ಮಡಿಕೇರಿ: ಕೇಂದ್ರ ಸರ್ಕಾರವು ದೇಶದಲ್ಲಿ ಮುಂಬರುವ ಖರೀದಿ ಋತುವಿನ ಹಿನ್ನಲೆಯಲ್ಲಿ ಮತ್ತು ಪರಿಣಾಮಕಾರಿ ಲಾಜಿಸ್ಟಿಕ್ಸ್ ಮತ್ತು ಸಂಗ್ರಹಣೆಗಾಗಿ ರಾಜ್ಯಗಳು ಎದುರಿಸುತ್ತಿರುವ ಅಡಚಣೆಗಳಿಂದಾಗಿ ಎನ್‌ಎಫ್‌ಎಸ್‌ಎ ಅಡಿಯಲ್ಲಿ ಮೇ ಮತ್ತು ಜೂನ್-2026 ರ ಎರಡು ಮಾಹೆಗಳ ಅಹಾರಧಾನ್ಯ ಹಂಚಿಕೆಯನ್ನು ಮುಂಗಡವಾಗಿ ಎತ್ತುವಳಿ ಮಾಡಿ ಕೂಡಲೇ ವಿತರಣೆ ಮಾಡುವಂತೆ ರಾಜ್ಯಗಳಿಗೆ ಸೂಚಿಸಿದೆ. ಈ ಪ್ರಯುಕ್ತ ಮೇ ಮತ್ತು ಜೂನ್ರ ತಿಂಗಳ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್) ಹಂಚಿಕೆಯನ್ನು ಮೇ ತಿಂಗಳಲ್ಲಿ ವಿತರಿಸಲು ಸರ್ಕಾರವು ನಿರ್ದೇಶನ ನೀಡಿರುತ್ತದೆ.ಪ್ರಯುಕ್ತ ಕೊಡಗು ಜಿಲ್ಲೆಯ ಪ್ರತಿ ಅಂತ್ಯೋದಯ (ಎಎವೈ) ಪಡಿತರ ಚೀಟಿಗೆ 70 ಕೆ.ಜಿ (ಮೇ-35 + ಜೂನ್-35) ಅಕ್ಕಿ ಮತ್ತು ಪಿ.ಹೆಚ್.ಹೆಚ್ (ಬಿಪಿಎಲ್) ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ 10 ಕೆ.ಜಿ (ಮೇ-5 + ಜೂನ್-5) ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ. ಮೇ ಮತ್ತು ಜೂನ್ ತಿಂಗಳ ಆಹಾರಧಾನ್ಯವನ್ನು ಮೇ ತಿಂಗಳಿನಲ್ಲಿ ಒಟ್ಟಿಗೆ ವಿತರಣೆ ಮಾಡಬೇಕಿರುವುದರಿಂದ ವಿತರಣಾ ಸಂದರ್ಭದಲ್ಲಿ ಪ್ರತಿ ಮಾಹೆಯ ವಿತರಣೆಗೆ ಫಲಾನುಭವಿಗಳಿಂದ ಪ್ರತ್ಯೇಕ ಬಯೋ ಮೆಟ್ರಿಕ್ ಪಡೆಯುವ ಅವಕಾಶವನ್ನು ಕಲ್ಪಿಸಿದ್ದು, ಪಡಿತರ ಚೀಟಿ ಫಲಾನುಭವಿಗಳು ಮೇ ಮತ್ತು ಜೂನ್ ತಿಂಗಳ ಬಯೋ ಮೆಟ್ರಿಕ್ ನೀಡಿ ಆಹಾರಧಾನ್ಯವನ್ನು ಪಡೆಯಲು ಜಿಲ್ಲೆಯ ಎಲ್ಲ ಪಡಿತರ ಚೀಟಿದಾರರಿಗೆ ತಿಳಿಸಲಾಗಿದೆ.

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರದ ವತಿಯಿಂದ ವಿತರಿಸಲಾಗುತ್ತಿರುವ ಹೆಚ್ಚುವರಿ 5 ಕೆ.ಜಿ ಆಹಾರಧಾನ್ಯವನ್ನು ಮೇ ಮತ್ತು ಜೂನ್-2026 ರ ತಿಂಗಳ ಹಂಚಿಕೆಯನ್ನು ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಯ ಫಲಾನುಭವಿಗಳಿಗೆ ಈಗಾಗಲೇ ವಿತರಿಸುತ್ತಿರುವ ರೀತಿಯಲ್ಲಿ ಜೂನ್ ತಿಂಗಳಲ್ಲಿ ಎತ್ತುವಳಿ ಮಾಡಿ ವಿತರಿಸಲು ಸರ್ಕಾರವು ನಿರ್ದೇಶಿಸಿದೆ.ಈ ಯೋಜನೆಯಡಿ ವಿತರಿಸಲಾದ ಆಹಾರ ಧಾನ್ಯಗಳನ್ನು ಹಣಕ್ಕಾಗಿ ಪಡಿತರ ಚೀಟಿದಾರರು ಮಾರಾಟ ಮಾಡುವುದಾಗಲಿ ಅಥವಾ ಸಂಗ್ರಹಣೆ ಮಾಡುವುದು ಕಂಡುಬಂದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ವಿತರಿಸಲಾದ ಆಹಾರ ಧಾನ್ಯಗಳಿಗೆ ಮುಕ್ತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ದಂಡ ವಿಧಿಸಲಾಗುವುದು ಮತ್ತು ಈ ಪಡಿತರ ಚೀಟಿಯನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಭೀಮರಾಯ ತಿಳಿಸಿದ್ದಾರೆ.