ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಜಾಪ್ರಭುತ್ವದಲ್ಲಿ ಯಾರು, ಯಾರನ್ನು ಬೇಕಾದರೂ ಭೇಟಿ ಮಾಡಿ ಮತ ಕೇಳುವ ಅವಕಾಶಗಳಿವೆ. ಆದರೆ, ತಮ್ಮನ್ನು ಬೆದರಿಸಲು ರಾಜ್ಯ ಸರ್ಕಾರ ದುರುದ್ದೇಶಪೂರ್ವಕವಾಗಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಪ್ರಕರಣ ದಾಖಲಿಸಿದೆ ಎಂದು ಜೆಡಿಎಸ್ ನಾಯಕ ಕುಪೇಂದ್ರ ರೆಡ್ಡಿ ಆರೋಪಿಸಿದ್ದಾರೆ.
ಶನಿವಾರ ನಗರದಲ್ಲಿ ಮಾತನಾಡಿದ ಅವರು, ವಾಸ್ತವವಾಗಿ ಚುನಾವಣೆಗೆ ಸಂಬಂಧಪಟ್ಟಂತೆ ಯಾವುದೇ ತಕರಾರುಗಳಿದ್ದರೂ ಅದನ್ನು ಆಯೋಗಕ್ಕೆ ಲಿಖಿತವಾಗಿ ದೂರಿನ ಮೂಲಕ ಸಲ್ಲಿಸಬೇಕು.
ಆಯೋಗವು ಪೊಲೀಸ್ ಆಯುಕ್ತರಿಗೆ ದೂರನ್ನು ರವಾನಿಸುತ್ತದೆ. ಆಯುಕ್ತರು ಪರಿಶೀಲನೆ ನಡೆಸಿ ಮೇಲ್ನೋಟಕ್ಕೆ ಸತ್ಯಾಂಶ ಕಂಡುಬಂದರೆ ಮ್ಯಾಜಿಸ್ಟ್ರೇಟ್ ಅವರ ಅನುಮತಿ ಪಡೆದು ಪ್ರಕರಣ ದಾಖಲಿಸಬೇಕು. ಆದರೆ ಇಲ್ಲಿ ಏಕಾಏಕಿ ಶಾಸಕರು ದೂರು ನೀಡಿದ್ದಾರೆ.
ಇದು ಸಂಪೂರ್ಣ ನಿಯಮಬಾಹಿರವಾಗಿದೆ. ಈ ನಿಟ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ನನ್ನನ್ನು ಬೆದರಿಸುವ ಸಲುವಾಗಿಯೇ ಪ್ರಕರಣ ದಾಖಲಿಸಲಾಗಿದೆ.
ಒಮ್ಮೆ ರಾಜ್ಯಸಭಾ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ನೆಲದ ಕಾನೂನಿನ ಅರಿವು ನನಗೂ ಇದೆ. ಇಂತಹ ಬೆದರಿಕೆಯ ತಂತ್ರಗಳಿಗೆ ಬಗ್ಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಮತ ಕೇಳಲು ಎಲ್ಲರಿಗೂ ಅವಕಾಶಗಳಿವೆ ಎಂದರು.