ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ: ಪಟ್ಟಣದಲ್ಲಿ ಅರಬಾವಿ ಕ್ಷೇತ್ರದ ಸ್ವೀಪ್ ಸಮಿತಿ, ಶಿಕ್ಷಣ ಇಲಾಖೆ, ತಾಪಂ ಕಚೇರಿ, ಶಿಶು ಅಭಿವೃದ್ಧಿ ಇಲಾಖೆ, ಪುರಸಭೆ ಕಾರ್ಯಾಲಯ ಹಾಗೂ ವಿವಿಧ ಇಲಾಖೆಯ ಆಶ್ರಯದಲ್ಲಿ ಕ್ಯಾಂಡಲ್ ಮೆರವಣಿಗೆ ಮೂಲಕ ಮತದಾನ ಜಾಗೃತಿ ಮೂಡಿಸಿದರು. ಮೂಡಲಗಿ ಪಟ್ಟಣ ಪುರಸಭೆ ಆವರಣದಿಂದ ಶ್ರೀ ಕಲ್ಮೇಶ್ವರ ವೃತ್ತದವರಿಗೆ ಮತದಾನ ಜಾಗೃತಿಯ ಘೋಷಣೆಗಳೊಂದಿಗೆ ಜಾಥಾ ನಡೆಸಿದರು.ಈ ಸಮಯದಲ್ಲಿ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಇಒ ನವೀನಪ್ರಸಾದ ಕಟ್ಟಿಮನಿ ಮಾತನಾಡಿ, ಅರಭಾವಿ ಕ್ಷೇತ್ರದಲ್ಲಿ ಹೆಚ್ಚು ಮತದಾನ ನಡೆಸುವ ಉದ್ದೇಶದಿಂದ ಬೈಕ್ ಜಾಥಾ, ಮನೆ ಮನೆಗೆ ತೆರಳಿ ಕರ ಪತ್ರ, ರಂಗೋಲಿ ಸ್ಪರ್ಧೆ ಏರ್ಪಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಗಿದೆ. ಮತದಾರರು ಹೆಚ್ಚಾಗಿ ಮತದಾನ ಮಾಡಿ ಜಿಲ್ಲೆಯಲ್ಲಿ ಮಾದರಿ ಕ್ಷೇತ್ರವಾಗುವದರೊಂದಿಗೆ ಪ್ರಜಾಪ್ರಭುತ್ವದಲ್ಲಿ ಮತ ಚಲಾವಣೆಗೆ ಅವಕಾಶ ಇರುವುದು ಸಂವಿಧಾನವು ನಮಗೆ ದೊಡ್ಡ ಕೊಡುಗೆ ನೀಡಿದೆ ಎಂದರು.ಬಿಇಒ ಅಜಿತ ಮನ್ನಿಕೇರಿ ಮಾತನಾಡಿ, ಅರಭಾವಿ ಕ್ಷೇತ್ರದಲ್ಲಿ ಹೆಚ್ಚು ಮತದಾನವಾಗಲು ಅರಭಾವಿ ಸ್ವೀಪ್ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಲಾಗಿದೆ. ಮತದಾರರು ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಮನವಿ ಮಾಡಿದರು.
ಮತದಾನ ಜಾಗೃತಿ ಜಾಥಾದಲ್ಲಿ ತಾಪಂ, ಪುರಸಭೆ, ಸಿಡಿಪಿಒ ಕಚೇರಿ ಸಿಬ್ಬಂದಿ, ಅಂಗನವಾಡಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.