ಸಾರಾಂಶ
ಐಎಂಜೆ ಯಂಗ್ ಲೀಡರ್ ಅವಾರ್ಡ್ 2025 ಸ್ಪರ್ಧೆ ಆಯೋಜಿಸಲಾಯಿತು. ಸಾಮಾಜಿಕ ಕಾರ್ಯಕರ್ತ ರಮಣಗೌಡ ಬಿ. ಪಾಟೀಲ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಮೂಡ್ಲಕಟ್ಟೆ ಐ.ಎಂ.ಜೆ. ಇನ್ಸ್ಟಿಟ್ಯೂಶನ್ ನಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತ ಸ್ಪರ್ಧಾತ್ಮಕ ಜಗತ್ತಿಗೆ ಯುವನಾಯಕರನ್ನು ರೂಪಿಸುವ ನಿಟ್ಟಿನಲ್ಲಿ ಹಾಗೂ ಯುವ ನಾಯಕತ್ವದ ಮಹತ್ವ, ಅರಿವು ಮೂಡಿಸುವ ಉದ್ದೇಶದಿಂದ ಐ.ಎಂ.ಜೆ. ಯಂಗ್ ಲೀಡರ್ ಅವಾರ್ಡ್ - 2025 ಸ್ಪರ್ಧೆಯನ್ನು ಆಯೋಜಿಸಲಾಯಿತು.ಸ್ಪರ್ಧೆಯನ್ನು ಉದ್ಘಾಟಿಸಿದ ಹಾವೇರಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ರಮಣಗೌಡ ಬಿ. ಪಾಟೀಲ್ ಅವರು ಮಾತನಾಡಿ, ನಿಜವಾದ ನಾಯಕನಾದವನು ತನ್ನ ಜೊತೆಗಿರುವವರನ್ನು ಪ್ರೋತ್ಸಾಹಿಸುವ ಗುಣ ಹೊಂದಿರಬೇಕು. ಒಳ್ಳೆ ವಿದ್ಯಾಭ್ಯಾಸ ಪಡೆದು ತಂದೆತಾಯಿ ಗುರುಗಳಿಗೆ ಕೀರ್ತಿ ತಂದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗೌರವ ಅತಿಥಿಯಾಗಿದ್ದ ಬಿದ್ಕಲ್ಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಮುಖ್ಯೋಪಾಧ್ಯಾಯ ವಿಘ್ನೇಶ್ವರ ಭಟ್ ಅವರು, ಒಳ್ಳೆಯ ನಾಯಕನಾಗಬೇಕಿದ್ದರೆ ಮುಂದೆ ಗುರಿ ಇರಬೇಕು, ಹಿಂದೆ ಒಬ್ಬ ಗುರು ಇರಬೇಕು, ಹಾಗೆ ಅದಕ್ಕೆ ಪೂರಕವಾಗಿ ಸಾಧಿಸುವ ಛಲ ಹಾಗೂ ಪ್ರಯತ್ನ ಇರಬೇಕು, ಈ ನಿಟ್ಟಿನಲ್ಲಿ ತಾವೆಲ್ಲರೂ ಉತ್ತಮ ನಾಯಕರಾಗುವಲ್ಲಿ ಪ್ರಯತ್ನಿಸಿ ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.ಐ.ಎಂ.ಜೆ ಇನ್ಸ್ಟಿಟ್ಯೂಷನ್ ನ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗ್ಡೆ ಅವರು ಕಾರ್ಯಕ್ರಮದ ಮುಖ್ಯ ಉದ್ದೇಶದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಡಾಟಾ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ. ಕಾರ್ತಿಕೇಯನ್ ಅವರು ಕಾಲೇಜಿನ ರೂಪುರೇಷೆಗಳ ಬಗ್ಗೆ ತಿಳಿಸಿದರು. ವಿವಿಧ ಕಾಲೇಜಿನ ಸ್ಪರ್ಧಾಳು, ಸಿಬ್ಬಂದಿ ವರ್ಗ, ಪೋಷಕರು ಉಪಸ್ಥಿತರಿದ್ದರು.
ಎಂ.ಬಿ.ಎ. ವಿದ್ಯಾರ್ಥಿನಿ ಸಹರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೆಹ್ವಿಶ್ ಖಾನ್ ಸ್ವಾಗತಿಸಿದರು. ಎಂ.ಬಿ.ಎ. ವಿದ್ಯಾರ್ಥಿನಿ ಪ್ರತೀಕ ಶೆಟ್ಟಿ ವಂದಿಸಿದರು.