ಕನ್ನಡಪ್ರಭ ವಾರ್ತೆ ಮಳವಳ್ಳಿ

ನರೇಗಾ ಯೋಜನೆ ಬದಲಿಗೆ ಹೊಸದಾಗಿ ಸರ್ಕಾರ ಜಾರಿಗೆ ತಂದಿರುವ ಹೊಸ ‘ವಿಬಿ-ಜಿ ರಾಮ್ ಜಿ’ ಯೋಜನೆಯು ಜುಲೈ 1 ರಿಂದ ತಾಲೂಕಿನ ಎಲ್ಲ ಗ್ರಾಪಂಗಳಲ್ಲೂ ಜಾರಿಯಾಗಲಿದೆ ಎಂದು ತಾಪಂ ಇಒ ಎಚ್.ಜಿ.ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ತಾಪಂ ಕಚೇರಿಯಲ್ಲಿ ಸೋಮವಾರ ಅವರು ಮಾತನಾಡಿ, ನರೇಗಾ ಯೋಜನೆಯಲ್ಲಿ ಮರು ರೂಪಿಸಿ ಪ್ರಸ್ತುತ ಜಾರಿಯಾಗುವ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ)- (ವಿಬಿ ಜಿ ರಾಮ್ ಜಿ) ಜಾರಿಗೆ ತರಲಾದ ಈ ಹೊಸ ಕಾಯ್ದೆಯು, ಗ್ರಾಮೀಣ ಕುಟುಂಬಗಳಿಗೆ ವಾರ್ಷಿಕ ಉದ್ಯೋಗ ಖಾತರಿಯನ್ನು 100 ದಿನಗಳ ಬದಲು 125 ದಿನಗಳಿಗೆ ಹೆಚ್ಚಿಸುವ ಮೂಲಕ ಆರ್ಥಿಕ ಭದ್ರತೆ ಬಲಪಡಿಸುತ್ತದೆ ಎಂದರು.

ಈ ಯೋಜನೆಯು ಕೇವಲ ಕೂಲಿ ನೀಡುವುದಕ್ಕೆ ಸೀಮಿತವಾಗದೆ ಜಲ ಭದ್ರತೆ, ಗ್ರಾಮೀಣ ರಸ್ತೆಗಳು ಮತ್ತು ಜೀವನೋಪಾಯಕ್ಕೆ ಅಗತ್ಯ ಗೋದಾಮುಗಳಂತಹ ಶಾಶ್ವತ ಆಸ್ತಿಗಳ ಸೃಜನೆಗೆ ಹೆಚ್ಚಿನ ಒತ್ತು ನೀಡುತ್ತದೆ ಎಂದರು.

ವಿಶೇಷವಾಗಿ ಕೃಷಿ ಬಿತ್ತನೆ ಮತ್ತು ಸುಗ್ಗಿ ಕಾಲದಲ್ಲಿ ರೈತರಿಗೆ ಕಾರ್ಮಿಕರ ಕೊರತೆಯಾಗದಂತೆ ತಡೆಯಲು ವರ್ಷದಲ್ಲಿ ಒಟ್ಟು 60 ದಿನಗಳ ಕಾಲ ಕಾಮಗಾರಿಗಳನ್ನು ಸ್ಥಗಿತಗೊಳಿಸುವ ವಿಶಿಷ್ಟ ಅವಕಾಶವನ್ನು ಇದು ಕಲ್ಪಿಸಿದೆ ಎಂದರು.


ಪಾರದರ್ಶಕತೆಗಾಗಿ ಬಯೋಮೆಟ್ರಿಕ್ ಹಾಜರಾತಿ, ಜಿಪಿಎಸ್ ಮೇಲ್ವಿಚಾರಣೆ ಮತ್ತು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದೆ. 15 ದಿನಗಳಲ್ಲಿ ಉದ್ಯೋಗ ನೀಡದಿದ್ದರೆ ಗ್ರಾಪಂಗಳು ಕಡ್ಡಾಯವಾಗಿ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಈ ಕಾಯ್ದೆ ಆದೇಶಿಸುತ್ತದೆ. ಒಟ್ಟಾರೆಯಾಗಿ ಇದು 2047ರ ವಿಕಸಿತ ಭಾರತದ ಗುರಿಯನ್ನು ತಲುಪಲು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರವು ವೆಚ್ಚಗಳನ್ನು 60:40 ಅನುಪಾತದಲ್ಲಿ ಹಂಚಲಾಗಿದೆ ಮತ್ತು ಬೇಡಿಕೆ ಆಧಾರದ ಮೇಲೆ ಉದ್ಯೋಗ ಒದಗಿಸಲಾಗುತ್ತದೆ. ಪ್ರಸ್ತುತ ದಿನಕ್ಕೆ 370 ರು ವೇತನವನ್ನು ಕೂಲಿಕಾರರಿಗೆ ನೀಡುತ್ತಿದೆ ಎಂದರು.

ಪ್ರಸ್ತುತ ಜಾರಿಯಾಗುವ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) - (ವಿಬಿ ಜಿ ರಾಮ್ ಜಿ) ಕಾಯ್ದೆ-2025 ಕುರಿತು ತಾಲೂಕು ಹಂತದ ಅನುಷ್ಠಾನ ಇಲಾಖೆ ಅಧಿಕಾರಿಗಳಿಗೆ, ತಾಲೂಕಿನ ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ, ಡಿಇಒಗಳಿಗೆ, ಎಲ್ಲಾ ನರೇಗಾ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದರು.