ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸೈಬರ್ ವಂಚಕರು ವ್ಯಕ್ತಿಯೊಬ್ಬರ ಮೊಬೈಲ್ಗೆ ವರ್ಕ್ ಫ್ರಮ್ ಹೋಂ ಜಾಹೀರಾತು ಸಂದೇಶ ಕಳುಹಿಸಿ ಆತನಿಂದ ₹1.63 ಲಕ್ಷ ಪಡೆದು ವಂಚಿಸಿರುವ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಜಿಎಸ್ ಲೇಔಟ್ ನಿವಾಸಿ ಅಭಿಜಿತ್ ಕಬಾದ್ ಹಣ ಕಳೆದುಕೊಂಡವರು. ಇತ್ತೀಚೆಗೆ ಅಭಿಜಿತ್ ಅವರ ಮೊಬೈಲ್ ಫೋನ್ಗೆ ವರ್ಕ್ ಫ್ರಮ್ ಹೋಮ್ ಜಾಹೀರಾತು ಸಂದೇಶ ಬಂದಿದೆ. ಗೂಗಲ್ನಲ್ಲಿ ರಿವೀವ್ ಕೊಟ್ಟು ₹150 ಗಳಿಸಬಹುದು ಎಂದು ಆ ಸಂದೇಶದಲ್ಲಿ ತಿಳಿಸಲಾಗಿದೆ. ಅದರಂತೆ ಅಭಿಜಿತ್ ಮೊದಲಿಗೆ ಗೂಗಲ್ ರಿವೀವ್ ಕೊಟ್ಟು ₹150 ಪಡೆದುಕೊಂಡಿದ್ದಾರೆ.
ದೊಡ್ಡ ಮೊತ್ತ ಪಡೆದು ವಂಚನೆ: ಮಾರನೇ ದಿನ ಸೈಬರ್ ವಂಚಕರು ಟೆಲಿಗ್ರಾಮ್ ಆ್ಯಪ್ನಲ್ಲಿ ಅಭಿಜಿತ್ಗೆ ಒಂದು ಲಿಂಕ್ ಕಳುಹಿಸಿದ್ದಾರೆ. ಆ ಲಿಂಕ್ ತೆರೆದು ಅಭಿಜಿತ್ ಗೂಗಲ್ ರಿವೀವ್ ಕೊಟ್ಟಿದ್ದಾರೆ. ಇದರಿಂದ ಅವರ ಖಾತೆಗೆ ₹150 ಬಂದಿದೆ.
ಬಳಿಕ ಆ ಲಿಂಕ್ ಮೂಲಕ ₹1,300 ಪಾವತಿಸಿ, ₹1,950 ಮರಳಿ ಪಡೆದಿದ್ದಾರೆ. ಇದೇ ರೀತಿ ₹5 ಸಾವಿರ ಪಾವತಿಸಿ ₹9,980 ಪಡೆದುಕೊಂಡಿದ್ದಾರೆ. ಬಳಿಕ ಸೈಬರ್ ವಂಚಕರು, ₹1.25 ಲಕ್ಷ ಪಾವತಿಸಿ, ₹2 ಲಕ್ಷ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.
ಅದರಂತೆ ಅಭಿಜಿತ್ ತಮ್ಮ ಮೂರು ಬ್ಯಾಂಕ್ಗಳಲ್ಲಿ ಇದ್ದ ₹1.63 ಲಕ್ಷವನ್ನು ವಂಚಕರ ಖಾತೆಗೆ ಪಾವತಿಸಿದ್ದಾರೆ.ಮತ್ತೆ ₹80 ಸಾವಿರಕ್ಕೆ ಬೇಡಿಕೆ
ಆದರೆ, ಮರಳಿ ಹಣ ಬಂದಿಲ್ಲ. ಈ ವೇಳೆ ಹಣ ವಾಪಾಸ್ ಬಂದಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ₹80 ಸಾವಿರ ಪಾವತಿಸುವಂತೆ ವಂಚಕರು ಕೇಳಿದ್ದಾರೆ. ಇದರಿಂದ ಅನುಮಾನಗೊಂಡ ಅಭಿಜಿತ್ ಮತ್ತೆ ಹಣ ಪಾವತಿಸಲು ನಿರಾಕರಿಸಿದ್ದಾರೆ.
ಬಳಿಕ ಸೈಬರ್ ವಂಚಕರು ಸಂಪರ್ಕ ಕಡಿದುಕೊಂಡಿದ್ದಾರೆ. ಅಭಿಜಿತ್ಗೆ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದ ಬಳಿಕ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.