- 55 ವರ್ಷಗಳಿಂದ ಅರ್ಚಕರ ಸಮಸ್ಯೆ ಪರಿಹಾರಕ್ಕೆ ಸಂಘ ಶ್ರಮ: ರಾಜ್ಯ ಉಪಾಧ್ಯಕ್ಷ ತಿಪ್ಪೇಸ್ವಾಮಿ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘವು 55 ವರ್ಷಗಳಿಂದ ನಿರಂತರವಾಗಿ ಅರ್ಚಕರ ಅನೇಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ ಎಂದು ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಅಗಮಿಕರ ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸಂಘದ ಉಪಾಧ್ಯಕ್ಷ ತಿಪ್ಪೇಸ್ವಾಮಿ ಹೇಳಿದರು.

ಬೆಂಗಳೂರಿನಲ್ಲಿ ಆಗಸ್ಟ್ 5ರಂದು ನಡೆಯಲಿರುವ ರಾಜ್ಯ ಮಟ್ಟದ ಅರ್ಚಕರ, ಆಗಮಿಕರ ಹಾಗೂ ನೌಕರರ ಬೃಹತ್ ಬೃಹತ್ ಸಮಾವೇಶದ ಹಿನ್ನೆಲೆ ಪಟ್ಟಣದ ಹಿರೇಕಲ್ಮಠದ ಕಲ್ಯಾಣ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.


ಬೆಂಗಳೂರಿನ ವಸಂತ ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಆ.5ರಂದು ಜರುಗಲಿರುವ ಮುಜರಾಯಿ ಇಲಾಖೆ ದೇವಾಲಯಗಳ ಅರ್ಚಕರ, ಆಗಮಿಕರ, ನೌಕರರ ಬೃಹತ್ ರಾಜ್ಯ ಸಮಾವೇಶದ ದಿವ್ಯ ಸಾನ್ನಿಧ್ಯವನ್ನು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮೀಜಿ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಅರ್ಚಕರ ಕಣ್ಮಿಣಿ, ಪ್ರಸ್ತುತ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಅಭಿನಂದನಾ ಸಮಾರಂಭವನ್ನು ಕೂಡ ಏರ್ಪಡಿಸಲಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಅರ್ಚಕರ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ, ಹೊನ್ನಾಳಿ ತಾಲೂಕು ಅಧ್ಯಕ್ಷ ಸುಂಕದಕಟ್ಟೆಯ ರಾಜುಸ್ವಾಮಿ, ದಾವಣಗೆರೆ ತಾಲೂಕು ಅಧ್ಯಕ್ಷ, ಜಿಲ್ಲಾ ಸಂಘದ ಕಾರ್ಯದರ್ಶಿ ಎಚ್.ಎಸ್. ಲಕ್ಷ್ಮಿನಾರಾಯಣ, ಖಜಾಂಚಿ ಕೃಷ್ಣ ರಾವ್, ಚನ್ನಗಿರಿ ತಾಲೂಕು ಜೋಳದಹಾಳ್ ಅಮ್ಮನ ಗುಡ್ಡದ ಪ್ರಧಾನ ಆರ್ಚಕ ಸುಬ್ರಹ್ಮಣ್ಯ ಸ್ವಾಮಿ, ಹೊನ್ನಾಳಿ ತಾಲೂಕು ಅರ್ಚಕರ ಸಂಘದ ಕಾರ್ಯದರ್ಶಿ ಎ.ಬಿ.ನಟರಾಜ್, ಸಹ ಕಾರ್ಯದರ್ಶಿ ಹನುಮಂತಾಚಾರ್ ಕೂಲಂಬಿ, ಸದಸ್ಯರಾದ ಹನುಮಂತಯ್ಯ ಹನಗವಾಡಿ, ಸದಾಶಿವ ಕೂಲಂಬಿ ಸೇರಿದಂತೆ ಹಲವಾರು ಅರ್ಚಕರು, ಆಗಮಿಕರು, ನೌಕರರು ಇದ್ದರು.

- - -

-8ಎಚ್.ಎಲ್.ಐ1: ಸಭೆಯಲ್ಲಿ ಅರ್ಚಕರ ಸಂಘದ ರಾಜ್ಯ ಉಪಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿದರು.