ಏಕದಿನಕ್ಕಿನ್ನು ರೋಹಿತ್ ಶರ್ಮಾ ಅಲ್ಲ, ಗಿಲ್‌ ನಾಯಕ: ಕೊಹ್ಲಿಗೆ ತಂಡದಲ್ಲಿ ಸ್ಥಾನ

| Published : Oct 05 2025, 01:00 AM IST

ಏಕದಿನಕ್ಕಿನ್ನು ರೋಹಿತ್ ಶರ್ಮಾ ಅಲ್ಲ, ಗಿಲ್‌ ನಾಯಕ: ಕೊಹ್ಲಿಗೆ ತಂಡದಲ್ಲಿ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ರೋಹಿತ್‌ರನ್ನು ಕೆಳಗಿಳಿಸುವ ಮೂಲಕ 2027ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಶುಭ್‌ಮನ್‌ ಗಿಲ್ ನಾಯಕತ್ವದಲ್ಲೇ ಆಡಲಿದೆ ಎಂದ ಸಂದೇಶ ರವಾನಿಸಲಾಗಿದೆ.

ಅಹಮದಾಬಾದ್‌: ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತ ಏಕದಿನ ಕ್ರಿಕೆಟ್‌ ತಂಡದ ನಾಯಕತ್ವದಿಂದ ರೋಹಿತ್‌ ಶರ್ಮಾರನ್ನು ಕೆಳಗಿಳಿಸಲಾಗಿದ್ದು, ಯುವ ಆಟಗಾರ ಶುಭ್‌ಮನ್‌ ಗಿಲ್‌ಗೆ ಹೊಣೆಗಾರಿಕೆ ನೀಡಲಾಗಿದೆ. ಈ ಮೂಲಕ 2027ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಗಿಲ್ ನಾಯಕತ್ವದಲ್ಲೇ ಆಡಲಿದೆ ಎಂದ ಸಂದೇಶ ರವಾನಿಸಲಾಗಿದೆ.ಅ.19ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧ ಏಕದಿನ, ಟಿ20 ಸರಣಿಗೆ ಶನಿವಾರ ಭಾರತ ತಂಡ ಪ್ರಕಟಿಸಲಾಯಿತು. ಅಂ.ರಾ. ಟಿ20 ಹಾಗೂ ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ್ದರಿಂದ ಕೆಲ ಸಮಯದಿಂದ ಕ್ರಿಕೆಟ್‌ನಿಂದಲೇ ದೂರ ಉಳಿದಿರುವ ರೋಹಿತ್‌ ಹಾಗೂ ವಿರಾಟ್‌ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಗಿಲ್‌ ನಾಯಕನಾಗಿ ಆಯ್ಕೆಯಾಗಿದ್ದು, ಶ್ರೇಯಸ್‌ ಅಯ್ಯರ್‌ಗೆ ಉಪನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ಕಾರ್ಯದೊತ್ತಡ ಕಾರಣಕ್ಕೆ ವೇಗಿ ಬೂಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಯಶಸ್ವಿ ಜೈಸ್ವಾಲ್‌ ತಂಡಕ್ಕೆ ಮರಳಿದ್ದು, ರವೀಂದ್ರ ಜಡೇಜಾ, ಮೊಹಮ್ಮದ್‌ ಶಮಿಗೆ ಸ್ಥಾನ ಲಭಿಸಿಲ್ಲ. ಗಾಯಾಳುಗಳಾದ ಹಾರ್ದಿಕ್‌, ರಿಷಭ್‌ ಕೂಡಾ ಸರಣಿಗೆ ಲಭ್ಯರಿಲ್ಲ. ಕನ್ನಡಿಗ ಕೆ.ಎಲ್‌.ರಾಹುಲ್‌ ವಿಕೆಟ್‌ ಕೀಪರ್‌ ಆಗಿ ಆಡಲಿದ್ದು, ಧ್ರುವ್‌ ಜುರೆಲ್‌ ಕೂಡಾ ತಂಡದಲ್ಲಿದ್ದಾರೆ. ಟಿ20 ಸರಣಿಗೂ ತಂಡ ಪ್ರಕಟಿಸಲಾಗಿದ್ದು, ದೊಡ್ಡ ಬದಲಾವಣೆ ಏನೂ ಆಗಿಲ್ಲ. ಸೂರ್ಯಕುಮಾರ್‌ ನಾಯಕರಾಗಿರಲಿದ್ದು, ಗಿಲ್‌ ಉಪನಾಯಕತ್ವ ವಹಿಸಲಿದ್ದಾರೆ.ಆಸ್ಟ್ರೇಲಿಯಾದಲ್ಲಿ ಸರಣಿ ನಡೆಯಲಿದ್ದು, ಮೊದಲ ಏಕದಿನ ಪಂದ್ಯ ಅ.19, 2ನೇ ಪಂದ್ಯ ಅ.23, 3ನೇ ಪಂದ್ಯ ಅ.25ಕ್ಕೆ ನಿಗದಿಯಾಗಿವೆ. 5 ಟಿ20 ಪಂದ್ಯಗಳು ಕ್ರಮವಾಗಿ ಅ.29, ಅ.31, ನ.2, ನ.6 ಹಾಗೂ ನ.8ರಂದು ನಡೆಯಲಿವೆ.ಏಕದಿನ ತಂಡ: ಗಿಲ್‌(ನಾಯಕ), ರೋಹಿತ್‌, ವಿರಾಟ್‌, ಶ್ರೇಯಸ್‌(ಉಪನಾಯಕ), ಅಕ್ಷರ್‌, ಕೆ.ಎಲ್‌.ರಾಹುಲ್‌, ನಿತೀಶ್‌ ಕುಮಾರ್‌, ವಾಷಿಂಗ್ಟನ್‌ ಸುಂದರ್‌, ಕುಲ್ದೀಪ್‌, ಹರ್ಷಿತ್‌ ರಾಣಾ, ಮೊಹಮ್ಮದ್‌ ಸಿರಾಜ್‌, ಅರ್ಶ್‌ದೀಪ್‌ ಸಿಂಗ್‌, ಪ್ರಸಿದ್ಧ್‌ ಕೃಷ್ಣ, ಧ್ರುವ್‌ ಜುರೆಲ್‌, ಯಶಸ್ವಿ ಜೈಸ್ವಾಲ್‌.ಟಿ20 ತಂಡ: ಸೂರ್ಯಕುಮಾರ್(ನಾಯಕ), ಅಭಿಷೇಕ್‌, ಗಿಲ್‌(ಉಪನಾಯಕ), ತಿಲಕ್‌, ನಿತೀಶ್‌, ಶಿವಂ ದುಬೆ, ಅಕ್ಷರ್‌, ಜಿತೇಶ್‌ ಶರ್ಮಾ, ವರುಣ್‌ ಚಕ್ರವರ್ತಿ, ಬೂಮ್ರಾ, ಅರ್ಶ್‌ದೀಪ್‌, ಕುಲ್ದೀಪ್‌, ಹರ್ಷಿತ್‌, ಸಂಜು ಸ್ಯಾಮ್ಸನ್‌, ರಿಂಕು ಸಿಂಗ್‌, ವಾಷಿಂಗ್ಟನ್‌ ಸುಂದರ್‌.

ರೋಹಿತ್‌ ನಾಯಕತ್ವದ ಯುಗಾಂತ್ಯ!

ಈಗಾಗಲೇ ಅಂ.ರಾ. ಟಿ20, ಟೆಸ್ಟ್‌ಗೆ ನಿವೃತ್ತಿ ಘೋಷಿಸಿರುವುದರಿಂದ ರೋಹಿತ್‌ ಶರ್ಮಾರ ನಾಯಕತ್ವ ಯುಗಾಂತ್ಯ ಕಂಡಿದೇ ಎಂದೇ ವಿಶ್ಲೇಷಿಸಲಾಗುತ್ತಿದೆ. ಅವರಿಗೆ ಇನ್ನು ಏಕದಿನದಲ್ಲೂ ನಾಯಕರಾಗುವ ಅವಕಾಶ ಇಲ್ಲ. ಈವರೆಗೂ ಭಾರತ ರೋಹಿತ್‌ ನಾಯಕತ್ವದಲ್ಲಿ ಆಡಿದ 56 ಏಕದಿನದಲ್ಲಿ 42ರಲ್ಲಿ ಗೆದ್ದಿದೆ. 2 ಬಾರಿ ಏಷ್ಯಾಕಪ್‌, 1 ಬಾರಿ ಚಾಂಪಿಯನ್ಸ್‌ ಟ್ರೋಫಿಯನ್ನೂ ಗೆಲ್ಲಿಸಿಕೊಟ್ಟಿದ್ದಾರೆ. ಅವರ ನಾಯಕತ್ವದ ದಾಖಲೆ ಉತ್ತಮವಾಗಿದ್ದರೂ, 2027ರ ಏಕದಿನ ವಿಶ್ವಕಪ್‌ ದೃಷ್ಟಿಯಲ್ಲಿಟ್ಟುಕೊಂಡು ಈಗಲೇ ಗಿಲ್‌ಗೆ ಹೊಣೆಗಾರಿಕೆ ನೀಡಲಾಗಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಹೇಳಿದ್ದಾರೆ.

ರೋಹಿತ್‌, ವಿರಾಟ್‌ಗೆ ಇದೇ ಕೊನೆ ಸರಣಿ?

ರೋಹಿತ್ ಹಾಗೂ ವಿರಾಟ್‌ ಆಸ್ಟ್ರೇಲಿಯಾ ಸರಣಿ ಆಡಲಿದ್ದಾರೆ. ಆದರೆ ಅವರು 2027ರ ವಿಶ್ವಕಪ್‌ವರೆಗೂ ತಂಡದಲ್ಲಿರುತ್ತಾರೊ ಇಲ್ಲವೊ ಎಂಬ ಪ್ರಶ್ನೆಗೆ ಆಯ್ಕೆ ಸಮಿತಿಯ ಅಗರ್ಕರ್‌ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ವರದಿಗಳ ಪ್ರಕಾರ, ರೋಹಿತ್‌, ವಿರಾಟ್‌ಗೆ ಆಸ್ಟ್ರೇಲಿಯಾ ಪ್ರವಾಸವೇ ಕೊನೆ ಸರಣಿ ಆಗಲೂಬಹುದು. ಒಂದು ವೇಳೆ ಅವರನ್ನು ತಂಡದಲ್ಲಿ ಮುಂದುವರಿಸಿದರೂ, 2027ರ ವಿಶ್ವಕಪ್‌ ಮುನ್ನ ಅಥವಾ ಮುಂದಿನ ವರ್ಷವೇ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.