ಸಾರಾಂಶ
ಬೆಳಗಾವಿ : ಯುವಕರು ಉದ್ಯೋಗಕ್ಕಾಗಿ ಕಾಯದೆ ಸ್ವತಃ ಉದ್ಯಮ ಸ್ಥಾಪಿಸಿ ಹತ್ತಾರು ಯುವಕರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಆಶೀರ್ವಾದ ಇಂಡಸ್ಟ್ರೀಸ್ ವತಿಯಿಂದ ಚನ್ನಮ್ಮನ ಕಿತ್ತೂರಿನಲ್ಲಿ ಆರಂಭಿಸಿರುವ ಬೆಲ್ ಮಿಕ್ಸ್ ಫುಡ್ ಪ್ರೊಡಕ್ಟ್ ನಗರದಲ್ಲಿ ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂದು ಹಲವರು ಕಷ್ಟಪಟ್ಟು ಓದಿ ಕೆಲಸ ಹುಡುಕುತ್ತ ಕುಳಿತುಕೊಳ್ಳುತ್ತಾರೆ. ಇದಕ್ಕೆ ಅಪವಾದ ಎಂಬಂತೆ ಎಂಜಿನಿಯರಿಂಗ್ ಪದವೀಧರರಾದ ನವೀನ್ ಮೆಳವೆಂಕಿ ಮತ್ತು ಸುಮನ್ ಮೋದಿ ಉದ್ಯೋಗಕ್ಕಾಗಿ ಕಾಯದೆ ಸ್ವತಃ ಉದ್ಯಮ ಆರಂಭಿಸಿ ಹತ್ತಾರು ಯುವಕರಿಗೆ ಉದ್ಯೋಗ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಉದ್ಯಮಿ ವಿಜಯ ಸಂಕೇಶ್ವರ ಖಾಲಿ ಕೈಯಲ್ಲಿ ಮನೆಯಿಂದ ಹೊರಬಂದು ಇಂದು ರಾಷ್ಟ್ರಮಟ್ಟದ ಉದ್ಯಮಿಯಾಗಿ ಬೆಳೆದಿದ್ದಾರೆ. ಸಾರಿಗೆ, ಪತ್ರಿಕೋದ್ಯಮ ಸೇರಿದಂತೆ ಹಲವು ರಂಗಗಳಲ್ಲಿ ಸಾಧನೆ ಮಾಡಿದ್ದಾರೆ. ಅಂತಹ ವ್ಯಕ್ತಿಗಳು ಸಮಾಜಕ್ಕೆ ಆದರ್ಶವಾಗಿದ್ದಾರೆ. ಈಗ ಆರಂಭಿಸಿರುವ ಉದ್ಯಮ ಯಶಸ್ವಿಯಾಗಲಿ, ಸಾವಿರಾರು ಜನರಿಗೆ ಉದ್ಯೋಗ ದೊರೆಯಲಿ ಎಂದು ಸಚಿವರು ಹಾರೈಸಿದರು.
ಈ ವೇಳೆ ಯುವ ಉದ್ಯಮಿಗಳಾದ ನವೀನ್ ಮೆಳವಂಕಿ, ಸುಮನ್ ಮೋದಿ, ಶಾಸಕ ಬಾಬಾಸಾಹೇಬ ಪಾಟೀಲ, ಡಾ.ಗುರುದೇವಿ ಹುಲೆಪ್ಪನವರಮಠ, ಜ್ಯೋತಿ ಭಾವಿಕಟ್ಟಿ, ದಿಗ್ವಿಜಯ ಎಸ್. ಸಿದ್ನಾಳ, ಮೆಳವಂಕಿ ಮತ್ತು ಮೋದಿ ಕುಟುಂಬಸ್ಥರು ಉಪಸ್ಥಿತರಿದ್ದರು.