ಸಾರಾಂಶ
ರೋಣ: ಪಟ್ಟಣದ ಅಭಿವೃದ್ಧಿಗಾಗಿ ಪುರಸಭೆಗೆ ಬರುವ ಅನುದಾನದಲ್ಲಿ ಕೆಲಸ ಮಾಡದೇ ಅನಗತ್ಯ ಖರ್ಚು ಹಾಕಲಾಗಿದೆ. ಇದರಿಂದ ಅಭಿವೃದ್ಧಿ ಮರೀಚಿಕೆಯಾಗುವುದು ಎಂದು ಪುರಸಭೆ ಸದಸ್ಯ ಸಂತೋಷ ಕಡಿವಾಲ ಸೇರಿದಂತೆ ಸಭೆಯಲ್ಲಿದ್ದ ಕೆಲ ಸದಸ್ಯರು ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಪಟ್ಟಣದ ಪುರಸಭೆ ಸಭಾಭವನದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ, ಪಟ್ಟಣದ ವಿವಿದ ವಾರ್ಡಗಳಲ್ಲಿ ನೈರ್ಮಲಿಕರಣಕ್ಕಾಗಿ ಮಿಲಾಥಿನ್ ಪೌಡರ್ ಸಿಂಪಡಣೆ ಮಾಡಲಾಗಿರುವ ಖರ್ಚಿನ ವಿವರವನ್ನು ಮುಖ್ಯಾಧಿಕಾರಿ ರಮೇಶ ಹೊಅಮನಿ ಮಂಡಿಸುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಸದಸ್ಯ ಸಂತೋಷ ಕಡಿವಾಲ, ಪುರಸಭೆಯಲ್ಲಿ 23 ವಾರ್ಡುಗಳಿದ್ದು ಯಾವ ವಾರ್ಡಿನಲ್ಲಿ ಮಿಲಾಥಿನ್ ಪೌಡರ್ ಸಿಂಪಡಣೆ ಮಾಡಿದ್ದಿರಿ, ನಮ್ಮ ಗಮನಕ್ಕೆ ಬಂದೇ ಇಲ್ಲಾ ಮಿಲಾಥಿನ್ ಪೌಡರ್ ಖರೀದಿ ಮಾಡಿದ್ದೇವೆ ಎಂದು ಖರ್ಚು ಹಾಕಲಾಗಿದ್ದು, ಯಾವ ವಾರ್ಡಿನಲ್ಲಿ ಸಿಂಪರಣೆ ಮಾಡಲಾಗಿದೆ ತಿಳಿಸಿ ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೊಡಿಸಿದ ಸದಸ್ಯರಾದ ವಿಜಯಲಕ್ಷ್ಮೀ ಕೊಟಗಿ, ಅಪ್ತಾಬ ಅಹ್ಮದ ತಹಸೀಲ್ದಾರ್, ಶಕುಂತಲಾ ದೇಶಣ್ಣವರ, ಇಲ್ಲಿಯವರೆಗೂ ನಮ್ಮ ವಾರ್ಡುಗಳಲ್ಲಿ ಮಿಲಾಥಿನ್ ಪೌಡರ್ ಸಿಂಪಡಣೆ ಮಾಡಿದ ಬಗ್ಗೆ ನಮಗೆ ಗೊತ್ತಿಲ್ಲ. ಕೇವಲ ಪೌಡರ್ ಖರೀದಿ ಖರ್ಚಿನಲ್ಲಿ ಮಾತ್ರ ಇದೆ ಎಂದು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಪ್ರತಿಯೊಂದು ವಾರ್ಡುಗಳಿಗೆ ಮಿಲಾಥಿನ್ ಪೌಡರ್ ಸಮರ್ಪಕವಾಗಿ ಸಿಂಪಡಣೆ ಮಾಡುವಂತೆ ಆಗ್ರಹಿಸಿದರು. ಸೂಕ್ತ ಕ್ರಮ ಕೈಗೊಂಡು ಎಲ್ಲ ವಾರ್ಡುಗಳಲ್ಲಿ ಪೌಡರ ಸಿಂಪಡಣೆ ಮಾಡುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.ಪಟ್ಟಣದ 14ನೇ ವರ್ಡಿನಲ್ಲಿ ಮೋಟಾರ್ ರಿಪೇರಿಗಾಗಿ ಖರ್ಚು ತೋರಿಸಿದ್ದಿರಿ, ಆದರೆ ಅಲ್ಲಿ ಯಾವುದೇ ರಿಪೇರಿ ಆಗಿಲ್ಲ. ಈ ಹಿಂದೇ ಮೋಟರ್ ಕೆಟ್ಟು ನಿಂತಾಗಲೂ ಸಹ ನಾವೇ ಸ್ವಂತ ಹಣ ಖರ್ಚು ಮಾಡಿ ರಿಪೇರಿ ಮಾಡಿಸಿದ್ದೇವೆ. ನೀವು ಮೋಟರ್ ರಿಪೇರಿ ಮಾಡದೇ ಖರ್ಚು ಯಾಕೆ ಹಾಕಿದ್ದಿರಿ ಎಂದು ಸದಸ್ಯೆ ವಿಜಯಲಕ್ಷ್ಮೀ ಕೊಟಗಿ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನೀರು ಸರಬರಾಜು ಸಿಬ್ಬಂದಿ ಬಸವರಾಜ ಕಿರೇಸೂರ, ಮೋಟರ್ ರಿಪೇರಿಗಾಗಿ ಪಂಪ್ ಹೌಸ್ ನಿಂದ ಹೊರ ತೆಗೆಯಲಾಗಿದ್ದು, ತಾಂತ್ರಿಕ ತೊಂದರೆ ಉಂಟಾಗಿದೆ. ಶೀಘ್ರದಲ್ಲಿಯೇ ರಿಪೇರಿ ಮಾಡಿಸುವುದಾಗಿ ಹೇಳಿದರು.ಸ್ವಾಗತ ಕಮಾನು ನಿರ್ಮಾಣ ಏಕಿಲ್ಲ: ನಾವು ಸದಸ್ಯರಾಗಿ ಆಯ್ಕೆಗೊಂಡಾಗಿನಿಂದ ನಿಮಗೆ ಪಟ್ಟಣದಲ್ಲಿ ಸ್ವಾಗತ ಕಮಾನು ನಿರ್ಮಾಣ ಮಾಡುವಂತೆ ಹೇಳುತ್ತಾ ಬಂದಿದ್ದೇವೆ. ನಮ್ಮ ಅಧಿಕಾರ ಅವಧಿ ಮುಗಿಯುತ್ತಾ ಬಂದರೂ ಇದುವರೆಗೂ ಸ್ವಾಗತ ಕಮಾನು ನಿರ್ಮಾಣಗೊಂಡಿಲ್ಲ. ಪ್ರತಿ ಸಭೆಯಲ್ಲಿ ಠರಾವು ಮಾಡುತ್ತೀರಿ ಆದರೇ ಯೋಜನೆ ಮಾತ್ರ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ, ಸದಸ್ಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಸಹ ಇಲ್ಲವೇ ಎಂದು ಸದಸ್ಯ ಸಂತೋಷ ಕಡಿವಾಲ ಆರೋಪಿಸುತ್ತಿದ್ದಂತೆ. ಇದಕ್ಕೆ ಸಭೆಯಲ್ಲಿದ್ದ ಬಹುತೇಕ ಸದಸ್ಯರು, ಕಮಾನ್ ನಿರ್ಮಾಣ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಈ ಬಾರಿ ಸ್ವಾಗತ ಕಮಾನು ನಿರ್ಮಾಣಕ್ಕೆ ಒತ್ತು ನೀಡಿ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತೆವೆ ಎಂದು ಮುಖ್ಯಾಧಿಕಾರಿ ರಮೇಶ ಹೊಸಮನಿ ಸದಸ್ಯರಿಗೆ ಭರವಸೆ ನೀಡಿದರು.
ಪಟ್ಟಣ ವಿವಿಧ ವಸತಿ ವಿನ್ಯಾಸ ( ಎನ್.ಎ) ಪ್ಲಾಟುಗಳಿಗೆ ಮಂಜೂರಾತಿ ನೀಡುವ ಪೂರ್ವದಲ್ಲಿ ಸಮರ್ಪಕ ದಾಖಲೆಗಳನ್ನು ಸಭೆಗೆ ಹಾಜರು ಪಡಿಸಬೇಕು, ಎನ್.ಎ ಪ್ಲಾಟುಗಳಲ್ಲಿ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆಯೇ ಎಂದು ಪರಿಶೀಲಿಸಿ ಹಾಗೂ ಕೆಲವು ಕಡೆಗಳಲ್ಲಿ ಉದ್ಯಾನವನಗಳಿಗಾಗಿ ಜಾಗೆಯನ್ನು ಬಿಟ್ಟಿರುವುದಿಲ್ಲ ಅವುಗಳನ್ನು ಪರಿಶೀಲಿಸಿ ಉದ್ಯಾನವನ ನಿರ್ಮಾಣಕ್ಕೆ ಜಾಗ ಬಿಟ್ಟಿದ್ದರೇ ಹಾಗೂ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದರೆ ಮಾತ್ರ ಪರವಾನಗಿ ನೀಡಿ ಎಂದು ಸರ್ವ ಸದಸ್ಯರು ಆಗ್ರಹಿಸಿದರು.ವಿವಿಧ ಅನುದಾನದಲ್ಲಿ ಕಾಮಗಾರಿ ಕೈಗೊಂಡು ಬಳಕೆಯಾಗಿ ಉಳಿಕೆಯಾದ ಮೊತ್ತಕ್ಕೆ ನಿಯಮಾನುಸಾರ ತಯಾರಿಸುವ ಕುರಿತು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೋಣ, ರೋಣ ತಾಲೂಕು ನೇಕಾರ ಕುರುಹಿನಶೆಟ್ಟಿ ಸಂಘ ಕಾನೂನು ಮಾಪನ ಶಾಸ್ತ್ರ ರೋಣ, ನೂಲಿನ ಚನ್ನಯ್ಯ ಸಮುದಾಯ ಇವರಿಗೆ ನಾಗರಿಕ ಸೌಲಭ್ಯ ನಿವೇಶನ ಮಂಜೂರಾತಿ ಸೇರಿದಂತೆ ಇತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಉಪಾಧ್ಯಕ್ಷ ಹನಮಂತ ತಳ್ಳಿಕೇರಿ, ಸದಸ್ಯರಾದ ಮಿಥುನ್ ಜಿ. ಪಾಟೀಲ, ಮಲ್ಲಯ್ಯ ಗುರುಬಸಪ್ಪನಮಠ, ಗದಿಗೆಪ್ಪ ಕಿರೇಸೂರ, ಬಾವಾಸಾಬ ಬೆಟಗೇರಿ, ದಾವಲಸಾಬ ಬಾಡಿನ, ವಿದ್ಯಾ ದೊಡ್ಡಮನಿ, ಶಕುಂತಲಾ ದೇಶಣ್ಣವರ, ಚನ್ನಬಸಮ್ಮ ಹಿರೇಮಠ, ಸಂಗಪ್ಪ ಜಿಡ್ಡಿಬಾಗಿಲ, ಜಗದೀಶ ಹಿರೇಮಠ, ಆನಂದ ಚಂಗಳಿ, ಶಕುಂತಲಾ ದೇಶಣ್ಣವರ ಸೇರಿದಂತೆ ಮತ್ತಿತರರು ಇದ್ದರು.