ರಾಯಚೂರು ಲೋಕಸಭೆ ಚುನಾವಣೆಗೆ ಸಕಲ ಸಿದ್ಧತೆ: ಡೀಸಿ

| Published : May 06 2024, 12:35 AM IST

ಸಾರಾಂಶ

ನಾಳೆ ಬೆಳಗ್ಗೆಯಿಂದ ಮತದಾನ. ಒಟ್ಟು 20,10,437 ಮತದಾರರು, 2203 ಮತಗಟ್ಟೆ ಸ್ಥಾಪನೆ. 8464 ಅಧಿಕಾರಿ, ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ ನಾಯಕ ಅವರು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

6- ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಮೇ 7ರಂದು ಮತದಾನ ಜರುಗಲಿದ್ದು, ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 20,10,437 ಮತದಾರರು 2203 ಮತಗಟ್ಟೆಗಳಲ್ಲಿ ಮತದಾನ ಮಾಡಲಿದ್ದು, ಮತದಾನದ ಕಾರ್ಯಕ್ಕೆ ರಾಯಚೂರು ಜಿಲ್ಲೆಯಲ್ಲಿ 8464 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ತಿಳಿಸಿದರು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಸಂವಾದದ ಕೊಠಡಿಯಲ್ಲಿ ಚುನಾವಣೆ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಲೋಕಸಭಾ ಚುನಾವಣೆ ನಿಮಿತ್ತ ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಮತದಾನ ಅಂತ್ಯದ 48 ಗಂಟೆಗೂ ಮುನ್ನ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ವಾಹನಗಳ ಮೂಲಕ ಬಹಿರಂಗ ಪ್ರಚಾರ, ಧ್ವನಿವರ್ಧಕ ಬಳಕೆಗೆ ಅವಕಾಶ ಇರುವುದಿಲ್ಲ. ಅಭ್ಯರ್ಥಿಗಳು ಮನೆ-ಮನೆ ಭೇಟಿ ಮೂಲಕ ಮತಯಾಚನೆ ಮಾಡಬಹುದು ಎಂದರು.

ಪಾರದರ್ಶಕ ಚುನಾವಣೆಗೆ ಎಲ್ಲಾ ಹಂತದಲ್ಲಿ ಇವಿಎಂ ಮತಯಂತ್ರಗಳನ್ನು ಪರಿಶೀಲನೆ ನಡೆಸಿದ್ದು, ಯಾವುದೇ ರೀತಿಯ ಗೊಂದಲವಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಸಮ್ಮುಖದಲ್ಲಿ ರ್‍ಯಾಂಡಮೈಜೇಶನ್ ಮಾಡಿ, ಎಲ್ಲ ಪ್ರಕ್ರಿಯೆಗಳನ್ನು ಅವರ ಗಮನಕ್ಕೆ ತರಲಾಗಿದೆ ಎಂದು ಸ್ಪಷ್ಟಪಡಿಸಿದರು.

ಒಟ್ಟು 87 ಅಭ್ಯರ್ಥಿಗಳು ಕಣದಲ್ಲಿ: ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 87 ಅಭ್ಯರ್ಥಿಗಳು ಕಣದಲ್ಲಿದ್ದು, ಜಿಲ್ಲೆಯಲ್ಲಿ ಒಟ್ಟು 20,10,437 ಮತದಾರರಿದ್ದಾರೆ. ಇದರಲ್ಲಿ 9,94,646 ಪುರುಷ ಮತದಾರರು ಹಾಗೂ 10,15,158 ಮಹಿಳಾ ಮತದಾರರಿದ್ದು, 299 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಹಾಗೂ 334 ಸೇವಾ ಮತದಾರರು ಇದ್ದಾರೆ ಎಂದರು.

ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ: 06-ರಾಯಚೂರು (ಪ.ಪಂ) ಲೋಕಸಭಾ ಕ್ಷೇತ್ರದಲ್ಲಿ 2203 ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದ. ತಾಪಮಾನ ಹೆಚ್ಚು ಇರುವುದರಿಂದ ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತರು ಅರೆ ವೈದ್ಯಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಮತಗಟ್ಟೆಗಳಲ್ಲಿ ಶೆಡ್, ವಿಶ್ರಾಂತಿ ಕೊಠಡಿ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ ಎಂದರು.

ರಾಯಚೂರು ಜಿಲ್ಲೆಯಲ್ಲಿ 479 ಸೂಕ್ಷ್ಮ ಮತ್ತು 42 ದುರ್ಬಲ ಮತಗಟ್ಟೆಗಳಲ್ಲಿ ಭೇಟಿ ನೀಡಿ ಮತದಾರರಿಗೆ ಮತದಾನ ಮಾಡಲು ಆತ್ಮಸ್ಥೈರ್ಯ ಹಾಗೂ ಆತ್ಮ ವಿಶ್ವಾಸ ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಅರೆ ಸೇನಾ ಪಡೆಯಿಂದ ರೂಟ್‌ ಮಾರ್ಚ್ ಮತ್ತು ಪೆಟ್ರೋಲಿಂಗ್ ನಡೆಸಿ ಮತದಾರರಲ್ಲಿ ಆತ್ಮ ಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದರು.

ದೂರುಗಳ ವಿಲೇವಾರಿ:ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಗೆ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಾಗಿ ಹಾಗೂ ವಿವಿಧ ವಿಷಯಗಳಿಗಾಗಿ ದೂರುಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದೆ. 1950, ಸಿ-ವಿಜಿಲ್ ಹಾಗೂ ಇತರೆ ಮಾಧ್ಯಮದ ಮೂಲಕ ಅವಕಾಶ ಕಲ್ಪಿಸಲಾಗಿರುತ್ತದೆ. ಇಂದಿನವರಿಗೂ 1950 ಮೂಲಕ 621 (ರಾಯಚೂರು ಜಿಲ್ಲೆಯಿಂದ 321 ಹಾಗೂ ಯಾದಗಿರಿಯಿಂದ 300) ದೂರು ಸ್ವೀಕೃತಿಯಾಗಿದ್ದು ಹಾಗೂ ಸಿ-ವಿಜಿಲ್ ಮೂಲಕ 109 ದೂರುಗಳನ್ನು ಸ್ವೀಕೃತಿಯಾಗಿದೆ. ಎಲ್ಲಾ ದೂರುಗಳ ಕುರಿತು ಅಗತ್ಯ ಕ್ರಮಕೈಗೊಂಡು ವಿಲೇಗೊಳಿಸಲಾಗಿರುತ್ತದೆ ಎಂದು ತಿಳಿಸಿದರು.

ಅಂಚೆ ಮತದಾನದ ವಿವರ: ಜಿಲ್ಲೆಯಲ್ಲಿ ಒಟ್ಟು 1485 ಮತದಾರರನ್ನು ಅಂಚೆ ಮತದಾನಕ್ಕಾಗಿ ಗುರುತಿಸಿದ್ದು, ಅದರಲ್ಲಿ 1412 ಮತದಾರರು ಮತದಾನ ಮಾಡಿದ್ದು, 29 ಜನರು ಮರಣ ಹೊಂದಿರುತ್ತಾರೆ ಹಾಗೂ 44 ಜನರು ಗೈರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಅಗತ್ಯ ಸೇವೆಗಳಡಿಯಲ್ಲಿ 417 ಜನರು ಮತದಾನ ಮಾಡಿದ್ದಾರೆ ಎಂದು ತಿಳಿಸಿದರು.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ವಿವರ: ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ದಿನಾಂಕದಿಂದ ಇಲ್ಲಿಯವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದ ಒಟ್ಟು 96 ಪ್ರಥಮ ವಿಚಾರಣಾ ವರದಿ ಪ್ರಕರಣಗಳು ದಾಖಲಾಗಿರುತ್ತದೆ. ಜಿಲ್ಲೆಯಲ್ಲಿ ಉಲ್ಲಂಘನೆಗಳ ಮೇಲೆ ಸೂಕ್ತ ನಿಗಾ ಇಡಲು ವಿವಿಧ ತಂಡಗಳನ್ನು, ಚೆಕ್‌ಪೋಸ್ಟ್‌ಗಳನ್ನು ಹಾಗೂ ಸರ್ವೆಲೆನ್ಸ್ ತಂಡಗಳನ್ನು ರಚನೆ ಮಾಡಲಾಗಿದೆ. ಎಲ್ಲಾ ತಂಡಗಳು ತಮ್ಮ ಕರ್ತವ್ಯದಲ್ಲಿರುತ್ತಾರೆ. ವಿವಧ ತಂಡಗಳಿಂದ ಇಲ್ಲಿಯವರಿಗೂ 17,57,400 ರು. ಜಪ್ತಿ ಮಾಡಲಾಗಿದೆ. ಅದೇ ರೀತಿಯಾಗಿ 15,577.857 ಲೀ. ಒಟ್ಟು ಮೊತ್ತ 52,85,083.19 ರು. ಗಳಷ್ಟು ಮದ್ಯ ಜಪ್ತಿ ಮಾಡಲಾಗಿದೆ.

ಬೇಸಿಗೆ ಬಿಸಿಲಿರುವ ಕಾರಣಕ್ಕೆ ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ, ಅಧಿಕಾರಿ, ಸಿಬ್ಬಂದಿಗೆ ಒಆರ್‌ಎಸ್‌ ಪ್ಯಾಕೇಟ್‌ಗಳನ್ನು ನೀಡಲಾಗಿದೆ. ಇಷ್ಟೇ ಅಲ್ಲದೇ ಎಲ್ಲೆಡೆ ಅಗತ್ಯ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದರು ಸಹ ರಾಯಚೂರು ನಗರದಲ್ಲಿ ಪ್ರಚಾರ ನಡೆಸಿದ ಕಾಂಗ್ರೆಸ್‌ ಮತ್ತು ಬಿಜೆಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಪಾಂಡ್ವೆ ರಾಹುಲ್ ತುಕಾರಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಇದ್ದರು.