ಮೂಲ್ಕಿ: ದೇಶದಲ್ಲಿ ಹಲವು ಭಾಷೆಗಳು ಅಳಿವಿನ ಅಂಚಿನಲ್ಲಿದ್ದು, ಭಾಷೆಗಳನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯಾಲಯಗಳು ಆದ್ಯತೆಯ ಮೇರೆಗೆ ಕೆಲಸ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.ತುಳು ವರ್ಲ್ಡ್ ಫೌಂಡೇಶನ್ ಮತ್ತು ಬೆಂಗಳೂರಿನ ತುಳುವೆರೆ ಚಾವಡಿ ತೆಂಕಾಯಿ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್ ಹಾಗೂ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆಂಡ್ ಕ್ರಿಯೇಟಿವ್ ಆರ್ಟ್ಸ್ ಸಹಯೋಗದೊಂದಿಗೆ ಬೆಂಗಳೂರು ಅಲಯನ್ಸ್ ವಿಶ್ವವಿದ್ಯಾಲಯದ ಆವರಣದಲ್ಲಿ ಜರಗಿದ ತುಳುವೆರೆ ಜಾಲಾಟೋರ್ದು ಯಕ್ಷಗಾನ ಮುಟ್ಟ ತುಳು ಯಕ್ಷಗಾನ ಕಾರ್ಯಾಗಾರ, ಪ್ರದರ್ಶನ ಹಾಗೂ ಸಂಶೋಧನಾ ಪ್ರಬಂಧಗಳ ಪ್ರಸ್ತುತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಚಿನ್ನಪ್ಪ ಗೌಡ ಅವರು ದಿಕ್ಸೂಚಿ ಭಾಷಣದಲ್ಲಿ ಜಾಲಾಟ ಎಂಬುದು ಅತ್ಯಂತ ಪ್ರಾಚೀನವಾಗಿದ್ದು ಇದು ಮೂರರಿಂದ ಐದು ದಿನಗಳ ಕಾಲ ನಿರಂತರವಾಗಿ ನಡೆಯುತ್ತದೆ. ದೈವಾರಾಧನೆಗಿಂತ ಪೂರ್ವದಲ್ಲಿಯೇ ಜಾಲಾಟವಿದ್ದು ತುಳು ಭಾಷೆ ದೈವರಾಧನೆ, ಯಕ್ಷಗಾನ ಇವುಗಳೆಲ್ಲದಕ್ಕಿಂತಲೂ ಪೂರ್ವದಲ್ಲಿಯೇ ಇತ್ತು ಎಂದು ತಿಳಿಸಿದರು. ತುಳುವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ, ಅಲಯನ್ಸ್‌ ವಿಶ್ವವಿದ್ಯಾಲಯದ ವಿಭಾಗ ಮುಖ್ಯಸ್ಥರಾದ ಡಾ. ಶ್ರುತಿ ಚಂದ್ರಶೇಖರ್, ತುಳುವೆರೆ ಚಾವಡಿಯ ಡಾ. ಲಿಜು, ತೆಂಕಾಯಿ ಸಂಘಟನೆಯ ಖಜಾಂಚಿ ವಿನೋದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಅಲಯನ್ಸ್ ವಿಶ್ವವಿದ್ಯಾಲಯದ ಸಿಒಇಐಕೆ ಎಸ್‌ ನ ನಿರ್ದೇಶಕ ಡಾ. ಎ. ಎಮ್. ಶ್ರೀಧರನ್ ಸ್ವಾಗತಿಸಿದರು. ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಪ್ರಸ್ತಾವನೆಗೈದರು.