ವಿನೋದ ಅಸೂಟಿ ಪರ ಡಿಸಿಎಂ ಡಿ.ಕೆ. ಶಿವಕುಮಾರ ಪ್ರಚಾರ

| Published : May 06 2024, 12:39 AM IST

ಸಾರಾಂಶ

ಶಿಗ್ಗಾಂವಿ ಕ್ಷೇತ್ರದ ಸವಣೂರಿನಲ್ಲಿ ಪ್ರಚಾರ ನಡೆಸಿದ ಡಿಸಿಎಂ ಡಿ.ಕೆ. ಶಿವಕುಮಾರ ಯುವನಾಯಕ ವಿನೋದ ಅಸೂಟಿ ಅವರನ್ನು ಬಹುದೊಡ್ಡ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಮತದಾನಕ್ಕೆ ಇನ್ನೆರೆಡು ದಿನಗಳು ಮಾತ್ರ ಬಾಕಿ ಉಳಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಶಿಗ್ಗಾಂವಿ ಕ್ಷೇತ್ರದ ಸವಣೂರಿನಲ್ಲಿ ಭಾನುವಾರ ಅಸೂಟಿ ಪ್ರಚಾರ ನಡೆಯಿತು. ಇಪ್ಪತ್ತು ವರ್ಷಗಳಿಂದ ಸಂಸದರಾಗಿರುವ ಜೋಶಿ ಅವರಿಂದ ನಿರೀಕ್ಷಿತ ಸಾಧನೆಯಾಗಿಲ್ಲ. ಆದ್ದರಿಂದ ಯುವನಾಯಕ ವಿನೋದ ಅಸೂಟಿ ಅವರನ್ನು ಬಹುದೊಡ್ಡ ಅಂತರದಿಂದ ಗೆಲ್ಲಿಸಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.

ಶಾಸಕ ವಿನಯ ಕುಲಕರ್ಣಿ ಮಾತನಾಡಿ, ಪ್ರಹ್ಲಾದ್‌ ಜೋಶಿ ಸುಟ್ಟಿರುವ ರೊಟ್ಟಿಯಂತಾಗಿದ್ದಾರೆ. ರೊಟ್ಟಿಯನ್ನು ತುಂಬಾ ಸಮಯ ಒಲೆಯ ಹಂಚಿನ ಮೇಲಿಟ್ಟರೆ ಸುಟ್ಟು ಹೋಗುತ್ತದೆ. ಆದ್ದರಿಂದ ತಿರುವಿ ಹಾಕಿ ನಮ್ಮ ಸರಳ ಸಜ್ಜನ ಅಭ್ಯರ್ಥಿ ವಿನೋದ ಅಸೂಟಿ ಗೆಲ್ಲಿಸಿ ದೆಹಲಿಗೆ ಕಳಿಸಿ ಎಂದರು.

ಶಾಸಕರಾದ ಶ್ರೀನಿವಾಸ್ ಮಾನೆ, ಸೋಮಣ್ಣ ಬೇವಿನಮರದ, ನಿಕೇತರಾಜ್ ಮೌರ್ಯ, ಯಾಸೀರ ಅಹ್ಮದ ಖಾನ ಪಠಾಣ, ಬಿ.ಸಿ. ಪಾಟೀಲ, ಎಂ.ಜೆ. ಮುಲ್ಲಾ ಇದ್ದರು.

ನವಲೂರಿನಲ್ಲಿ ಪ್ರಚಾರ

ಭಾನುವಾರ ಮಧ್ಯಾಹ್ನದ ನಂತರ ಹು-ಧಾ ಪಶ್ಚಿಮ ಕ್ಷೇತ್ರದ ನವಲೂರಿನಲ್ಲಿ ಪಾಲಿಕೆ ಸದಸ್ಯ ಮಯೂರ ಮೋರೆ ನೇತೃತ್ವದಲ್ಲಿ ರೋಡ್‌ ಶೋ ನಡೆಸಿದರು. ನವಲೂರಿನ ಮಾಲತೇಶ ಮೈಲಾರಲಿಂಗೇಶ್ವರ ಮತ್ತು ಬೀರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಗ್ರಾಮದ 23 ಮತ್ತು 24ನೇ ವಾರ್ಡಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಆನಂತರ ತಡಸಿನಕೊಪ್ಪದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿದರು. ಇಸ್ಮಾಯಿಲ್ ತಮಟಗಾರ, ಹಣಮಂತ ಕೊರವಾರ, ಬಸವರಾಜ ಮಲಕಾರಿ, ಆತ್ಮಾನಂದ ತಳವಾರ ಮತ್ತು ತಡಸಿನಕೊಪ್ಪದ ಮುಖಂಡರು ಇದ್ದರು.