ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರ ಚುನಾವಣಾ ಆಯೋಗವು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ (ಎಸ್ಐಆರ್) ಬಿಎಲ್ಒಗಳಿಗೆ ಹೇರಿರುವ ಒತ್ತಡವನ್ನು ಕಡಿಮೆ ಮಾಡಲು ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದು ನಗರಾಭಿವೃದ್ದಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.ನಗರದ ಕಾಂಗ್ರೆಸ್ ಭವನದಲ್ಲಿ ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯು ಮಂಗಳವಾರ ಆಯೋಜಿಸಿದ್ದ ಎಸ್ಐಆರ್ ಕುರಿತ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಬಿಎಲ್ಒಗಳಿಗೆ ಒಂದು ತಿಂಗಳಿಗೆ 1500 ಮಂದಿಯ ಪರಿಷ್ಕರಣೆ ಮಾಡಬೇಕಿದ್ದು, ದಿನಕ್ಕೆ 50 ಮಂದಿಯ ಪರಿಷ್ಕರಣೆ ಮಾಡಬೇಕೆಂದು ಟಾರ್ಗೆಟ್ ನೀಡಲಾಗಿದೆ. ದಿನವೀಡಿ ಕೆಲಸ ಮಾಡಿದರೂ ಇಷ್ಟು ಮಂದಿಯ ಮತದಾನ ಪಟ್ಟಿ ಪರಿಷ್ಕರಣೆಯನ್ನು ಕೇವಲ ಒಂದು ತಿಂಗಳಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ 1500 ಮಂದಿಯ ಬದಲಿಗೆ 1000 ಮಂದಿಯ ಮತದಾರರ ಪಟ್ಟಿಯನ್ನು ಪರಿಷ್ಕರಣೆಗೊಳಿಸಲು ಸಿಮೀತಗೊಳಿಸಲು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು. ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಬಿಎಲ್ಒಗಳಿಗೆ ಕನಿಷ್ಠ 5 ಮಂದಿ ಸಹಾಯಕರಿದ್ದರೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಬಿಎಲ್ಒಗಳಿಂದ ಮತದಾರರಿಗೆ ನೀಡಲಾಗುವು ಅರ್ಜಿಯನ್ನು ಯಾವುದೇ ಲೋಪವಿಲ್ಲದಂತೆ ಭರ್ತಿ ಮಾಡಿ ಮತ್ತೇ ಸಲ್ಲಿಸಲು ಮತದಾರರಿಗೆ ಪಕ್ಷದ ಕಾರ್ಯಕರ್ತರು ನೆರವಾಗಬೇಕು ಎಂದರು.ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ಮೂಲಕ ಮತದಾರರ ಪಟ್ಟಿಯಲ್ಲಿರುವ ಮತದಾರರ ಹೆಸರನ್ನು ಕೈ ಬಿಡಲು 11 ಕ್ಯಾತೆಗಳನ್ನು ಗುರುತು ಮಾಡಿಕೊಂಡಿದೆ. ಹೆಸರು ವ್ಯತ್ಯಾಸವಾದರೂ ಪಟ್ಟಿಯಿಂದ ಹೆಸರು ಕೈ ಬಿಟ್ಟು ಹೋಗಲಿದೆ. ಹೀಗಾಗಿ, ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದರು.
ಶಾಸಕ ಕೆ. ಹರೀಶ್ ಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮಾಜಿ ಮೇಯರ್ ಗಳಾದ ಪುಷ್ಪಲತಾ ಚಿಕ್ಕಣ್ಣ, ಆರೀಫ್ ಹುಸೇನ್, ಅನಂತ, ಟಿ.ಬಿ. ಚಿಕ್ಕಣ್ಣ, ಮುಖಂಡರಾದ ನಿತಿನ್ ವೆಂಕಟೇಶ್, ಎಂ. ಶಿವಣ್ಣ, ಕೂರ್ಗಳ್ಳಿ ಮಹದೇವು, ಆನಂದ್, ಈಶ್ವರ್ ಚಕ್ಕಡಿ, ಸೋಮಶೇಖರ್, ಮಂಜುನಾಥ್, ಅಶೋಕ್, ರಾಕೇಶ್ ಪಾಪಣ್ಣ ಮೊದಲಾದವರು ಇದ್ದರು.
----
ಕೋಟ್...ಕಾಂಗ್ರೆಸ್ ನೀಡಿರುವ ಮತದಾನದ ಹಕ್ಕನ್ನು ಬಿಜೆಪಿಯು ಎಸ್ಐಆರ್ ಮೂಲಕ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದು, ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಜಾಗೃತರಾಗಿ ಮತದಾರರ ಪಟ್ಟಿಯಿಂದ ಯಾವುದೇ ಹೆಸರನ್ನು ಕೈಬಿಡದಂತೆ ನಿಗಾ ವಹಿಸಬೇಕು.
- ಡಾ. ಯತೀಂದ್ರ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವರು