ಟಗರು ಬಳ್ಳಾರಿಗೆ ಬಂದು ಗುಮ್ಮಿದ್ದು ನೆನಪಿದ್ಯಾ ರೆಡ್ಡಿ: ತಂಗಡಗಿ ಟಾಂಗ್‌

| Published : May 06 2024, 12:35 AM IST / Updated: May 06 2024, 03:23 PM IST

ಟಗರು ಬಳ್ಳಾರಿಗೆ ಬಂದು ಗುಮ್ಮಿದ್ದು ನೆನಪಿದ್ಯಾ ರೆಡ್ಡಿ: ತಂಗಡಗಿ ಟಾಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ನನಗೂ ನಾಲಿಗೆ ಇದೆ. ನಾನು ಸಂಸ್ಕಾರವುಳ್ಳ ಕುಟುಂಬದಿಂದ ಬಂದ ಕಾರಣ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ - ತಂಗಡಗಿ ಟಾಂಗ್‌

 ಕಾರಟಗಿ :  ಒಮ್ಮೆ ‘ಟಗರು’ (ಮುಖ್ಯಮಂತ್ರಿ ಸಿದ್ದರಾಮಯ್ಯ) ಬೆಂಗಳೂರಿನಿಂದ ಬಳ್ಳಾರಿಗೆ ಬಂದು ಗುದ್ದಿದಾಗ ಎಲ್ಲಿಗೆ ಹೋಗಿ ಬಿದ್ದಿದ್ದೆ ಎನ್ನುವುದು ಮರೆತು ಬಿಟ್ಯಾ? ಎಂದು ಶಾಸಕ ಜನಾರ್ದನ ರೆಡ್ಡಿ ಜೈಲಿಗೆ ಹೋಗಿದ್ದನ್ನು ಸಚಿವ ಶಿವರಾಜ ತಂಗಡಗಿ ಪರೋಕ್ಷವಾಗಿ ನೆನಪಿಸಿದರು.

ಪಟ್ಟಣದ ನವಲಿ ರಸ್ತೆಯ ಎಂ.ಕೆ. ಮಿಲ್ ಆವರಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಶಾಸಕ ಜನಾರ್ದನ ರೆಡ್ಡಿ ಅವರ ವಿರುದ್ಧ ವಾಗ್ದಾಳಿ ನಡೆಸಿ, ನನಗೂ ನಾಲಿಗೆ ಇದೆ. ನಾನು ಸಂಸ್ಕಾರವುಳ್ಳ ಕುಟುಂಬದಿಂದ ಬಂದ ಕಾರಣ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಇನ್ನೊಮ್ಮೆ ನಾಲಿಗೆ ಹರಿಬಿಟ್ಟರೆ ಎರಡು ಹೆಜ್ಜೆ ಮುಂದೆ ಹೋಗಿ ನಿನ್ನ ಬಗ್ಗೆ ಮಾತನಾಡಬೇಕಾದೀತು ಎಚ್ಚರಿಕೆ ಎಂದರು.

ನಾವು ಐದು ಜನ ಪಕ್ಷೇತರರು ಬೆಂಬಲ ಕೊಟ್ಟಿದ್ದಕ್ಕೆ ನೀನು ಮಂತ್ರಿಯಾಗಿದ್ದು, ಅಂದು ನಾನು ಪಕ್ಷೇತರ ಶಾಸಕನಾಗಿ ಗೆದ್ದ ಕೂಡಲೇ ನಿಮ್ಮ ಕಾವಲುಗಾರರು ನನ್ನ ಮನೆ ಮುಂದೆ ಬಂದು ನಿಂತಿದ್ದರು. ನಾನು ನಿನ್ನ ಮನೆ ಬಾಗಿಲಿಗೆ ಬಂದಿರಲಿಲ್ಲ. ನನ್ನನ್ನು ಕರೆದುಕೊಂಡ ಹೋದ ಮೇಲೆಯೇ ನೀನು ಮಂತ್ರಿಯಾದೆ. ನನ್ನ ಹೆಸರು ಹೇಳಿ ನೀನು ಮಂತ್ರಿಯಾಗಿದ್ದೀಯಾ ಎನ್ನುವುದನ್ನು ನೆನಪಿಸಿಕೊಳ್ಳಬೇಕು ಎಂದು ಸಚಿವ ಶಿವರಾಜ ತಂಗಡಗಿ ಶಾಸಕ ಜನಾರ್ದನ ರೆಡ್ಡಿ ಅವರಿಗೆ ತಿರುಗೇಟು ನೀಡಿದರು.

ನಿನ್ನಷ್ಟು ಸುಳ್ಳು ನಾನು ಹೇಳಲ್ಲ. ಗೆದ್ದ ಕೂಡಲೇ ಪ್ರತಿಯೊಂದು ಪಂಚಾಯಿತಿಗೆ ಭೇಟಿ ನೀಡಿದ್ದೇನೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಅಧಿಕಾರಕ್ಕೆ ಬಂದ ಕೂಡಲೇ ಐದು ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಒಂದು ರುಪಾಯಿ ಕೊಟ್ಟಿಲ್ಲ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ನಮ್ಮ ಸರ್ಕಾರ ₹೧೦೦ ಕೋಟಿ ನೀಡಿದಾಗ ನನ್ನನ್ನು ಹುಡುಕಿ ಬಂದು ಅಭಿನಂದನೆ ಹೇಳಿದಾತ, ಮೊನ್ನೆ ಬಿಜೆಪಿ ಸೇರಿ ಇದೀಗ ನನ್ನ ಬಗ್ಗೆ ಮಾತನಾಡುತ್ತಿಯಲ್ಲಪ್ಪಾ ಎಂದು ಟಾಂಗ್ ನೀಡಿದರು.

ಬ್ಲಾಕ್ ಕಾಂಗ್ರೆಸ್ ಮುಖಂಡರು, ಪುರಸಭೆ ಸದಸ್ಯರು ಇದ್ದರು.