ದಿನೇ ದಿನೇ ಮಲೆನಾಡು ಭಾಗದಲ್ಲಿ ಕಾಫಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಕಾಫಿ ಬೀಜ ಕಳ್ಳತನ ಮಾಡುವ ಕದೀಮರ ಹಾವಳಿ ಹೆಚ್ಚುತ್ತಿರುವುದು ಕಾಫಿ ತೋಟದ ಮಾಲೀಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ತಾಲೂಕಿನ ಯಮಸಂಧಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೋಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ನಂದೀಶ್ ಅವರಿಗೆ ಸೇರಿದ ಕಾಫಿ ತೋಟದ ಕಣದಲ್ಲಿ ಒಣಗಿಸಲು ಇಡಲಾಗಿದ್ದ ಸುಮಾರು 50 ಕೇಜಿ ಕಾಫಿ ಚೀಲವನ್ನು ಕಳ್ಳತನ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರುಕಾಫಿ ಬೀಜ ಕಳ್ಳನನ್ನು ಮಾಲಿನ ಸಮೇತ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.ದಿನೇ ದಿನೇ ಮಲೆನಾಡು ಭಾಗದಲ್ಲಿ ಕಾಫಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಕಾಫಿ ಬೀಜ ಕಳ್ಳತನ ಮಾಡುವ ಕದೀಮರ ಹಾವಳಿ ಹೆಚ್ಚುತ್ತಿರುವುದು ಕಾಫಿ ತೋಟದ ಮಾಲೀಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ತಾಲೂಕಿನ ಯಮಸಂಧಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೋಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ನಂದೀಶ್ ಅವರಿಗೆ ಸೇರಿದ ಕಾಫಿ ತೋಟದ ಕಣದಲ್ಲಿ ಒಣಗಿಸಲು ಇಡಲಾಗಿದ್ದ ಸುಮಾರು 50 ಕೇಜಿ ಕಾಫಿ ಚೀಲವನ್ನು ಕಳ್ಳತನ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಶನಿವಾರ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಅದೇ ಗ್ರಾಮದ ನಿವಾಸಿ ರುದ್ರೇಶ್ ಗೌಡ ಎಂಬುವವರು ಕಾಫಿ ಬೀಜ ಕಳ್ಳತನ ಮಾಡುತ್ತಿರುವುದನ್ನು ಗಮನಿಸಲಾಗಿದೆ. ತೋಟದ ಪಕ್ಕದಲ್ಲೇ ಮಲಗಿದ್ದ ನಂದೀಶ್ ಅವರಿಗೆ ನಾಯಿಗಳ ಬೊಗಳುವ ಶಬ್ದ ಕೇಳಿಸಿಕೊಂಡಿದ್ದು, ಅನುಮಾನಗೊಂಡ ಅವರು ಸ್ಥಳಕ್ಕೆ ತೆರಳಿದಾಗ ಕಾಫಿ ಬೀಜ ಕಳ್ಳತನ ನಡೆಯುತ್ತಿರುವುದು ಗೊತ್ತಾಗಿದೆ. ತಕ್ಷಣವೇ ಗ್ರಾಮಸ್ಥರಿಗೆ ಮಾಹಿತಿ ನೀಡಿದ ಅವರು, ಗ್ರಾಮಸ್ಥರ ಸಹಕಾರದೊಂದಿಗೆ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾದರು. ನಂತರ ಗ್ರಾಮಸ್ಥರು ಕಳ್ಳನನ್ನು ತಳಿಸಿ, ಕಾಫಿ ಬೀಜಗಳ ಮಾಲಿನ ಸಮೇತ ಬೇಲೂರು ಪೊಲೀಸ್ ಠಾಣೆಗೆ ಒಪ್ಪಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.ಈ ಕುರಿತು ಮಾತನಾಡಿದ ತೋಟದ ಮಾಲಿಕ ನಂದೀಶ್ ಅವರು, “ನಮ್ಮ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಅನೇಕ ಕಾಫಿ ಗಿಡಗಳು ಹಾಗೂ ಇತರ ಬೆಳೆಗಳು ನಾಶವಾಗಿವೆ. ಆನೆ ಭಯದಿಂದ ಕೂಲಿ ಕಾರ್ಮಿಕರೂ ಕೆಲಸಕ್ಕೆ ಬರಲು ಹೆದರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಫಿ ಬೀಜಗಳನ್ನು ಹೆಚ್ಚಿನ ಎಚ್ಚರಿಕೆಯಿಂದ ಕುಯ್ಯಿಸಿ, ಮನೆಯ ಹತ್ತಿರವೇ ಕಣದಲ್ಲಿ ಒಣಗಿಸಲಾಗಿತ್ತು. ಇದನ್ನೇ ಗಮನಿಸಿ ಕಳ್ಳತನಕ್ಕೆ ಯತ್ನಿಸಲಾಗಿದೆ,” ಎಂದು ತಿಳಿಸಿದರು.

ಕಳ್ಳತನಕ್ಕೆ ಯತ್ನಿಸಿದ ರುದ್ರೇಶ್ ಗೌಡ ಕೇವಲ ಕಾಫಿ ಬೀಜಗಳನ್ನಷ್ಟೇ ಅಲ್ಲದೆ, ಈ ಹಿಂದೆ ಪೈಪು, ಮೋಟಾರ್ ಸೇರಿದಂತೆ ಇನ್ನಿತರ ವಸ್ತುಗಳ ಕಳ್ಳತನದಲ್ಲೂ ತೊಡಗಿದ್ದಾನೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಫಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕಾಫಿ ತೋಟದ ಮಾಲೀಕರು ಭಯಭೀತರಾಗಿದ್ದಾರೆ ಎಂದು ತಿಳಿಸಿದ ನಂದೀಶ್, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅನಿಲ್, ಸುರೇಶ್, ಸುಪ್ರೀತ್, ವಿನಯ್, ಅಶ್ವಥ್ ಇತರರು ಹಾಜರಿದ್ದರು.