ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮಂಂಗಳವಾರ ಸಂಜೆ 7 ಗಂಟೆಯ ಸುಮಾರಿಗೆ ಈರಪ್ಪ ವಜ್ರವಾಡ ಎಂಬುವವರ ತೋಟದ ಮನೆಯಲ್ಲಿ ಕಟ್ಟಲಾಗಿದ್ದ ಎಮ್ಮೆ ಕರುವಿನ ಮೇಲೆ ಚಿರತೆ ದಾಳಿ ಮಾಡಿದೆ. ಎಮ್ಮೆಕರು ಭಯದಿಂದ ಬೆದರಿ ಒದರಾಡುವುದನ್ನು ಕೇಳಿ ಈರಪ್ಪ ಸ್ಥಳಕ್ಕೆ ಧಾವಿಸಿದ್ದಾರೆ. ಕರುವನ್ನು ಗಾಯಗೊಳಿಸಿ ಚಿರತೆ ಓಡಿ ಹೋಗಿದೆ ಎಂದು ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಚಿರತೆಯ ಹೆಜ್ಜೆಗುರುತು ಹಾಗೂ ಕರುವಿನ ಬೆನ್ನು ಹಾಗೂ ಕಾಲಿನ ಭಾಗದಲ್ಲಿರುವ ಗಾಯದ ಗುರುತು ಪರಿಶೀಲಿಸಿ ಚಿರತೆ ಇರುವುದನ್ನು ಖಚಿತಪಡಿಸಿದ್ದಾರೆ. ಬೊನ್‌ಗಳನ್ನು ಅಳವಡಿಸಿ ಚಿರತೆಯ ಸೆರೆಗೆ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಹಿಪ್ಪರಗಿ ಗ್ರಾಮದ ಹಳಿಪುರಮಠದ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ತೋಟದ ಮನೆಗಳಲ್ಲಿ ವಾಸಿಸುವ ಹತ್ತಾರು ಕುಟುಂಬಗಳು ಆತಂಕದಲ್ಲೇ ರಾತ್ರಿ ಕಳೆದಿವೆ. ಬೇಸಿಗೆ ಕಾಲದಲ್ಲಿ ಸೆಕೆಯ ಕಾರಣ ಕುಟುಂಬದ ಸದಸ್ಯರು ಮನೆಯ ಹೊರಗೆ ಮಲಗುವುದು ಸಾಮಾನ್ಯ. ಆದರೆ ಚಿರತೆಯ ಭಯದಿಂದ ಸಾಕು ಪ್ರಾಣಿಗಳು ಸಮೇತ ಮನೆಯ ಒಳಗೆ ಮಲಗುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದ್ದಾರೆ.

ಚಿರತೆ ಕಾಣಿಸಿಕೊಂಡಿರುವುದರಿಂದ ಮಕ್ಕಳು ಹಾಗೂ ವೃದ್ಧರು, ಮಹಿಳೆಯರು ತೋಟದ ಕೆಲಸಕ್ಕೆ ಹೋಗಲು ಭಯ ಪಡುತ್ತಿದ್ದಾರೆ. ರಾತ್ರಿ ಯುವಕರ ಗುಂಪು ಚಿರತೆ ಕಾಯಲು ತಿರುಗಾಟ ನಡೆಸಿವೆ. ಅರಣ್ಯ ಇಲಾಖೆಯವರು ಕೂಡಲೇ ಕ್ರಮ ಜರುಗಿಸುವಂತೆ ಮನವಿ ಸ್ಥಳೀಯರು ಮನವಿ ಮಾಡಿದ್ದಾರೆ.