ಮೂಲ್ಕಿ: ಹಳೆಯ ಬಟ್ಟೆ, ಹರಿದ ಚಪ್ಪಲಿ, ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮಾಡುವುದು ಸ್ಥಳೀಯ ಸಂಸ್ಥೆಗಳಿಗೆ ತ್ರಾಸದಾಯಕ. ಈ ನಿಟ್ಟಿನಲ್ಲಿ ಕೆಮ್ರಾಲ್ನಲ್ಲಿ ಒಣತ್ಯಾಜ್ಯ ಬಳಸಿ ಕೈಗಾರಿಕೆಗಳ ಬಾಯ್ಲರ್ಗಳಿಗೆ ಇಂಧನ ಒದಗಿಸುವ ರಾಜ್ಯದ ಮೊದಲ ಪೆಲ್ಲೆಟ್ ತಯಾರಿ ಘಟಕ ಆರಂಭಗೊಂಡಿದ್ದು ತ್ಯಾಜ್ಯ ನಿರ್ವಹಣೆಗೆ ಬಲ ಬಂದಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿ.ಪಂ, ಮೂಲ್ಕಿ ತಾ.ಪಂ. ಹಾಗೂ ಕೆಮ್ರಾಲ್ ಗ್ರಾ.ಪಂ. ಸಹಯೋಗದಲ್ಲಿ 48 ಲಕ್ಷ ರು. ವೆಚ್ಚದಲ್ಲಿ ಯೋಜನೆ ಜಾರಿಯಾಗಿದ್ದು ಜೂನ್ನಿಂದ ಘಟಕ ಆರಂಭಗೊಂಡಿದೆ. ಬಟ್ಟೆ, ಹಳೆಯ ಚಪ್ಪಲಿ, ಏಕಬಳಕೆ ಪ್ಲಾಸ್ಟಿಕ್, ಮುಂತಾದ ವಿವಿಧ ಒಣ ತ್ಯಾಜ್ಯಗಳು ಈಗ ಕೈಗಾರಿಕೆಗಳ ಬ್ರಾಯ್ಲರ್ಗಳಿಗೆ ಇಂಧನವಾಗಿ ಬಳಸುವ ಪೆಲ್ಲೆಟ್ ಗಳಾಗಿ ಪರಿವರ್ತನೆಯಾಗುತ್ತಿವೆ. ಮೊದಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ, ಮನೆಗಳಿಂದ ಸಂಗ್ರಹಿಸಿದ ಒಣತ್ಯಾಜ್ಯ, ಗ್ರಾಮಮಟ್ಟದ ಸಾಲಿಡ್ ವೇಸ್ಟ್ ಮ್ಯಾನೇಜ್ ಮೆಂಟ್ ಘಟಕ ಸೇರುತ್ತದೆ. ಅಲ್ಲಿಂದ ಈ ತ್ಯಾಜ್ಯವನ್ನು ಜಿಲ್ಲೆಯ ಎಂಆರ್ಎಫ್ ಕೇಂದ್ರಗಳಿಗೆ ಸಾಗಿಸಲಾಗುತ್ತದೆ. ಎಂಆರ್ಎಫ್ ಘಟಕಗಳಲ್ಲಿ ಈ ತ್ಯಾಜ್ಯವನ್ನು 17-18 ವಿಭಾಗಗಳಾಗಿ ವಿಂಗಡಿಸಿ, ಅದರಲ್ಲಿ ಮರುಬಳಕೆಗೆ ಸಾಧ್ಯವಾಗದ ತ್ಯಾಜ್ಯವನ್ನು ಕೆಮ್ರಾಲ್ ಘಟಕಕ್ಕೆ ತರಲಾಗುತ್ತದೆ. ಆ ತ್ಯಾಜ್ಯವನ್ನು ಯಂತ್ರಗಳ ಸಹಾಯದಿಂದ ಪುಡಿ ಮಾಡಿ ಒತ್ತಡದ ಮೂಲಕ ಸಣ್ಣ ಸಿಲಿಂಡರ್ ಆಕಾರದ ಪೆಲೆಟ್ಗಳಾಗಿ ರೂಪಿಸಲಾಗುತ್ತದೆ.
ತ್ಯಾಜ್ಯ ಕೆಜಿಗೆ 5ರು.: ಕೆಮ್ರಾಲ್ ಘಟಕದಲ್ಲಿ ತಯಾರಾಗುವ ಪೆಲೆಟ್ಗಳು ಹೆಚ್ಚಿನ ಕ್ಯಾಲೊರಿಫಿಕ್ ಮೌಲ್ಯ ಹೊಂದಿದ್ದು, ಇದನ್ನು ಕೈಗಾರಿಕೆಗಳ ಬಾಯ್ಲರ್ಗಳಲ್ಲಿ ಕಲ್ಲಿದ್ದಲಿಗೆ ಪರ್ಯಾಯವಾಗಿ ಬಳಸಲಾಗುತ್ತಿದೆ. ಪ್ರಸ್ತುತ ಪುಣೆ ಮೂಲದ ಖಾಸಗಿ ಸಂಸ್ಥೆ ಈ ಪೆಲೆಟ್ಗಳನ್ನು ಪ್ರತಿ ಕೆಜಿಗೆ 5 ರು. ದರದಲ್ಲಿ ಖರೀದಿಸುತ್ತಿದ್ದು, ಪ್ರಾಯೋಗಿಕ ಹಂತದಲ್ಲಿ ಪ್ರತಿ ದಿನ 2 ಟನ್ ಸಾಮರ್ಥ್ಯ, ತಿಂಗಳಿಗೆ ಸುಮಾರು 50 ಟನ್ ಉತ್ಪಾದನೆ ನಡೆಸಲು ಯೋಜನೆ ರೂಪಿಸಲಾಗಿದೆ. ದಿನಕ್ಕೆ 31 ಟನ್ ಗುರಿ; ದ.ಕ.ಜಿಲ್ಲೆಯ ಎಡಪದವು, ಉಜಿರೆ, ಕೆದಂಬಾಡಿ ಮತ್ತು ನರಿಕೊಂಬು ಸೇರಿದಂತೆ ವಿವಿಧ ಎಂಆರ್ ಎಫ್ ಘಟಕಗಳಿಂದ ಪ್ರತಿದಿನ ಸುಮಾರು 31 ಟನ್ ಒಣ ತ್ಯಾಜ್ಯ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಪ್ರಸ್ತುತ 23 ಟನ್ ತ್ಯಾಜ್ಯ ಸಂಗ್ರಹವಾಗಿ ನಿರ್ವಹಣೆ, ಮಾಡಲಾಗುತ್ತಿದೆ.ಹೊರ ಜಿಲ್ಲೆಗೆ ಸಾಗಾಟಕ್ಕೆ ಇನ್ನು ಅವಕಾಶವಿಲ್ಲ: ಈ ಹಿಂದೆ ಜಿಲ್ಲೆಯ ಎಂಆರ್.ಎಫ್ ಘಟಕಗಳಲ್ಲಿ ಸಂಗ್ರಹವಾಗುತ್ತಿದ್ದ ತ್ಯಾಜ್ಯವನ್ನು 550 ಕಿ.ಮೀ. ದೂರದ ಬೆಳಗಾವಿಯ ಸಿಮೆಂಟ್ ಉತ್ಪಾದನಾ ಕಾರ್ಖಾನೆಗೆ ಉರುವಲಾಗಿ ಬಳಸಲು ಸಾಗಿಸಲಾಗುತ್ತಿತ್ತು. ಒಂದು ಲೋಡ್ ಸಾಗಾಟಕ್ಕೆ ಸುಮಾರು 48 ಸಾವಿರ ರೂ. ವೆಚ್ಚವಾಗುತ್ತಿದ್ದು, ಪ್ರತೀ ಕೆಜಿಗೆ 2.25ರಿಂದ 3 ರೂ. ವರೆಗೆ ಖರ್ಚಾಗುತ್ತಿದ್ದು ಇದೀಗ ಯೋಜನೆಯಿಂದ ಸಾಗಾಟ ವೆಚ್ಚ ಉಳಿತಾಯವಾಗಿದೆ.
ಹಳೆಯ ಕಟ್ಟಡದಲ್ಲಿ ಘಟಕ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ತದ ತಂಡ ಪುಣೆಯಲ್ಲಿನ ಪೆಲ್ಲೆಟ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ, ಅದರ ಯಶಸ್ಸಿನ ಆಧಾರದ ಮೇಲೆ ಈ ಯೋಜನೆಯನ್ನು ಕೆಮ್ರಾಲ್ ನಲ್ಲಿ ಜಾರಿಗೆ ತರಲಾಗಿದೆ. ಮೂಲ್ಕಿ ಮೂಡುಬಿದಿರೆ ಹಾಗೂ ಮಂಗಳೂರು ತಾಲೂಕುಗಳಿಗೆ ತಲಾ 16 ಲ.ರೂ. ಅನುದಾನದಂತೆ ಒಟ್ಟು 48 ಲ.ರೂ. ವೆಚ್ಚದಲ್ಲಿ ಯಂತ್ರೋಪಕರಣ ಅಳವಡಿಸಲಾಗಿದೆ. ಕೆಮ್ರಾಲ್ನಲ್ಲಿದ್ದ -ಹಳೆಯ ಒಣ ತ್ಯಾಜ್ಯ ವಿಲೇವಾರಿ ಘಟಕದ ಕಟ್ಟಡವನ್ನೇ ನವೀಕರಿಸಿ ಈ ಘಟಕ ಆರಂಭಿಸಲಾಗಿದೆ.ನಿರ್ವಹಣೆ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್ ಆರ್ ಎಂ ಎಲ್)ಅಡಿ ಸಂಘಟಿಸಲಾದ ಕೋರ್ದಬ್ಬು-ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟಕ್ಕೆ ಘಟಕ ನಿರ್ವಹಣೆಯ ಜವಾಬ್ದಾರಿ ನೀಡಿದ್ದು, ಆರಂಭದಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರಿಗೆ ಉದ್ಯೋಗ ನೀಡಲಾಗಿದೆ.((ಕೋಟ್) ರಾಜ್ಯದಲ್ಲಿ ಮೊದಲ ಬಾರಿಗೆ ಆರಂಭವಾಗಿರುವ ಕೆಮ್ರಾಲ್ನ ಈ ಇಂಧನ ಪೆಲ್ಲೆಟ್ ಉತ್ಪಾದನಾ ಕೇಂದ್ರ, ತ್ಯಾಜ್ಯ ವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ ಜಿಲ್ಲೆಯ ವಿನೂತನ ಪ್ರಯತ್ನವಾಗಿದೆ. ಮುಂದಿನ ದಿನಗಳಲ್ಲಿ ಮೂರು ಕಡೆಗಳಲ್ಲಿ ಇಂತಹ ಉತ್ಪಾದನ ಕೇಂದ್ರ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ.-ನರ್ವಾಡೆ ವಿನಾಯಕ ಕಾರ್ಬಾರಿ ದ.ಕ. ಜಿಲ್ಲಾ ಪಂಚಾಯಿತಿ ಸಿಇಒ