ಕೌಲಾಲಂಪುರ: ಕಿರಿಯರ ಹಾಕಿ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ 12 ಪೆನಾಲ್ಟಿ ಕಾರ್ನರ್‌ಗಳನ್ನು ವ್ಯರ್ಥಗೊಳಿಸಿದ ಭಾರತ 1-4 ಗೋಲುಗಳ ಸೋಲು ಕಂಡು ನಿರಾಸೆ ಅನುಭವಿಸಿದೆ. ಗುರುವಾರದ ಪಂದ್ಯದಲ್ಲಿ ಅತ್ಯುತ್ತಮ ಎನ್ನುವಂತೆ ಆಡದಿದ್ದರೂ, ಉತ್ತಮ್‌ ಸಿಂಗ್‌ ಪಡೆ ಮಾಡಿದ ತಪ್ಪುಗಳು ಜರ್ಮನಿ ಸುಲಭವಾಗಿ ಗೆಲ್ಲುವಂತೆ ಮಾಡಿದವು.

6 ಬಾರಿ ಚಾಂಪಿಯನ್‌, ಕಳೆದ ಬಾರಿಯ ರನ್ನರ್‌-ಅಪ್‌ ಜರ್ಮನಿ ಇಡೀ ಪಂದ್ಯಕ್ಕೆ ಪಡೆದಿದ್ದು ಕೇವಲ 2 ಪೆನಾಲ್ಟಿ ಕಾರ್ನರ್‌ಗಳನ್ನು. ಎರಡರಲ್ಲೂ ಗೋಲು ಬಾರಿಸಿ, ಭಾರತದ ಮೇಲೆ ಸವಾರಿ ಮಾಡಿತು. ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.4 ನೆದರ್‌ಲೆಂಡ್ಸ್‌ ವಿರುದ್ಧ ಆಕರ್ಷಕ ಆಟವಾಡಿ ಗೆದ್ದಿದ್ದ ಭಾರತ, ಜರ್ಮನಿ ವಿರುದ್ಧ ಮಂಕಾಯಿತು. 8ನೇ ನಿಮಿಷದಲ್ಲಿ ಹ್ಯಾಶ್‌ಬಾಕ್‌ ಬೆನ್‌ ಗೋಲು ಬಾರಿಸಿ ಜರ್ಮನಿಗೆ ಮುನ್ನಡೆ ಒದಗಿಸಿದರು. 11ನೇ ನಿಮಿಷದಲ್ಲಿ ಚಿರ್ಮಾಕೋ ಸುದೀಪ್‌ ಭಾರತ ಸಮಬಲ ಸಾಧಿಸಲು ನೆರವಾದರು. ಆದರೆ 30, 41, 58ನೇ ನಿಮಿಷಗಳಲ್ಲಿ ಜರ್ಮನಿ ಗೋಲು ಬಾರಿಸಿ, ಗೆಲುವು ಭಾರತದ ಕೈಗೆಟುಕದಂತೆ ನೋಡಿಕೊಂಡಿತು. ನಾಳೆ ಕಂಚಿಗಾಗಿ ಸ್ಪೇನ್‌ ವಿರುದ್ಧ ಭಾರತ ಸೆಣಸು2ನೇ ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ 3-1 ಗೋಲುಗಳಲ್ಲಿ ಸ್ಪೇನ್‌ ವಿರುದ್ಧ ಗೆಲುವು ಸಾಧಿಸಿ ಫೈನಲ್‌ಗೇರಿತು. ಶನಿವಾರ ಭಾರತ ಹಾಗೂ ಸ್ಪೇನ್‌ ತಂಡಗಳು ಕಂಚಿನ ಪದಕಕ್ಕಾಗಿ ಸೆಣಸಲಿವೆ. ಫೈನಲಲ್ಲಿ ಜರ್ಮನಿ ಹಾಗೂ ಫ್ರಾನ್ಸ್‌ ಮುಖಾಮುಖಿಯಾಗಲಿವೆ.