಲ್ಲೇಶ ಉಪ್ಪಾರ ಸೇರಿದಂತೆ ಮತ್ತಿತರರಿದ್ದರು.ವೇದಿಕೆಯಲ್ಲಿ ಅಸ್ವಸ್ಥ...ಪಕ್ಷಾತೀತ ರೈತಹೋರಾಟ ಸಮಿತಿ ಅಧ್ಯಕ್ಷ ಯಲ್ಲಪ್ಪ ದಾಡಿಬಾವಿ ವೇದಿಕೆಯಲ್ಲೇ ಅಸ್ವಸ್ಥಗೊಂಡರು. ಅವರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎನ್.ಎಚ್. ಕೋನರಡ್ಡಿ ಅವರ ಆರೋಗ್ಯ ವಿಚಾರಿಸಿದರು.
ಮಹದಾಯಿ ವಿಷಯದಲ್ಲಿ ರಾಜಕಾರಣ ಬೇಡನವಲಗುಂದ- ನರಗುಂದ ಬಂಡಾಯದ ರೈತ ಹುತಾತ್ಮ ದಿನವನ್ನು ನವಲಗುಂದದಲ್ಲಿ ವಿವಿಧ ರೈತ ಸಂಘಟನೆಗಳು, ಜನಪ್ರತಿನಿಧಿಗಳು ಹುತಾತ್ಮ ರೈತನ ವೀರಗಲ್ಲಿಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಿದರು. ರೈತರ ಸಮಸ್ಯೆಗಳಿಗೆ ಕಿವಿಗೊಡಿ, ಮಹದಾಯಿ ವಿಷಯದಲ್ಲಿ ರಾಜಕಾರಣ ಮಾಡಬೇಡಿ ಎಂಬ ಒಕ್ಕೊರಲಿನ ಆಗ್ರಹ ಕೇಳಿ ಬಂದಿತು.ಇದೇ ವೇಳೆ ಶಾಸಕ ಸಿ.ಪಿ. ಯೋಗೇಶ್ವರ ಅವರ ಪುತ್ರ ಧ್ಯಾನ ಯೋಗೇಶ್ವರ ನಟನೆಯ "ಕರ್ನಾಟ ಬಲಂ ಅಜೇಯಂ " ಚಿತ್ರೀಕರಣವೂ ನಡೆಯಿತು.ರೈತ ಬಂಡಾಯದ ಹೋರಾಟದಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ರೈತರು ಬಲಿಯಾಗಿದ್ದರು. ಆ ದಿನದ ಸ್ಮರಣೆಗಾಗಿ ಜು. 21ರಂದು ಪ್ರತಿ ವರ್ಷ ರೈತ ಹುತಾತ್ಮ ದಿನ ಆಚರಿಸಲಾಗುತ್ತದೆ. ಈ ದಿನದಂದು ರಾಜ್ಯ, ಹೊರ ಜಿಲ್ಲೆಗಳಿಂದ ರೈತ, ಕಾರ್ಮಿಕರ ಸೇರಿದಂತೆ ವಿವಿಧ ಸಂಘಟನೆಗಳು ಹುತಾತ್ಮ ರೈತನ ವೀರಗಲ್ಲಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸುತ್ತವೆ. ಇದೇ ವೇಳೆ ರೈತ ಸಮಾವೇಶ ನಡೆಯಿತು. ತಮ್ಮ ಸಮಸ್ಯೆ ಪರಿಹಾರಕ್ಕಾಗಿ ರೈತರು ಧರಣಿಯನ್ನೂ ನಡೆಸಿದರು.
ಪ್ರತಿಧ್ವನಿಸಿದ ಮಹದಾಯಿ:ಮಹದಾಯಿ ತೀರ್ಪು ಬಂದು 8 ವರ್ಷವಾದರೂ ಈ ವರೆಗೂ ನೀರು ಹರಿದಿಲ್ಲ. ಈ ಕುರಿತು ಕೇವಲ ರಾಜಕೀಯ ನಡೆಯುತ್ತಿದೆ ಹೊರತು ಅನ್ನದಾತರ ಅಳಲು ಆಲಿಸುತ್ತಿಲ್ಲ. ಇನ್ನಾದರೂ ರಾಜಕಾರಣ ಬದಿಗಿಟ್ಟು ರೈತರಿಗಾಗಿ ಮಹದಾಯಿ ನೀರು ಹರಿಸುವಂತೆ ಆಗ್ರಹಿಸಲಾಯಿತು. ರೈತರ ಸಮಸ್ಯೆಗೆ ಸ್ಪಂದಿಸುವುದು, ಬೆಳೆಗಳಿಗೆ ಬೆಂಬಲ ಬೆಲ ನೀಡಲು ಸರ್ಕಾರಗಳು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಹುತಾತ್ಮ ದಿನಾಚರಣೆ ಅಂಗವಾಗಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಹಸಿರು ಟಾವೆಲ್ ಬೀಸಿದರು.
ಈ ವೇಳೆ ಶಾಸಕರಾದ ಎನ್.ಎಚ್. ಕೋನರಡ್ಡಿ, ಸಿ.ಪಿ. ಯೋಗೇಶ್ವರ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕೆ.ಎನ್. ಗಡ್ಡಿ, ವಿನೋದ ಅಸೂಟಿ, ಅಜಾತ ನಾಗಲಿಂಗ ಶ್ರೀ, ಪಂಚಗ್ರಹ ಹಿರೇಮಠದ ಪೀಠಾಧಿಪತಿ ಇಮ್ಮಡಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ರೈತ ಮುಖಂಡರಾದ ಚಂದ್ರಶೇಖರ ಕೋಡಿಹಳ್ಳಿ, ಲೋಕನಾಥ ಹೆಬಸೂರ ಸೇರಿದಂತೆ ಹಲವು ಗಣ್ಯರು, ಹುತಾತ್ಮ ರೈತನ ವೀರಗಲ್ಲಿಗೆ ಗೌರವ ಸಲ್ಲಿಸಿದರು.