ಕನ್ನಡಪ್ರಭ ವಾರ್ತೆ ಬೈಲಹೊಂಗಲ

ದಕ್ಷಿಣ ಭಾರತದ ಖ್ಯಾತ ಹತ್ತಿ ಉದ್ಯಮಿಗಳಲ್ಲಿ ಒಬ್ಬರು, ಬಿಜೆಪಿ ಮುಖಂಡ, ಕೆಎಲ್‌ಇ ನಿರ್ದೇಶಕರು ಹಾಗೂ ಇನಾಮದಾರ ಶುಗರ್ಸ್ ನಿರ್ದೇಶಕ ವಿಜಯ ಮೆಟಗುಡ್ಡ ಅವರ 49ನೇ ಜನ್ಮದಿನ ಅಂಗವಾಗಿ ಜು.12ರಂದು ಬೈಲಹೊಂಗಲದಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರದ ಬೈಪಾಸ್ ರಸ್ತೆಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9 ಗಂಟೆಯಿಂದ ಬೃಹತ್ ರಕ್ತದಾನ ಶಿಬಿರ, ನೇತ್ರ ಉಚಿತ ತಪಾಸಣೆ ಹಾಗೂ ಮೋತಿ ಬಿಂದು ಶಸ್ತ್ರಚಿಕಿತ್ಸಾ ಶಿಬಿರ, ಯುವಕರಿಗೆ ಉಚಿತ ಕಲಿಕಾ ಚಾಲನಾ ಪರವಾನಗಿ (ಎಲ್ಎಲ್ಆರ್) ಸೌಲಭ್ಯ, ಪೌರ ಕಾರ್ಮಿಕರಿಗೆ ಸನ್ಮಾನ ಸೇರಿದಂತೆ ಹಲವು ಸೇವಾ ಕಾರ್ಯಕ್ರಮಗಳು ಜರುಗಲಿವೆ.ಮೆಟಗುಡ್ಡ ಕುಟುಂಬವು ಹಲವು ದಶಕಗಳಿಂದ ಬೈಲಹೊಂಗಲದ ರಾಜಕೀಯ, ಸಹಕಾರ, ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದೆ. ದಿವಂಗತ ಎಚ್.ಎಸ್.ಮೆಟಗುಡ್ಡ ಅವರು ಪ್ರಥಮ ಶಾಸಕರಾಗಿ ಹಾಗೂ ಅರ್ಬನ್ ಬ್ಯಾಂಕ್ ಸಂಸ್ಥಾಪಕರಾಗಿ ಹೆಸರು ಮಾಡಿದ್ದರು. ಬಿ.ಟಿ. ಮೆಟಗುಡ್ಡ ಅವರು ಎರಡು ಬಾರಿ ಪುರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, 1972ರಲ್ಲಿ ನೀರು ತಂದುಕೊಟ್ಟು ಸಾಧನೆ ಮತ್ತು 1983ರಲ್ಲಿ ಅತ್ಯುತ್ತಮ ಪುರಸಭೆ ಪ್ರಶಸ್ತಿ ದೊರಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರು 2004ರಿಂದ 2013ರವರೆಗೆ ಎರಡು ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು. ದಿವಂಗತ ಎಂ.ಸಿ.ಮೆಟಗುಡ್ಡ ಅವರು ಸುಮಾರು ಐದು ದಶಕಗಳ ಕಾಲ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ’ಅತ್ಯುತ್ತಮ ಸಹಕಾರಿ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದರು. ಬಾಬಣ್ಣ ಗುರಪ್ಪ ಮೆಟಗುಡ್ಡ ಅವರು ಪುರಸಭೆ ಅಧ್ಯಕ್ಷರು, ಅರ್ಬನ್ ಬ್ಯಾಂಕ್ ನಿರ್ದೇಶಕರು ಹಾಗೂ ಹಲವು ಧಾರ್ಮಿಕ ಸಂಸ್ಥೆಗಳ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದಾರೆ.ಕುಟುಂಬದ ಸೇವಾ ಪರಂಪರೆಯನ್ನು ಮುಂದುವರಿಸಿರುವ ವಿಜಯ ಮೆಟಗುಡ್ಡ ಅವರು ವಿಜಯ ಇಂಡಸ್ಟ್ರೀಸ್ ಮೂಲಕ ವಿದ್ಯಾವಂತ ನಿರುದ್ಯೋಗ ಯುವಕರಿಗೆ ಉದ್ಯೋಗ ಕಲ್ಪಿಸಿ ಅವರ ಬಾಳಿಗೆ ಆಶಾಕಿರಣವಾಗಿದ್ದಾರೆ. ಬಸವ ಸೌಹಾರ್ದ ಸಹಕಾರಿ ನಿಯಮಿತದ ಸಂಸ್ಥಾಪಕರು, ಕೆಎಲ್‌ಇ ನಿರ್ದೇಶಕರು ಹಾಗೂ ಇನಾಮದಾರ ಶುಗರ್ಸ್ ನಿರ್ದೇಶಕರಾಗಿ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಸಮಾಜಮುಖಿ ಚಟುವಟಿಕೆಗಳು ಮತ್ತು ಯುವಜನರಿಗೆ ಪ್ರೋತ್ಸಾಹ ನೀಡುವ ಕಾರ್ಯಗಳ ಮೂಲಕ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.