ಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಲೂಕಿನ ಕಸಬಾ ಹೋಬಳಿಯ ಜೋಡಿತುಂಬಿನಕೆರೆ ಗ್ರಾಮದ ರಿ.ಸ.ನಂ. 7 ಹಾಗೂ 10ರ ಸರ್ಕಾರಿ ಗೋಮಾಳ ಮತ್ತು ಕೆರೆ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವುದನ್ನು ರದ್ಧುಪಡಿಸಿ ಮತ್ತೆ ಸರ್ಕಾರಿ ಗೋಮಾಳವಾಗಿ ದಾಖಲಿಸಬೇಕು ಎಂದು ಒತ್ತಾಯಿಸಿ ವಿವಿಧ ಗ್ರಾಮಗಳ ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಕೀಲ ಬಿಸನಹಳ್ಳಿ ಜಯಣ್ಣ ಮಾತನಾಡಿ, ಸುಮಾರು 65 ಎಕರೆ ವ್ಯಾಪ್ತಿಯ ಈ ಜಮೀನು ಹಲವು ದಶಕಗಳಿಂದ ಜೋಡಿ ತುಂಬಿನಕೆರೆ, ಬೀಸನಹಳ್ಳಿ, ನಾಗರಕಟ್ಟೆ ಹಾಗೂ ಹೇರೂರು ಗ್ರಾಮಗಳ ಸಾವಿರಾರು ಜಾನುವಾರುಗಳಿಗೆ ಮೇಯುವ ಜಾಗ ಹಾಗೂ ಕುಡಿಯುವ ನೀರಿನ ಮೂಲವಾಗಿದ್ದು, ಇಲ್ಲಿ ಅಮೂಲ್ಯ ಈಚಲು ಮರಗಳು, ಔಷಧೀಯ ಸಸ್ಯಗಳು ಹಾಗೂ ವನ್ಯಜೀವಿಗಳ ಆವಾಸವೂ ಆಗಿದೆ.
1935ಕ್ಕೂ ಮುನ್ನ ಹಾಗೂ ನಂತರದ ಹಲವು ದಶಕಗಳವರೆಗೆ ಈ ಜಮೀನು ಕೆರೆ, ಗೋಮಾಳ ಹಾಗೂ ಈಚಲುವನ ಎಂದು ಸರ್ಕಾರಿ ದಾಖಲೆಗಳಲ್ಲಿ ನಮೂದಾಗಿದ್ದು, ಕೆಲ ಪಟ್ಟಭದ್ರ ಭೂಮಾಲೀಕರು ಹಾಗೂ ಮಾಜಿ ಶಾಸಕರು ಅಧಿಕಾರ ಮತ್ತು ಹಣದ ಪ್ರಭಾವ ಬಳಸಿ, ನ್ಯಾಯಾಲಯಗಳಿಗೆ ತಪ್ಪು ಮಾಹಿತಿ ನೀಡಿ ಏಕಪಕ್ಷೀಯ ಆದೇಶಗಳ ಮೂಲಕ ಅಕ್ರಮವಾಗಿ ಖಾತೆ ಮತ್ತು ಮ್ಯುಟೇಷನ್ ಮಾಡಿಸಿಕೊಂಡಿದ್ದಾರೆ.ಅಲ್ಲದೆ ಜಮೀನಿನಲ್ಲಿ ಯಾವುದೇ ಉಳುಮೆ ಮಾಡದಿದ್ದರೂ ದಾಖಲೆಗಳಲ್ಲಿ ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ತೋರಿಸಿ ಡಿಸಿಸಿ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ಗಳಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದು ಸರ್ಕಾರಕ್ಕೂ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿದರು.
ಹೀಗಾಗಿ ಅಕ್ರಮವಾಗಿ ಮಾಡಿಸಿಕೊಂಡಿರುವ ಖಾತೆಗಳನ್ನು ತಕ್ಷಣ ರದ್ದುಪಡಿಸಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಮತ್ತೆ ಸರ್ಕಾರಿ ಗೋಮಾಳವೆಂದು ದಾಖಲಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಗ್ರಾಮಸ್ಥರಾದ ಟಿ ಕೆ ತಿಪ್ಪೇಸ್ವಾಮಿ, ಪ್ರಸನ್ನ, ರಾಜಪ್ಪ, ಅಜ್ಜಾರ್ ಮಲ್ಲಪ್ಪ, ಚಂದಜ್ಜರ ನಾಗರಾಜ್, ಅಜ್ಜಾರ್ ತಿಮ್ಮಪ್ಪ, ಮಲ್ಲಿಕಾರ್ಜುನ, ಚಂದ್ರಪ್ಪ, ರಮೇಶ್, ಗಿರೀಶ್, ಬಸವರಾಜ್, ಶಿವಕುಮಾರ್ ಸೇರಿದಂತೆ ಬೀಸನಹಳ್ಳಿ,ನಾಗರಾಕಟ್ಟೆ ಹಾಗೂ ಹೇರೂರು ಗ್ರಾಮಸ್ಥರು ಇದ್ದರು.