ಕನ್ನಡಪ್ರಭ ವಾರ್ತೆ ಹಾಸನ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಸಂಘಟನೆಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ನಗರದ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ನಡೆದ ಹಾಸನ ತಾಲೂಕು ಘಟಕದ ಸಭೆಯಲ್ಲಿ ಸಂಘಟನೆಯ ವಿಸ್ತರಣೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಮಾಜಮುಖಿ ಚಟುವಟಿಕೆಗಳ ಕುರಿತು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾಸನ ತಾಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಸಂಘಟನಾತ್ಮಕವಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರ ನಿರ್ದೇಶನದಂತೆ ಗ್ರಾಮ, ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಾಯಿಸುವ ಮೂಲಕ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಬೇಕಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮಹಿಳಾ ನಿರ್ದೇಶಕಿಯರಾದ ಅನುಸೂಯ ಕಲ್ಯಾಣ ಕುಮಾರ್‌, ಸುಶೀಲಾ ಪಾಲನೇತ್ರ, ಸವಿತಾ ಭೂಷಣ್ ಹಾಗೂ ಶೈಲಾ ಮದನ್ ಸೇರಿ ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚು ಸದಸ್ಯರನ್ನು ನೋಂದಾಯಿಸಿದ ಮಹಿಳಾ ಪದಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಮತ್ತೊಂದು ಮಹತ್ವದ ನಿರ್ಧಾರವಾಗಿ, ಬಾಳೆಹೊನ್ನೂರಿನ ರಂಭಾಪುರಿ ಮಠದ ಜಗದ್ಗುರುಗಳನ್ನು ಹಾಸನಕ್ಕೆ ಆಹ್ವಾನಿಸಿ ಲಿಂಗಪೂಜೆ, ಲಿಂಗಾಧಾರಣೆ ಸೇರಿ ವಿವಿಧ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.

ಸಮಾಜಸೇವೆಯ ಅಂಗವಾಗಿ ಸ್ಥಳೀಯ ಆಸ್ಪತ್ರೆಗಳ ಸಹಯೋಗದೊಂದಿಗೆ ಹೃದಯ ತಪಾಸಣೆ ಶಿಬಿರ, ಉಚಿತ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸುವ ನಿರ್ಧಾರವನ್ನು ಸಭೆ ಕೈಗೊಂಡಿತು. ಆರೋಗ್ಯ ಸೇವೆಗಳನ್ನು ಸಮಾಜದ ಸಾಮಾನ್ಯ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮಹಾಸಭೆ ಸಕ್ರಿಯ ಪಾತ್ರ ವಹಿಸಲಿದೆ ಎಂದು ತಿಳಿಸಲಾಯಿತು.


ಸಭೆಯಲ್ಲಿ ತಾಲೂಕು ಸಮಿತಿಯ ಉಪಾಧ್ಯಕ್ಷ ಟಿ.ಪಿ. ನಾಗರಾಜ್ ಹಾಗೂ ಲೀಲಾ ಧರ್ಮಪ್ಪ, ಪ್ರಧಾನ ಕಾರ್ಯದರ್ಶಿ ಎಚ್. ವಿ. ಹೇಮಂತ್ ಕುಮಾರ್‌, ಸಹಕಾರ್ಯದರ್ಶಿ ಶೆಟ್ಟಿಹಳ್ಳಿ ಧರ್ಮ, ಚಾಂದಿನಿ ಭೂಷಣ್, ಜಿಲ್ಲಾ ಉಪಾಧ್ಯಕ್ಷೆ ಗೀತಾ ಪುಟ್ಟಸ್ವಾಮಿ, ಜಿಲ್ಲಾ ನಿರ್ದೇಶಕ ಶೋಭನ್ ಬಾಬು, ಎಚ್. ಎನ್. ಶರತ್ ಭೂಷಣ್, ಎಚ್. ವಿಜಯ್ ಕುಮಾರ್, ತಾಲೂಕು ನಿರ್ದೇಶಕ ರಾಜಶೇಖರ್‌ ಮೂರ್ತಿ (ಪಾಪು), ಡಿ.ವಿ. ಮದನ್, ಮಯೂರಿ ಲೋಕೇಶ್, ಸಾವಿತ್ರಿ ವಿಜಯ್ ಕುಮಾರ್, ಸಂಪತ್ ಕುಮಾರ್‌, ಮಲ್ಲಿಗೆ ವಾಳು ಮೋಹನ್ ಕುಮಾರ್‌, ದೇವರಾಜ್, ಬಿ. ದಿವಾಕರ್‌ ಸೇರಿ ಇತರರು ಉಪಸ್ಥಿತರಿದ್ದರು.