ಸಾರಾಂಶ
ಸದಾ ಗ್ಯಾರಂಟಿಗಳ ನೆಪದಲ್ಲಿ ರಾಜ್ಯ ಸರ್ಕಾರ ದೈನಂದಿನ ಅಗತ್ಯ ಸೇವೆಗಳ ಬಗ್ಗೆ ನಿರ್ಲಕ್ಷ್ಯ ತೋರಿದ ಪರಿಣಾಮವಾಗಿ ಇಂದು 108 ಸೇವಾ ಸಿಬ್ಬಂದಿಯ ಮುಷ್ಕರದಿಂದ ರಾಜ್ಯದ ರೋಗಿಗಳು ತುರ್ತು ಸೇವೆಯಿಂದ ವಂಚಿತರಾಗುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಶಅಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಕಳೆದ 3 ತಿಂಗಳಿನಿಂದ ಸರ್ಕಾರ 108 ಸೇವೆಯ ಸಿಬ್ಬಂದಿಗೆ ವೇತನ ನೀಡದೆ ಚೆಲ್ಲಾಟವಾಡುತ್ತಿದ್ದು, ಇದೀಗ ಈ ಸಿಬ್ಬಂದಿ ಬಂದ್ ಕರೆ ನೀಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಸರ್ಕಾರ ಬಾಕಿ ಇರುವ ವೇತನವನ್ನು ತಕ್ಷಣ ನೀಡಿ ಸಮಸ್ಯೆಯನ್ನು ಬಗೆಹರಿಸುವಂತೆ ರಾಜ್ಯ ಸರ್ಕಾರಕ್ಕೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.ತುರ್ತು ಸಂದರ್ಭದಲ್ಲಿ ರೋಗಿಗಳ ಪಾಲಿನ ಜೀವರಕ್ಷಕರಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ 108 ಸೇವೆಯ ಸಿಬ್ಬಂದಿಗೆ ರಾಜ್ಯ ಸರ್ಕಾರ ಸಂಬಳ ಭಾಗ್ಯವನ್ನೇ ನೀಡಿಲ್ಲ. ಸದಾ ಗ್ಯಾರಂಟಿಗಳ ನೆಪದಲ್ಲಿ ರಾಜ್ಯ ಸರ್ಕಾರ ದೈನಂದಿನ ಅಗತ್ಯ ಸೇವೆಗಳ ಬಗ್ಗೆ ನಿರ್ಲಕ್ಷ್ಯ ತೋರಿದ ಪರಿಣಾಮವಾಗಿ ಇಂದು 108 ಸೇವಾ ಸಿಬ್ಬಂದಿಯ ಮುಷ್ಕರದಿಂದ ರಾಜ್ಯದ ರೋಗಿಗಳು ತುರ್ತು ಸೇವೆಯಿಂದ ವಂಚಿತರಾಗುವ ಸನ್ನಿವೇಶ ನಿರ್ಮಾಣವಾಗಿದೆ ಎಂದವರು ಹೇಳಿದ್ದಾರೆ.
ಸರ್ಕಾರ ತಕ್ಷಣ ಸಿಬ್ಬಂದಿಯ ವೇತನವನ್ನು ಪಾವತಿಸಿ, ಅವರ ನ್ಯಾಯ ಬದ್ಧವಾದ ಬೇಡಿಕೆಯನ್ನು ಪರಿಗಣಿಸಿ ಮುಷ್ಕರ ಹಿಂಪಡೆಯುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಈ ಬಂದ್ನಿಂದಾಗಿ ಸಂಭವಿಸುವ ಎಲ್ಲ ಅನನುಕೂಲತೆ ಹಾಗೂ ಸಮಸ್ಯೆಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ. ಆದ್ದರಿಂದ ಸರ್ಕಾರ ಕೂಡಲೇ ರಾಜ್ಯದ ಜನರ ಆರೋಗ್ಯ ಸೇವೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.