ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ನಡೆಸುತ್ತಿರುವ ಉದ್ಯಮಗಳಿಗೆ ಹಾಗೂ ಸಾರ್ವಜನಿಕ ಕ್ಷೇತ್ರದ ಸರ್ಕಾರದ ಅಧೀನ ಸಂಸ್ಥೆಗಳಿಗೆ ಅಧ್ಯಕ್ಷರನ್ನಾಗಿ ರಾಜಕಾರಣಿಗಳನ್ನು ನೇಮಕ ಮಾಡಬಾರದು ಎಂದು ರಾಜ್ಯ ಉಚ್ಛ ನ್ಯಾಯಾಲಯ ಸರ್ಕಾರಕ್ಕೆ ಸಲಹೆ ನೀಡಿದೆ.
ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ 127 ಕೋಟಿ ರು. ಭ್ರಷ್ಟಾಚಾರ ನಡೆಸಿರುವ ಕಾರ್ಖಾನೆ ಮಾಜಿ ಅಧ್ಯಕ್ಷ ವಿ.ನಾಗರಾಜಪ್ಪ ಪ್ರಕರಣ ಉಲ್ಲೇಖಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ನಡೆಸುವ ಉದ್ಯಮಗಳು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ಸಾರ್ವಜನಿಕ ಸಂಸ್ಥೆಗಳ ಅಧ್ಯಕ್ಷ ಹುದ್ದೆಗಳಿಗೆ ಯಾವಾಗಲೂ ಅರ್ಹರು, ಬುದ್ಧಿವಂತರು ಹಾಗೂ ವೃತ್ತಿಪರ ಶ್ರೇಷ್ಠತೆ ಹೊಂದಿರುವವರನ್ನೇ ನೇಮಕ ಮಾಡಬೇಕು ಎಂದು ತಿಳಿಸಿದೆ.ರಾಜಕಾರಣಿಗಳಲ್ಲಿ ಭ್ರಷ್ಟತೆ, ಸ್ವಾರ್ಥಪರತೆ ಹೆಚ್ಚಿರುವುದರಿಂದ ಅವರಿಂದ ಸರ್ಕಾರದ ಉದ್ಯಮಗಳು, ಸಾರ್ವಜನಿಕ ಸಂಸ್ಥೆಗಳಿಗೆ ಹಾನಿಯಾಗುವುದೇ ವಿನಃ ಎಂದಿಗೂ ಬೆಳವಣಿಗೆಯನ್ನು ಸಾಧಿಸುವುದಿಲ್ಲ. ಅಧ್ಯಕ್ಷ ಸ್ಥಾನಗಳಿಗೆ ನೇಮಕ ಮಾಡುವ ಸಮಯದಲ್ಲಿ ಸರ್ಕಾರಗಳಿಗೆ ಉದ್ಯಮ ಹಾಗೂ ಸಂಸ್ಥೆಗಳ ಬೆಳವಣಿಗೆ ಹಾಗೂ ಸಾರ್ವಜನಿಕ ಹಿತಾಸಕ್ತಿ ಮುಖ್ಯವಾಗಬೇಕೆ ಹೊರತು ರಾಜಕೀಯ ಹಿತಾಸಕ್ತಿ ಮುಖ್ಯವಾಗಬಾರದು. ಅನರ್ಹರಿಗೆ, ಉದ್ಯಮದ ಬಗ್ಗೆ ತಿಳಿವಳಿಕೆ, ಜ್ಞಾನವಿಲ್ಲದ ರಾಜಕಾರಣಿಗಳಿಗೆ ನೀಡುವುದರಿಂದ ಸರ್ಕಾರಿ ವಲಯದ ಉದ್ದಿಮೆಗಳು ಬೆಳವಣಿಗೆ ಕಾಣುವುದಿಲ್ಲ. ರಾಜಕೀಯ ಕಾರಣಗಳಿಗಾಗಿ ಸರ್ಕಾರಗಳು ಅನರ್ಹರನ್ನು ನೇಮಕ ಮಾಡುವುದರಿಂದ ಉದ್ಯಮಗಳ ಅಧಃಪತನ, ಸರ್ಕಾರಕ್ಕೆ ಆರ್ಥಿಕ ಹೊರೆ ಹಾಗೂ ಸಾರ್ವಜನಿಕ ಹಣವೂ ವ್ಯರ್ಥವಾಗುತ್ತದೆ ಎಂದು ನೇರವಾಗಿ ಹೇಳಿದೆ.
ಮೈಷುಗರ್ ಕಾರ್ಖಾನೆ ಅಧ್ಯಕ್ಷರನ್ನಾಗಿ ನಾಗರಾಜಪ್ಪ ಅವರನ್ನು ನೇಮಕ ಮಾಡಿ ಅಂದಿನ ಸರ್ಕಾರ ಕೆಟ್ಟ ನಿರ್ಧಾರ ಮಾಡಿತು. ನಾಗರಾಜಪ್ಪ ಅವರಿಗೆ ಉದ್ಯಮ ನಡೆಸುವ ತಿಳಿವಳಿಕೆ, ವೃತ್ತಿಪರ ಶ್ರೇಷ್ಠತೆ, ಅನುಭವ, ಜ್ಞಾನವಿರಲಿಲ್ಲ. ಅಂತಹವರನ್ನು ಒಂದು ಕಾಲದಲ್ಲಿ ಏಷ್ಯಾದಲ್ಲೇ ಅತಿ ದೊಡ್ಡ ಸಕ್ಕರೆ ಕಾರ್ಖಾನೆಯಾಗಿದ್ದ ಮೈಷುಗರ್ ಸಕ್ಕರೆ ಕಾರ್ಖಾನೆ ಅಧ್ಯಕ್ಷರನ್ನಾಗಿ ಅಂದಿನ ಸರ್ಕಾರ ಮಾಡಿ ಕಾರ್ಖಾನೆಯ ಅಧೋಗತಿಗೆ ಕಾರಣವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದೆ.ರಾಜಕೀಯ ಕಾರಣಗಳಿಗಾಗಿ ಅಂದಿನ ಸರ್ಕಾರ ಮಾಡಿದ ಒಂದು ತಪ್ಪು ನಿರ್ಧಾರದ ಪರಿಣಾಮ ಕಾರ್ಖಾನೆ 127 ಕೋಟಿ ರು. ನಷ್ಟ ಅನುಭವಿಸುವುದಕ್ಕೆ ಕಾರಣವಾಯಿತು ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ ಎಂದು ಹೇಳಿದೆ.
ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಾಧೀಶ ಡಿ.ಕೆ.ಸಿಂಗ್ ಮತ್ತು ಮತ್ತೋರ್ವ ನ್ಯಾಯಮೂರ್ತಿ ವೆಂಕಟೇಶ್ ನಾಯಕ್ ಅವರು, ಕಾರ್ಖಾನೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಾಡಿರುವ ಭ್ರಷ್ಟಾಚಾರ ಕುರಿತಂತೆ ಉಪಲೋಕಾಯುಕ್ತ ವರದಿಯಲ್ಲಿ ಮಾಡಿರುವ ಆರೋಪಗಳನ್ನು ರದ್ದುಗೊಳಿಸುವಂತೆ ನಾಗರಾಜಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ.ಈಗಿನ ರಾಜ್ಯ ಸರ್ಕಾರ ನಾಗರಾಜಪ್ಪನವರ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯಿದೆ ಸೆಕ್ಷನ್ 7(2-ಎ) ಅನ್ವಯ ತನಿಖೆಗೆ ಆದೇಶಿಸಿತ್ತು. 2012ರಲ್ಲಿ ಶಾಸಕರಾಗಿದ್ದ ಎಂ.ಶ್ರೀನಿವಾಸ್ ಅವರು ಅಕ್ಟೋಬರ್ 2008ರಿಂದ ಡಿಸೆಂಬರ್ 2012ರವರೆಗೆ ಕಂಪನಿ ಅಧ್ಯಕ್ಷರಾಗಿ ನಾಗರಾಜಪ್ಪ ನಡೆಸಿರುವ ದುರಾಚಾರ, ಅವ್ಯವಹಾರ, ನಿಯಮಾವಳಿಗಳ ಉಲ್ಲಂಘನೆ, ಆರ್ಥಿಕ ತಪ್ಪು ನಿರ್ಧಾರಗಳಿಂದ ಕಾರ್ಖಾನೆಗೆ 127 ಕೋಟಿ ರು. ನಷ್ಟವಾಗಿದೆ ಎಂದು ಆರೋಪಿಸಿದ್ದರು.
ರಾಜ್ಯ ಉಚ್ಛ ನ್ಯಾಯಾಲಯ ಉಪ ಲೋಕಾಯುಕ್ತ ವರದಿಯಲ್ಲಿ ಆಡಿಟ್ ವರದಿಯನ್ನು ಆಧರಿಸಿ ಮಾಡಿರುವ 12 ಆರೋಪಗಳನ್ನು ಗಂಭೀರವಾಗಿ ಗುರುತಿಸಿದೆ. ಆ ಆರೋಪಗಳೆಲ್ಲವೂ ಸಾಬೀತಾಗಿರುವುದನ್ನು ಗಮನಕ್ಕೆ ತಂದುಕೊಂಡಿದೆ.ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆ, ಕಾರ್ಖಾನೆಯಲ್ಲಿ ನಡೆಸಿರುವ ಆರ್ಥಿಕ ವ್ಯವಹಾರಗಳು ಅಸಮರ್ಪಕತೆಯಿಂದ ಕೂಡಿರುವುದು, ಹಲವಾರು ಆರೋಪಗಳು ದಾಖಲೆ ಸಹಿತ ಸಾಬೀತಾಗಿರುವುದು, ಟೆಂಡರ್ ಪ್ರಕ್ರಿಯೆಯಲ್ಲಿನ ಲೋಪಗಳು, ಅಧಿಕಾರ ದುರುಪಯೋಗ, ಮದ್ಯಸಾರ ಘಟಕದಲ್ಲಿ ನಡೆದಿರುವ ಅವ್ಯವಹಾರಗಳು, ಸಕ್ಕರೆ ಮಾರಾಟಕ್ಕೆ ಹಣ ಪಡೆಯದೆ ಅನುಮತಿ ನೀಡಿರುವುದು, ಕಾರ್ಖಾನೆಯ ಕೆಲವು ಅಧಿಕಾರಿಗಳು ಮತ್ತು ನೌಕರರ ರಾಜೀನಾಮೆಗೆ ಒತ್ತಡ ಹೇರಿರುವುದು, ಬಾಕಿ ವಿತರಣೆಗೆ ನಿರಾಕರಣೆ, ಮಧ್ಯವರ್ತಿಗಳ ಮೂಲಕ ಮದ್ಯಮಾರಾಟ ಇವೆಲ್ಲಾ ಅಂಶಗಳನ್ನು ನ್ಯಾಯಾಲಯ ಸೂಕ್ಷ್ಮವಾಗಿ ಗಮನಿಸಿ ನಾಗರಾಜಪ್ಪ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ.
ಕಾರ್ಖಾನೆಯ ಅಧ್ಯಕ್ಷರಾಗಿ ನಾಗರಾಜಪ್ಪ ಸಾರ್ವಜನಿಕ ಸೇವಕನಾಗಿ ಕೆಲಸ ನಿರ್ವಹಿಸಬೇಕಿತ್ತು. ಕಾರ್ಖಾನೆಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳ ತೀರ್ಮಾನಗಳನ್ನು ಆಡಳಿತ ಮಂಡಳಿಯ ಮುಂದಿಟ್ಟು ತೆಗೆದುಕೊಳ್ಳಬೇಕಿತ್ತು. ಆದರೆ, ಎಲ್ಲಾ ತೀರ್ಮಾನಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡು ಕಾರ್ಖಾನೆಯ ನಷ್ಟಕ್ಕೆ ಕಾರಣವಾಗಿರುವುದು ತನಿಖೆ ನಡೆಸಿರುವ ಲೋಕಾಯುಕ್ತ ವರದಿಯಿಂದ ಕಂಡುಬಂದಿದೆ ಎಂದು ಹೇಳಿದೆ.ಕಾರ್ಖಾನೆ ಅಧ್ಯಕ್ಷರಾಗಿ ನಾಗರಾಜಪ್ಪ ನಡೆಸಿದ ದುರಾಡಳಿತದಿಂದ ಕಂಪನಿಗೆ 127 ಕೋಟಿ ರು. ನಷ್ಟವಾಗಿದೆ. ಈ ನಷ್ಟವನ್ನು ಆರೋಪಿ ನಾಗರಾಜಪ್ಪ ಅವರಿಂದಲೇ ವಸೂಲಿ ಮಾಡುವಂತೆ ಲೋಕಾಯುಕ್ತ ವರದಿಯಲ್ಲಿ ಶಿಫಾರಸು ಮಾಡಿದೆ. ಅದು ಸೂಕ್ತವೂ ಹೌದು. ಉಪ ಲೋಕಾಯುಕ್ತ ವರದಿ ಸತ್ಯಾಂಶದಿಂದ ಕೂಡಿದ್ದು, ಎಲ್ಲಿಯೂ ತಪ್ಪುಗಳನ್ನು ಗುರುತಿಸುವುದಕ್ಕೆ ಸಾಧ್ಯವಾಗಿಲ್ಲ. ವರದಿಯಲ್ಲಿ ಶಿಫಾರಸು ಮಾಡಿರುವ ಅಂಶಗಳನ್ನು ಆಧರಿಸಿ ಆರೋಪಿ ನಾಗರಾಜಪ್ಪನವರಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ರಾಜ್ಯ ಸರ್ಕಾರ ಮುಂದಿನ ಕ್ರಮಗಳನ್ನು ಅನುಸರಿಸುವಂತೆ ನ್ಯಾಯಾಲಯ ತಿಳಿಸಿದೆ.
ಮುಂದಿನ ದಿನಗಳಲ್ಲಿ ಇಂತಹ ರಾಜಕಾರಣಿಗಳನ್ನು ಸರ್ಕಾರ ನಡೆಸುವ ಸಾರ್ವಜನಿಕ ಉದ್ದಿಮೆ, ಸಂಸ್ಥೆಗಳಿಗೆ ನೇಮಕ ಮಾಡದೆ ದಕ್ಷರು, ಅನುಭವಿಗಳು, ಪ್ರಾಮಾಣಿಕರನ್ನು ನೇಮಕ ಮಾಡಿ ಅವುಗಳ ಉನ್ನತಿಗೆ ನೆರವಾಗಬೇಕು. ರಾಜಕೀಯ ಹಿತಾಸಕ್ತಿಗಾಗಿ ಸಾರ್ವಜನಿಕ ಹಿತಾಸಕ್ತಿಯನ್ನು ಎಂದಿಗೂ ಬಲಿಕೊಡಬಾರದು ಎಂದು ಹೇಳಿದೆ.)
)
;Resize=(128,128))
;Resize=(128,128))