ಸಾರಾಂಶ
ಕಟ್ಟಡ ಕಾರ್ಮಿಕರು ತಲೆಗೆ ಹೆಲ್ಮೇಟ್, ಕಾಲಿಗೆ ಬೂಟ್, ಗ್ಲೌಸ್, ಮಾಸ್ಕ್, ಗಾರ್ಗಲ್ಸ್ ಹಾಗೂ ಎತ್ತರದಲ್ಲಿ ನಿಂತು ಕೆಲಸ ಮಾಡುವಾಗ ಸೇಫ್ಟಿ ಬೆಲ್ಟ್ಗಳನ್ನು ಧರಿಸಿಕೊಂಡೇ ಕೆಲಸ ಮಾಡಬೇಕು. ಇದರಿಂದ ಆಕಸ್ಮಿಕವಾಗಿ ಸಂಭವಿಸಬಹುದಾದ ಅನಾಹುತಗಳಿಂದ ರಕ್ಷಣೆ ಪಡೆಯಬಹುದು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಒತ್ತಡದಲ್ಲಿ ಕೆಲಸ ಮಾಡುವಾಗ ಅನಾಹುತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಕಾರ್ಮಿಕರು ಅಗತ್ಯ ಸುರಕ್ಷಾ ಸಾಧನಗಳನ್ನು ಬಳಸಿಕೊಂಡು ಕೆಲಸ ಮಾಡಬೇಕು ಎಂದು ಕಾರ್ಮಿಕ ಇಲಾಖೆ ಅಧಿಕಾರಿ ಸುಭಾಷ್ ಸಲಹೆ ನೀಡಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಪ್ರಭೂಧಿತ ಸರ್ವೀಸಸ್ ಇಂಡಿಯಾ ಮೈಸೂರು ವತಿಯಿಂದ ಆಯೋಜಿಸಿದ್ದ ಕಟ್ಟಡ ಕಾರ್ಮಿಕರಿಗೆ ಪೂರ್ವ ಕಲಿಕಾ ತರಬೇತಿ ಶಿಬಿರದ ಉದ್ಘಾಟಿಸಿ ಮಾತನಾಡಿದರು.
ಕಟ್ಟಡ ಕಾರ್ಮಿಕರು ತಲೆಗೆ ಹೆಲ್ಮೇಟ್, ಕಾಲಿಗೆ ಬೂಟ್, ಗ್ಲೌಸ್, ಮಾಸ್ಕ್, ಗಾರ್ಗಲ್ಸ್ ಹಾಗೂ ಎತ್ತರದಲ್ಲಿ ನಿಂತು ಕೆಲಸ ಮಾಡುವಾಗ ಸೇಫ್ಟಿ ಬೆಲ್ಟ್ಗಳನ್ನು ಧರಿಸಿಕೊಂಡೇ ಕೆಲಸ ಮಾಡಬೇಕು. ಇದರಿಂದ ಆಕಸ್ಮಿಕವಾಗಿ ಸಂಭವಿಸಬಹುದಾದ ಅನಾಹುತಗಳಿಂದ ರಕ್ಷಣೆ ಪಡೆಯಬಹುದು ಎಂದರು.ಸಣ್ಣ-ಪುಟ್ಟ ಸಮಸ್ಯೆಯಾದರೂ ದುಡಿಯುವ ಕೈಗೆ ಕೆಲಸವಿಲ್ಲದೆ ಕುಟುಂಬದ ಸದಸ್ಯರು ಬೀದಿ ಪಾಲಾಗಬೇಕಾಗುತ್ತದೆ. ಕೆಲಸ ಮಾಡುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೆಲಸದ ವೇಳೆ ಮದ್ಯಪಾನ ಮಾಡುವುದು, ಬೀಡಿ, ಸಿಗರೇಟ್ ಸೇದುವುದು, ಗುಟ್ಕಗಳನ್ನು ಬಳಸಬಾರದು. ಕೆಲವೊಮ್ಮೆ ಈ ದುಶ್ಚಟಗಳಿಂದ ತಲೆ ಸುತ್ತು ಬಂದು ಅಪಾಯ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದರು.
ಪ್ರಭೂಧಿತ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶರತ್ ಮಾತನಾಡಿ, ಕಾರ್ಮಿಕರು ಅಗತ್ಯ ಸುರಕ್ಷತೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ತರಬೇತಿ ಶಿಬಿರದಲ್ಲಿ ಕಾರ್ಮಿಕರಿಗೆ ಕಾಮಗಾರಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಪಾಸಾದ ಕಾರ್ಮಿಕರಿಗೆ ಸರ್ಕಾರ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಕಿಟ್ ಅನ್ನು ಉಚಿತವಾಗಿ ನೀಡಲಿದೆ ಎಂದರು.ಈ ವೇಳೆ ಕಾರ್ಮಿಕ ನಿರೀಕ್ಷಕರಾದ ಅಮರಾವತಿ, ಗಂಗಾಧರ್, ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಶಾಂತ್, ನಿರ್ದೇಶಕ ಶಾಂತರಾಜು, ಕಾರ್ಮಿಕ ಇಲಾಖೆಯ ರೂಪ ಇತರರು ಇದ್ದರು.