ಮೂರು ದಿನ ಬಸವ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ

| Published : May 07 2024, 01:03 AM IST

ಸಾರಾಂಶ

ನಾಡೋಜ ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಭಾಲ್ಕಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಮೇ 10ರಂದು ಬಸವ ಜಯಂತಿ ಸಂಜೆ 5ಕ್ಕೆ ಬಸವಣ್ಣನವರ ಭಾವಚಿತ್ರದ ಮೆರವಣಿಗೆ, ತೊಟ್ಟಿಲು, ವೇದಿಕೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಸಲು ಬಸವ ಭಕ್ತರು ಒಮ್ಮತದ ನಿರ್ಧಾರ ಕೈಗೊಂಡರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವದ ಅಂಗವಾಗಿ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಬಸವ ಭಕ್ತರು ಪೂರ್ವಭಾವಿ ಸಭೆ ನಡೆಸಿದರು. ಪಟ್ಟಣದ ಚನ್ನಬಸವಾಶ್ರಮದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ 2024ನೇ ಸಾಲಿನ ಬಸವ ಜಯಂತಿ ಉತ್ಸವವನ್ನು ಮೂರು ದಿನ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು.

ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಮೂರು ದಿವಸ ಬಸವ ಜಯಂತಿ ಉತ್ಸವ ನಡೆಯಲಿದ್ದು, ಮೇ 8 ಮತ್ತು 9ರಂದು ಸಂಜೆ 5ರಿಂದ 7.30ರ ವರೆಗೆ ಬಸವಣ್ಣನವರ ಚರಿತ್ರೆ ಕುರಿತು ವಿಶೇಷ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದು. ಜೊತೆಗೆ ಮೇ 10ರಂದು ಬಸವ ಜಯಂತಿ ಸಂಜೆ 5ಕ್ಕೆ ಬಸವಣ್ಣನವರ ಭಾವಚಿತ್ರದ ಮೆರವಣಿಗೆ, ತೊಟ್ಟಿಲು, ವೇದಿಕೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಸಲು ಬಸವ ಭಕ್ತರು ಒಮ್ಮತದ ನಿರ್ಧಾರ ಕೈಗೊಂಡರು.

ಸಾನ್ನಿಧ್ಯ ವಹಿಸಿದ್ದ ನಾಡೋಜ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ವಿಶ್ವಗುರು ಬಸವಣ್ಣನವರ ವಿಚಾರಧಾರೆ ಜಗತ್ತಿಗೆ ಮಾದರಿಯಾಗಿವೆ. ಅವರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಸಮುದಾಯ ಜನರು ಒಳಗೊಂಡು ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಸಹಕಾರ ನೀಡಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ವಿಶ್ವನಾಥಪ್ಪ ಬಿರಾದಾರ, ಶಂಭುಲಿಂಗ ಕಾಮಣ್ಣ, ಉಮಾಕಾಂತ ವಾರದ, ಶ್ರೀಕಾಂತ ಭೋರಾಳೆ, ಬಸವರಾಜ ಮರೆ, ಶರಣಪ್ಪ ಬಿರಾದಾರ, ಗಣಪತಿ ಬಾವುಗೆ, ಸುಭಾಷ ಕಾರಾಮುಂಗೆ, ಪ್ರಭು ಡಿಗ್ಗೆ, ಗುಂಡಪ್ಪ ಸಂಗಮಕರ, ಸಂತೋಷ ಬಿಜಿ ಪಾಟೀಲ್‌, ಸಂತೋಷ ಹಡಪದ, ರೇಖಾಬಾಯಿ ಅಷ್ಟೂರೆ, ಮಲ್ಲಮ್ಮ ಪಾಟೀಲ್‌ ಸೇರಿದಂತೆ ಹಲವರು ಇದ್ದರು. ವೀರಣ್ಣ ಕುಂಬಾರ ನಿರೂಪಿಸಿ, ವಂದಿಸಿದರು.ಸಮಿತಿ ಅಧ್ಯಕ್ಷರಾಗಿ ಡಾ.ಅಮಿತ ಅಷ್ಟೂರೆ ಆಯ್ಕೆ: ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರನ್ನಾಗಿ ಡಾ. ಅಮಿತ ಅಷ್ಟೂರೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಭಯ ಪೂಜ್ಯರು ಸಮಿತಿ ನೂತನ ಅಧ್ಯಕ್ಷರನ್ನು ಸನ್ಮಾನಿಸಿ, ಅಭಿನಂದಿಸಿದರು.ವಿಶ್ವಗುರು ಬಸವಣ್ಣನವರು ಸಮಾಜದ ಶ್ರೇಷ್ಠ ಸುಧಾರಕರು. ಅಂತಹ ಮಹಾತ್ಮರ ಜಯಂತಿ ಉತ್ಸವವನ್ನು ಮೂರು ದಿವಸ ಆಚರಿಸಲು ನಿರ್ಧರಿಸಲಾಗಿದ್ದು ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು.

ಗುರುಬಸವ ಪಟ್ಟದ್ದೇವರು, ಪೀಠಾಧಿಪತಿಗಳು, ಹಿರೇಮಠ ಸಂಸ್ಥಾನ, ಭಾಲ್ಕಿ