ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಬಿಎ ವ್ಯಾಪ್ತಿಯ ಪಾಲಿಕೆ ಶಾಲೆಗಳ ಶೇ.88.85ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮೂವರು ವಿದ್ಯಾರ್ಥಿನಿಯರು 600ಕ್ಕೂ ಹೆಚ್ಚು ಅಂಕ ಪಡೆದು ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.
ಬೆಂಗಳೂರು : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಬಿಎ ವ್ಯಾಪ್ತಿಯ ಪಾಲಿಕೆ ಶಾಲೆಗಳ ಶೇ.88.85ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮೂವರು ವಿದ್ಯಾರ್ಥಿನಿಯರು 600ಕ್ಕೂ ಹೆಚ್ಚು ಅಂಕ ಪಡೆದು ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.
ಜಿಬಿಎ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ 34 ಪ್ರೌಢಶಾಲೆಗಳ 2,063 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 1,833 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ 106 ವಿದ್ಯಾರ್ಥಿಗಳು ಶೇ.85 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.
ಪಶ್ಚಿಮ ನಗರ ಪಾಲಿಕೆಯ ಬಸವನಗುಡಿ, ಸುಬ್ರಮಣ್ಯನಗರ, ಮಾರಪ್ಪನಪಾಳ್ಯ, ಕೇಂದ್ರ ನಗರ ಪಾಲಿಕೆಯ ಕಾಟನ್ ಪೇಟೆ, ಶಾಂತಿನಗರ ಮತ್ತು ಉತ್ತರ ನಗರ ಪಾಲಿಕೆಯ ಮತ್ತಿಕೆರೆ ಪ್ರೌಢಶಾಲೆಗಳು ಶೇ.100 ರಷ್ಟು ಫಲಿತಾಂಶ ದಾಖಲಿಸಿ ಅಗ್ರಸ್ಥಾನ ಪಡೆದು ಪಾಲಿಕೆಗೆ ಕೀರ್ತಿ ತಂದಿವೆ.
ಮೂವರಿಗೆ 600 ಕ್ಕೂ ಹೆಚ್ಚು ಅಂಕ:
ಪಶ್ಚಿಮ ನಗರ ಪಾಲಿಕೆಯ ಬೈರವೇಶ್ವರನಗರ ಪ್ರೌಢಶಾಲೆಯ ವಿದ್ಯಾರ್ಥಿನಿ ಗಾನಶ್ರೀ ಎಸ್ 625 ಕ್ಕೆ 611 ಅಂಕ ಪಡೆದು ಶೇ.97.76 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಉತ್ತರ ನಗರ ಪಾಲಿಕೆಯ ಗಂಗಾನಗರ ಪ್ರೌಢಶಾಲೆಯ ವಿದ್ಯಾರ್ಥಿನಿ ಜಾರಾ ಫಾತಿಮಾ 625 ಕ್ಕೆ 610 ಅಂಕಗಳನ್ನು ಪಡೆದು (ಶೇ.97.60) ದ್ವಿತೀಯ ಸ್ಥಾನ ಹಾಗೂ ಪಶ್ಚಿಮ ನಗರ ಪಾಲಿಕೆಯ ಹೇರೋಹಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿನಿ ಲಾವಣ್ಯ ಎ 625 ಕ್ಕೆ 605 ಅಂಕಗಳನ್ನು ಪಡೆದು (ಶೇ. 96.80) ತೃತೀಯ ಸ್ಥಾನ ಪಡೆದಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಭಿನಂದನೆ ತಿಳಿಸಿದ್ದಾರೆ.
25 ಸಾವಿರ ರು. ಪ್ರೋತ್ಸಾಹಧನ
ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 106 ವಿದ್ಯಾರ್ಥಿಗಳಿಗೆ ಪಾಲಿಕೆಯ ವತಿಯಿಂದ ತಲಾ 25 ಸಾವಿರ ರು. ಪ್ರೋತ್ಸಾಹಧನ ನೀಡಿ ಗೌರವಿಸಲಾಗುವುದು ಎಂದು ಜಿಬಿಎ ಶಿಕ್ಷಣ ಇಲಾಖೆ ತಿಳಿಸಿದೆ.

