ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆಮಾನವ ಹಲವಾರು ಒತ್ತಡಕ್ಕೆ ಸಿಲುಕಿ ಮಾನಸಿಕ ನೋವು ಅನುಭವಿಸುತ್ತಾನೆ. ಮಾನಸಿಕ ಒತ್ತಡ ಅನ್ನೋದು ನಮ್ಮ ದೇಹ ಹಾಗೂ ಮನಸ್ಸಿನ ಮೇಲೆ ಪರಿಣಾಮ ಬೀರಿ ನೆಮ್ಮದಿ ಹಾಳು ಮಾಡುತ್ತದೆ. ಆದ್ದರಿಂದ ಎಲ್ಲರೂ ನಮ್ಮಷ್ಟಕ್ಕೆ ನಾವೇ ಒತ್ತಡ ನಿಭಾಯಿಸುವ ಮನೋಬಲ ಬೆಳೆಸಿಕೊಳ್ಳಬೇಕೆಂದು ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಗನ್ನಾಥ ಚವ್ಹಾಣ ಹೇಳಿದರು.
ಒತ್ತಡ ಜಾಗೃತಿ ದಿನಾಚರಣೆ ಪ್ರಯುಕ್ತ ಬಿ.ವಿ.ವಿ.ಸಂಘದ ಬಿ.ವಿ.ವಿ.ಎಸ್ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಮನೋವೈದ್ಯಕೀಯ ನರ್ಸಿಂಗ್ ವಿಭಾಗದ ವತಿಯಿಂದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಒತ್ತಡದ ಕುರಿತು ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬಿ.ವಿ.ವಿ.ಎಸ್ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಮನೋವೈದ್ಯಕೀಯ ನರ್ಸಿಂಗ್ ವಿಭಾಗದ ಅಧ್ಯಾಪಕಿ ಪೂರ್ಣಿಮಾ ಮೇಟಿ, ಒತ್ತಡದಿಂದ ಉಂಟಾಗುವ ಪರಿಣಾಮಗಳು, ಒತ್ತಡಕ್ಕೆ ಆರ್ಥಿಕ, ಸಾಮಾಜಿಕ, ಕೌಟುಂಬಿಕ, ವೈಯಕ್ತಿಕ ಮತ್ತು ಶೈಕ್ಷಣಿಕ ಕಾರಣಗಳೂ ಹಾಗೂ ಒತ್ತಡದಿಂದ ಶರೀರ ಹಾಗೂ ಮಾನಸ್ಸಿನ ಮೇಲೆ ಉಂಟಾಗುವ ಪರಿಣಾಮದ ಕುರಿತು ಹಾಗೂ ಒತ್ತಡ ಕಡಿಮೆ ಮಾಡಿಕೊಳ್ಳುವ ವಿಧಾನಗಳನ್ನು ಸವಿಸ್ತಾರವಾಗಿ ವಿವರಿಸಿ, ಒತ್ತಡದ ನಿರ್ವಹಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಸೌಮ್ಯಾ ಮತ್ತು ತಂಡದವರು ಒತ್ತಡದ ನಿರ್ವಹಣೆಯ ಜಾಗೃತಿಯ ಕಿರುನಾಟಕದ ಮೂಲಕ ಪ್ರದರ್ಶಿಸಿದರು.
ನರ್ಸಿಂಗ್ ಮಹಾವಿದ್ಯಾಲಯದ 2ನೇ ವರ್ಷದ ಜಿಎನ್ಎಂ ನರ್ಸಿಂಗ್ ವಿದ್ಯಾರ್ಥಿನಿಯರಾದ ಕಾವ್ಯಾ, ರಕ್ಷಿತಾ ಹಾಗೂ ಶಶಿಕಲಾ ಪ್ರಾರ್ಥಿಸಿದರು. ಸುಮಾರು 100ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.