ಧಾರವಾಡ:
ಕುಟುಂಬದ ನೋವು ನುಂಗಿ ನಲಿವು ತೋರಿಸುವ ಪ್ರತಿ ಮಹಿಳೆ ಸಮಾಜದ ಪ್ರತಿಬಿಂಬವಾಗಿದ್ದಾಳೆ. ಮಹಿಳೆಯ ಸಾಧನೆ ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ. ಕುಟುಂಬಕ್ಕೆ ಸಂಸ್ಕಾರ, ವಾತ್ಸಲ್ಯ, ಆರೋಗ್ಯ ನೀಡುವ ಕೇಂದ್ರಬಿಂದು ಆಗಿದ್ದಾಳೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ರಾಯಮಾನೆ ಹೇಳಿದರು.ಕರ್ನಾಟಕ ವಿವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾಡಳಿತವು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿದ ಅವರು, ಮಹಿಳೆಯರ ಸಶಕ್ತಿಕರಣ ಮತ್ತು ಆರ್ಥಿಕ ಸಬಲೀಕರಣ ಕುಟುಂಬದ ಭದ್ರತೆ ಹೆಚ್ಚಿಸುತ್ತದೆ. ಅನೇಕ ಸಂದರ್ಭಗಳಲ್ಲಿ ಮಹಿಳೆ ತಾಗ್ಯ ಮನೋಭಾವದಿಂದ, ನಿಸ್ವಾರ್ಥದಿಂದ ದುಡಿಯುತ್ತಾಳೆ. ಅವಳ ದುಡಿಮೆಗೆ ಗೌರವ ನೀಡುವುದು ನಮ್ಮ ಕರ್ತವ್ಯ ಎಂದರು.
ಪುರುಷರ ಪ್ರೋತ್ಸಾಹ ಮತ್ತು ಸಮಾನತೆಯ ಮನೊಭಾವ ಹೆಚ್ಚುತ್ತಿರುವುದರಿಂದ ಮಹಿಳೆಯರು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಸಹ ಮುನ್ನುಗ್ಗುತ್ತಿದ್ದಾರೆ. ಸರ್ಕಾರಗಳು ಮಹಿಳಾ ಸಬಲೀಕರಣ ಮತ್ತು ಅಭಿವೃದ್ಧಿಗಾಗಿ ಅನೇಕ ಕಾನೂನು, ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳ ಸಮರ್ಪಕ ಅನುಷ್ಠಾನ ಮತ್ತು ಮಹಿಳೆಯ ಸಕ್ರಿಯ ಪಾಲ್ಗೊಳ್ಳುವಿಕೆಯು ಸಮಾಜದ ಘನತೆಯನ್ನು ಹೆಚ್ಚಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಜಿಲ್ಲಾ ನ್ಯಾಯಾಧೀಶರಾದ ಸುವರ್ಣಾ ಕೆ.ಮಿರ್ಜಿ ಮಾತನಾಡಿ, ಸ್ವಾತಂತ್ರ್ಯಕ್ಕೂ ಮೊದಲು ಮಹಿಳೆಯರಿಗೆ ಸಮಾನ ಅವಕಾಶಗಳು ಕಡಿಮೆ ಇದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಅವರು ಶಿಕ್ಷಣ, ಉದ್ಯೋಗ, ಆಡಳಿತ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿಯೂ ದೊಡ್ಡ ಬದಲಾವಣೆ ಕಂಡು ಬರುತ್ತಿದೆ. ಹಿಂದಿನ ಕಾಲದಲ್ಲಿ ಮನೆ ಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದ ಮಹಿಳೆಯರು ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡು ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಮಹಿಳೆಯರು ಮನೆ ಜವಾಬ್ದಾರಿಗಳ ಜತೆಗೆ ಕಚೇರಿ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಅಧಿಕಾರಿಗಳಾದ ಅಕ್ಕಮಹಾದೇವಿ ಕೆ.ಎಚ್., ವಿಜಯಲಕ್ಷ್ಮೀ ಪಾಟೀಲ, ಉಮಾ ಬಳ್ಳೊಳ್ಳಿ, ಸುನೀತಾ ಪಾಟೀಲ, ಮಂಜುನಾಥ ಕುಂಬಾರ, ವಿದ್ಯಾ ಬಡಿಗೇರ, ಗಾಯತ್ರಿ ಪಾಟೀಲ, ಅತೀಕಾ ಸಿದ್ದಕ್ಕಿ ಇದ್ದರು. ಡಾ. ಎಚ್.ಎಚ್. ಕುಕನೂರ ಪ್ರಾಸ್ತಾವಿಕ ಮಾತನಾಡಿದರು. ಸುಮಿತಾ ನಾಡಗೇರ ಕಾರ್ಯಕ್ರಮ ನಿರೂಪಿಸಿದರು. ಡಾ. ಕಮಲಾ ಬೈಲೂರ ವಂದಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ್ ಎಫ್. ದೊಡ್ಡಮನಿ ಮಾತನಾಡಿದರು.