ಕನ್ನಡಪ್ರಭ ವಾರ್ತೆ ದಾವಣಗೆರೆ
ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಮತ್ತು ಶಿಸ್ತು ಕುರಿತಂತೆ ನಿರ್ಧಾರ ಕೈಗೊಳ್ಳುವ ಅಧಿಕಾರ ಆಯಾ ಎಸ್ಡಿಎಂಸಿ, ಸಂಬಂಧಿಸಿದ ಸಂಸ್ಥೆಗಳ ಸಮಿತಿಗಿದ್ದರೂ ಹಿಜಾಬ್ ಧರಿಸಲು ಅನುಮತಿ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಶ್ರೀರಾಮ ಸೇನೆ ಜಿಲ್ಲಾ ಘಟಕ ನಗರದಲ್ಲಿ ಶುಕ್ರವಾರ ಸಾಂಕೇತಿಕ ಪ್ರತಿಭಟನೆ ನಡೆಸಿತು.ನಗರದ ಜಿಲ್ಲಾಡಳಿತ ಭವನದಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದ ಶ್ರೀರಾಮ ಸೇನೆ ಜಿಲ್ಲಾ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ಗೆ ಅನುಮತಿ ನೀಡಿರುವ ಸರ್ಕಾರದ ಆದೇಶ ಹಿಂಪಡೆಯುವಂತೆ ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಸಂಘಟನೆ ಮುಖಂಡರು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಈಚೆಗೆ ಹಿಜಾಬ್ಗೆ ಅನುಮತಿ ನೀಡುವ ಬಗ್ಗೆ ವ್ಯಕ್ತಪಡಿಸಿದ ನಿಲುವನ್ನು ತೀವ್ರವಾಗಿ ವಿರೋಧಿಸುತ್ತೇವೆ. ಹೈಕೋರ್ಟ್ 2022ರಲ್ಲಿ ಹಿಜಾಬ್ ಸಮವಸ್ತ್ರದ ಅವಿಭಾಜ್ಯ ಭಾಗವಲ್ಲವೆಂದ ಸ್ಪಷ್ಟ ತೀರ್ಪು ನೀಡಿರುವ ವಿಚಾರ ಪ್ರತಿಯೊಬ್ಬರಿಗೂ ಗೊತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಹಿಜಾಬ್ಗೆ ಅನುಮತಿ ನೀಡಿರುವುದು ನ್ಯಾಯಾಂಗದ ತೀರ್ಪಿನ ವಿರುದ್ಧವಾಗಿದೆ ಎಂದರು.ಶಾಲಾ-ಕಾಲೇಜುಗಳ ಸಮವಸ್ತ್ರ ಮತ್ತು ಶಿಸ್ತು ಕುರಿತಂತೆ ನಿರ್ಧಾರ ಕೈಗೊಳ್ಳುವ ಅಧಿಕಾರ ಆಯಾ ಎಸ್ಡಿಎಂಸಿ ಹಾಗೂ ಸಂಬಂಧಿಸಿದ ಸಂಸ್ಥೆಗಳ ಸಮಿತಿಗಳಿಗೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ಇಂತಹ ನಿಲುವು ಎಸ್ಡಿಎಂಸಿ, ಕಾಲೇಜುಗಳ ಸಮಿತಿಗಳ ಹಕ್ಕನ್ನೇ ಕಸಿದುಕೊಂಡಂತಾಗಿದೆ. ಕೇವಲ ಮುಸ್ಲಿಂ ತುಷ್ಟೀಕರಣದ ರಾಜಕೀಯ ಉದ್ದೇಶದಿಂದಲೇ ಹಿಜಾಬ್ಗೆ ಅನುಮತಿ ನೀಡುವ ಪ್ರಯತ್ನ ನಡೆದಿದೆಯೇ ಎಂಬ ಅನುಮಾನ ಜನರಿಗೆ ಕಾಡುತ್ತಿದೆ ಎಂದರು.
ದಿವಂಗತ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ವಿದ್ಯಾರ್ಥಿಗಳಲ್ಲಿ ಜಾತಿ, ಆರ್ಥಿಕ ಬೇಧಭಾವ ಕಾಣಿಸಬಾರದೆಂಬ ಸದುದ್ದೇಶದಿಂದ ಸಮವಸ್ತ್ರ ವ್ಯವಸ್ಥೆ ಜಾರಿಗೆ ತಂದಿದ್ದರು. ಸಮವಸ್ತ್ರದ ಮೂಲ ಉದ್ದೇಶಲ ಎಲ್ಲಾ ವಿದ್ಯಾರ್ಥಿಗಳಲ್ಲಿ ಸಮಾನತೆ ಮತ್ತು ಏಕತೆ ತರುವುದಾಗಿದೆ. ಈಗ ಕೆಲ ವಲಯಗಳು ಶಿವದಾರ, ಜನಿವಾರ, ರುದ್ರಾಕ್ಷಿ ಮತ್ತಿತರೆಗಳನ್ನು ಹಿಜಾಬ್ ವಿಚಾರಕ್ಕೆ ಅನಾವಶ್ಯಕವಾಗಿ ಜೋಡಿಸಿ, ಹಿಂದು ಸಮಾಜದ ದಿಕ್ಕನ್ನೇ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.
ಶಿವಧಾರ, ಜನಿವಾರ, ರುದ್ರಾಕ್ಷಿ ಇತ್ಯಾದಿಗಳು ಬಟ್ಟೆಯ ಒಳ ಭಾಗದಲ್ಲಿ ಧರಿಸುವಂತಹ ವೈಯಕ್ತಿಕ ನಂಬಿಕೆ, ಆಚರಣೆಗಳಾಗಿವೆ. ಅವುಗಳಿಗೆ ಸಮವಸ್ತ್ರದ ಹೊರಾಂಗಣ ನಿಯಮಗಳಿಗೆ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲ. ಶ್ರೀ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು, ಹಿಜಾಬ್ಗೆ ಅನುಮತಿ ನೀಡುವ ಯಾವುದೇ ಕ್ರಮ ಕೈಗೊಳ್ಳಬಾರದು. ಸರ್ಕಾರ ಹಿಜಾಬ್ ಕುರಿತಂತೆ ಹೊರಡಿಸಿದ ಸುತ್ತೋಲೆ ಹಿಂಪಡೆಯಲಿ ಎಂದು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಮಣಿ ಸರ್ಕಾರ್, ಪ್ರಧಾನ ಕಾರ್ಯದರ್ಶಿ ಪಿ.ಸಾಗರ್, ಶ್ರೀಧರ್, ಆಲೂರು ರಾಜಶೇಖರ, ಶ್ರೀಧರ ಕಮ್ಮಾಸ್, ಶಿವಕುಮಾರ ಪೂಜಾರ, ರಾಜು ದೊಡ್ಡಮನಿ, ವಿನೋದ ರಾಜ್, ಮಧು, ಮಂಜುನಾಥ, ರಾಘು, ಪಳನಿ, ಯಶವಂತ, ಅವಿನಾಶ, ಶ್ರೀಕಾಂತ, ಶಶಿ, ಸುನಿಲ್, ರುದ್ರೇಶ, ಚಂದ್ರು, ಅರುಣ, ಎಂ.ಪ್ರವೀಣ, ಬೀರೇಶ ನಂದಿಹಳ್ಳಿ, ಆರ್.ಪರಶುರಾಮ ಇತರರು ಇದ್ದರು.