'ಪ್ರಜ್ವಲ್‌ಗೆ ಮಾನಸಿಕ ರೋಗ ಇತ್ತಾ?'

| Published : May 06 2024, 10:44 AM IST / Updated: May 06 2024, 10:45 AM IST

Prajwal Revanna

ಸಾರಾಂಶ

ಲೈಂಗಿಕ ಕಿರುಕುಳ ಪ್ರಕರಣದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣಗೆ ಮಾನಸಿಕವಾಗಿ ಏನಾದರೂ ರೋಗ ಇತ್ತಾ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ಕಲಬುರಗಿ :  ಲೈಂಗಿಕ ಕಿರುಕುಳ ಪ್ರಕರಣದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣಗೆ ಮಾನಸಿಕವಾಗಿ ಏನಾದರೂ ರೋಗ ಇತ್ತಾ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಪ್ರಜ್ವಲ್‌ ಪ್ರಕರಣದಲ್ಲಿ ಕಾಂಗ್ರೆಸ್‌ಗೆ ರಾಜಕೀಯ ಮಾಡುವಂಥದ್ದು ಏನೂ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ರಚನೆ ಮಾಡೋದು ರಾಜಕೀಯನಾ ಎಂದು ಖರ್ಗೆ ಪ್ರಶ್ನಿಸಿದರು.

ಬಿಜೆಪಿಯವರು ಪ್ರಜ್ವಲ್ ಬಗ್ಗೆ ಎಲ್ಲಾ ಗೊತ್ತಿದ್ದರೂ ವಿದೇಶಕ್ಕೆ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ. ವಿಶ್ವ ಗುರುವಿಗೆ ಎಲ್ಲಾ ವಿಚಾರ ಗೊತ್ತಿದೆ. ಬಿಜೆಪಿಯವರು ಯಾಕೆ ಈ ವಿಚಾರದಲ್ಲಿ ಮೈ ಮೇಲೆ ಎಣ್ಣೆ ಹಚ್ಚಿಕೊಂಡು ಕೂತಿದ್ದಾರೆ ಎಂದು ಪ್ರಶ್ನಿಸಿದರು.

ಬೇರೆಯವರೇನಾದರೂ ಈ ರೀತಿ ಮಾಡಿದ್ದರೆ ಬಿಜೆಪಿಯವರು ದಿಲ್ಲಿಯಿಂದ ಹಳ್ಳಿಯವರೆಗೆ ಪ್ರಚಾರ ಮಾಡುತ್ತಿದ್ದರು. ಎಲ್ಲದರ ಬಗ್ಗೆ ಮಾತಾಡುವ ಬಿಜೆಪಿ ನಾಯಕರು ಇದರ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ? ಅಮಿತ್ ಶಾ, ನಡ್ಡಾ, ಅಶೋಕ್, ವಿಜಯೇಂದ್ರ, ಯಾಕೆ ಸಂತ್ರಸ್ತರ ಮನೆಗೆ ಹೋಗಿಲ್ಲ? ಬಿಜೆಪಿಯವರು ಯಾಕೆ ಪ್ರತಿಭಟನೆ ಮಾಡಿಲ್ಲ ಎಂದು ಪ್ರಶ್ನಿಸಿದರು.