ಸಾರಾಂಶ
ಸಭೆಯಲ್ಲಿ ಪಿಡಿಒಗಳಿಗೆ ತಾಪಂ ಇಒ ಲಕ್ಷ್ಮಣ ಕಟ್ಟುನಿಟ್ಟಿನ ಸೂಚನೆ
ಕನ್ನಡಪ್ರಭವಾರ್ತೆ ಚಳ್ಳಕೆರೆ:
ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಕುಡಿವ ನೀರಿನ ಸಮಸ್ಯೆ ಕುರಿತು ಸಕರಾತ್ಮಕ ಚಿಂತನೆ ನಡೆಸಿದ್ದು, ಯಾವುದೇ ಕಾರಣಕ್ಕೂ ಗ್ರಾಮೀಣ ಭಾಗದಲ್ಲಿ ಕುಡಿವ ನೀರಿಗಾಗಿ ಪರಿತಪಿಸದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಿದೆ ಎಂದು ತಾಪಂ ಇಒ ಲಕ್ಷ್ಮಣ ಸೂಚಿಸಿದರು.ನಗರದ ತಾಪಂ ಕಾರ್ಯಲಯದಲ್ಲಿ ತಾಲೂಕಿನ ಕುಡಿವ ನೀರಿನ ಸಮಸ್ಯೆ ಕುರಿತು ಪಿಡಿಒ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಗಳೊಂದಿಗೆ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಈ ಬಾರಿ ಮಳೆ ವಿಳಂಬವಾಗಿದ್ದು, ಸರ್ಕಾರದ ಮಾರ್ಗದರ್ಶನದಂತೆ ಗ್ರಾಮದಲ್ಲಿರುವ ಖಾಸಗಿ ಬೋರವೆಲ್ಗಳಿಂದ ನೀರು ಪಡೆದು ಸಾರ್ವಜನಿಕರಿಗೆ ನೀಡುವಂತೆ ಸೂಚನೆ ನೀಡಲಾಗಿದೆ. ತಾಲೂಕಿನಾದ್ಯಂತ 18 ಖಾಸಗಿ ಬೋರ್ವೆಲ್ನಿಂದ ಒಪ್ಪಂದ ಮಾಡಿಕೊಂಡು ಜನರಿಗೆ ನೀರು ಒದಗಿಸಲಾಗುತ್ತಿದೆ ಎಂದರು.
ಕುಡಿಯುವ ನೀರು ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ದಯಾನಂದ ಮಾತನಾಡಿ, ತಾಲೂಕಿನಾದ್ಯಂತ ಒಟ್ಟು 32 ಕಡೆ ಶುದ್ದ ಕುಡಿವ ನೀರಿನ ಘಟಕದಲ್ಲಿ ಸಮಸ್ಯೆ ಉಂಟಾಗಿದ್ದು, ಅವುಗಳಲ್ಲಿ ಕೆಲವು ತುರ್ತು ರಿಪೇರಿ ಮಾಡಲಾಗಿದೆ. ಕೆಲವು ಗ್ರಾಮಗಳಲ್ಲಿ ನೀರು ಲಭ್ಯವಿದ್ದಲ್ಲಿ ಪೈಪ್ಲೈನ್ ಮಾಡುವ ಮೂಲಕ ನೀರಿನ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಸಹಾಯಕ ನಿರ್ವಾಹಣಾಧಿಕಾರಿ(ಕುಡಿಯುವ ನೀರು) ಸಂಪತ್ಕುಮಾರ್, ತಾಲೂಕು ಯೋಜನಾಧಿಕಾರಿ ಕೆಂಚಪ್ಪ, ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.