ಕಾಡಾನೆಗಳ ಹಿಂಡು ಅಡಕೆ ತೋಟಕ್ಕೆ ದಾಳಿ ಮಾಡಿ ಅಡಕೆ ಗಿಡಗಳನ್ನು ನಾಶ ಪಡಿಸಿದ ಘಟನೆ ನೆಲ್ಯಹುದೀಕೇರಿ ಗ್ರಾಮದಲ್ಲಿ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕಾಡಾನೆಗಳ ಹಿಂಡು ಅಡಕೆ ತೋಟಕ್ಕೆ ದಾಳಿ ಮಾಡಿ ಅಡಕೆ ಗಿಡಗಳನ್ನು ನಾಶ ಪಡಿಸಿದ ಘಟನೆ ನೆಲ್ಯಹುದೀಕೇರಿ ಗ್ರಾಮದಲ್ಲಿ ಸಂಭವಿಸಿದೆ.

ಗ್ರಾಮದ ಸಿರಾಜೆ ಎಸ್ಟೇಟ್‌ ಮಾಲೀಕ ಚಂದ್ರಶೇಖರ್ ಅವರ ತೋಟಕ್ಕೆ ಶನಿವಾರ ರಾತ್ರಿ ಹತ್ತಕ್ಕೂ ಅಧಿಕ ಕಾಡಾನೆಗಳು ಅಡಕೆ ತೋಟಕ್ಕೆ ನುಗ್ಗಿ ದಾಂಧಲೆ ಮಾಡಿದ್ದು, 50ಕ್ಕೂ ಅಧಿಕ ಅಡಕೆ ಗಿಡಗಳನ್ನು ನಾಶಪಡಿಸಿವೆ. ಇದರಿಂದ ಅಪಾರ ಬೆಳೆ ನಷ್ಟ ಉಂಟಾಗಿದೆ.

ಈ ಕುರಿತು ಮಾಹಿತಿ ನೀಡಿದ ತೋಟದ ಮಾಲೀಕರ ಮಗ ಮೋಹನ್ ಗೌಡ, ಕಾಡಾನೆಗಳ ದಾಂಧಲೆಯಿಂದ ಅಪಾರ ನಷ್ಟ ಉಂಟಾಗಿದೆ. ಕಳೆದ ಐದಾರು ವರ್ಷಗಳಿಂದ ಈ ಭಾಗದಲ್ಲಿ ಕಾಡಾನೆಗಳು ನಿರಂತರವಾಗಿ ತೋಟಗಳಿಗೆ ಲಗ್ಗೆ ಇಟ್ಟು ಬೆಳೆ ನಾಶ ಪಡಿಸುತ್ತಿವೆ. ಕಳೆದ ವರ್ಷವೂ ಕಾಡಾನೆ ದಾಳಿಯಿಂದ ಬೆಳೆ ನಷ್ಟವಾಗಿದ್ದು, ಪರಿಹಾರಕ್ಕೆ ಅರ್ಜಿ ಸಲ್ಲಿಸಿ ಯಾವುದೇ ಪರಿಹಾರ ದೊರೆತಿಲ್ಲ ಎಂದು ಹೇಳಿದರು.

ಫಸಲಿನ ನಷ್ಟದಿಂದ ಈ ಭಾಗದ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು. ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಬೆಳೆ ನಷ್ಟ ಪರಿಹಾರ ಕೊಡಿಸಬೇಕಾಗಿ ಆಗ್ರಹಿಸಿದರು.