ಕುಂದಾಪುರ: ಸೇತುವೆ ಸಹಿತ ಕಿಂಡಿ ಅಣೆಕಟ್ಟು, ಉಪ್ಪು ನೀರಿನ ತಡೆಗಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟುಗಳ ನಿರ್ವಹಣೆಗಾಗಿ ವರ್ಷಕ್ಕೆ ಸರ್ಕಾರ ₹ 20 ಕೋಟಿ ಖರ್ಚು ಮಾಡುತ್ತಿದೆ. 5 ವರ್ಷಕ್ಕೆ ನಿರ್ವಹಣೆಗಾಗಿ ಟೆಂಡರ್ ನೀಡಲಾಗುತ್ತದೆ. ಪ್ರತಿ ವರ್ಷ ಯಾರು ಏನೇನು ಕಾಮಗಾರಿ ಮಾಡಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ತರಿಸಿಕೊಂಡು ಪರಿಶೀಲನೆ ಮಾಡುವ ಮೂಲಕ ಇಲಾಖೆಯಿಂದಲೇ ನಿಗಾ ವಹಿಸಲಾಗುತ್ತಿದೆ‌. ಸ್ಥಳ ಪರಿಶೀಲನೆಯನ್ನೂ ಮಾಡುತ್ತೇವೆ. ತಪ್ಪು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳೇ ಜವಾಬ್ದಾರಿ ಎನ್ನುವ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು.

ಬುಧವಾರ ಕುಂದಾಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಇಲಾಖೆಗೆ ವರ್ಷಕ್ಕೆ ₹50 ಕೋಟಿ ಅಂದರೆ ತಿಂಗಳಿಗೆ ₹4.16 ಕೋಟಿ ಬಿಡುಗಡೆಯಾಗುತ್ತದೆ. ತಡೆಗೋಡೆ ನಿರ್ಮಾಣಕ್ಕೆ ನೂರಾರು ಅರ್ಜಿಗಳು ಬರುತ್ತದೆ. ಹೆಚ್ಚಿನವು ವಿಐಪಿಗಳ ವೈಯಕ್ತಿಕ ಹಿತಾಸಕ್ತಿಯನ್ನೇ ಹೊಂದಿರುತ್ತದೆ. ಎಲ್ಲಿ ಹೆಚ್ಚಿನ ಸಾರ್ವಜನಿಕ ಅವಶ್ಯಕತೆ ಇದೆಯೋ ಅಲ್ಲಿ ಆದ್ಯತೆ ನೆಲೆಯಲ್ಲಿ ಪರಿಗಣಿಸುತ್ತೇವೆ. ಕರಾವಳಿ ಭಾಗದ ನದಿ ಕೊರೆತ ತಡೆಗಟ್ಟುವ ತಡೆಗೋಡೆ ನಿರ್ಮಾಣಕ್ಕೂ ಸಾಧ್ಯವಾದಷ್ಟು ಅನುದಾನ ನೀಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.ನೀರಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಹಾಗೂ ನೀರಿನ ಸಮೃದ್ಧಿ ಹೆಚ್ಚಿಸುವ ನದಿಗಳ ಜೋಡಣೆ ಯೋಜನೆ ಬಗ್ಗೆ ಕೇಂದ್ರ ಸರ್ಕಾರವೇ ಕ್ರಮ ಕೈಗೊಳ್ಳಬೇಕು. ಈಗಾಗಲೇ ಇಲಾಖೆಯಿಂದ ಅನೇಕ ಬಾರಿ ಕೇಂದ್ರ ಜಲಶಕ್ತಿ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ರಾಜ್ಯದ ಯೋಜನೆಗೆ ಅನುದಾನ ಒದಗಿಸುವ ಕುರಿತು ಚರ್ಚಿಸಲಾಗಿದೆ. ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ ಅವರ ಜತೆಗೂಡಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ರಾಜ್ಯಕ್ಕೆ ಅನುದಾನ ನೀಡುವ ಕುರಿತು ಮನವರಿಕೆ ಮಾಡಲಾಗಿದೆ. ರಾಜ್ಯದ ₹3,200 ಕೋಟಿ ಮೊತ್ತದ ಯೋಜನೆಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಈವರೆಗೆ ಯಾವುದೇ ಅನುದಾನವೂ ಬಂದಿಲ್ಲ, ಯಾವ ಯೋಜನೆಗೂ ಮಂಜೂರಾತಿ ದೊರಕಿಲ್ಲ ಎಂದು ಅವರು ತಿಳಿಸಿದರು.ನೀಟ್ - ಯುಜಿ ಪ್ರಶ್ನೆ ಪತ್ರಿಕೆ ಸೋರಿಗೆ ಬಗ್ಗೆ ಪೂರ್ಣ ಮಾಹಿತಿಯಿಲ್ಲ. ಯಾವ ಪ್ರಶ್ನೆ ಪತ್ರಿಕೆಗಳೂ ಸೋರಿಕೆಯಾಗಬಾರದು ಅನ್ನುವ ಬಗ್ಗೆ ಕಟ್ಟುನಿಟ್ಟಿನ ಆದೇಶವಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳೆ ಸೋರಿಕೆಯಾಗದ ಹಾಗೆ ಕ್ರಮ ಕೈಗೊಂಡಿದ್ದೇವೆ. ರಾಜ್ಯದಲ್ಲಿ ಮೊದಲಿದ್ದ ಸಿಇಟಿ ಪದ್ಧತಿಯನ್ನು ಜಾರಿಗೆ ತರಬೇಕೇ ಬೇಡವೆ ಎನ್ನುವ ಕುರಿತು ರಾಜ್ಯ ಸಚಿವ ಸಂಪುಟವೇ ತೀರ್ಮಾನ ಕೈಗೊಳ್ಳಲಿದೆ. ಈ ಕುರಿತು ನನ್ನ ವೈಯಕ್ತಿಕ ಅಭಿಪ್ರಾಯ ಹೇಳಲು ಬರುವುದಿಲ್ಲ. ನಾನು ಏನೇ ಮಾತನಾಡಿದರೂ ಅದು‌ ಸರ್ಕಾರದ ಹೇಳಿಕೆಯಾಗುತ್ತದೆ ಎಂದವರು ತಿಳಿಸಿದರು.