ಸಾವಿಗೂ ಮುನ್ನ ಎದುರಾಳಿಯ ಕೈಗೆ ರೌಡಿಯಿಂದ ಗಂಭೀರ ಹಲ್ಲೆ?

| Published : Jan 30 2024, 02:02 AM IST / Updated: Jan 30 2024, 05:18 PM IST

ಗಾಳಪ್ಪ ಅಲಿಯಾಸ್‌ ಹುಚ್ಚ ಗಾಳ

ಸಾರಾಂಶ

ಸಾಯುವ ಮುನ್ನ ತನ್ನ ಮೇಲೆ ದಾಳಿ ಮಾಡಿದವನ ಕೈಗೆ ರೌಡಿ ಗಾಳಪ್ಪ ಗಂಭೀರ ಹಲ್ಲೆ ಮಾಡಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರೌಡಿ ಗಾಳಪ್ಪನ ಹತ್ಯೆ ಪ್ರಕರಣ ಸಂಬಂಧ ತಲಘಟ್ಟಪುರ ಠಾಣೆ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಭರತ್‌, ಟೈಗರ್‌ ಮಂಜ, ಮಧು ಸೇರಿದಂತೆ ಐವರನ್ನು ವಶಕ್ಕೆ ಪಡೆದಿದ್ದಾರೆ. ಭಾನುವಾರ ಮಧ್ಯಾಹ್ನ ಚಿಕ್ಕೇಗೌಡನಪಾಳ್ಯದ ಬಳಿ ದುಷ್ಕರ್ಮಿಗಳು ರೌಡಿ ಗಾಳಪ್ಪ ಅಲಿಯಾಸ್‌ ಹುಚ್ಚ ಗಾಳ(50)ನ ಮೇಲೆ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. 

ದೂರಿನ ಮೇರೆಗೆ ತಲಘಟ್ಟಪುರ ಠಾಣೆ ಪೊಲೀಸರು, ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೂರು ವರ್ಷದ ಹಿಂದೆ ಗಾಳಪ್ಪ, ಭರತ್‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಭರತ್‌ ಮೃತಪಟ್ಟಿದ್ದಾನೆ ಎಂದು ಭಾವಿಸಿ ಬಿಟ್ಟು ಹೋಗಿದ್ದ. ಆದರೆ, ಭರತ್‌ ಚಿಕಿತ್ಸೆ ಪಡೆದು ಬದುಕಿದ್ದ. 

ಆಗಿನಿಂದ ಭರತ್‌, ಗಾಳಪ್ಪನ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಹವಣಿಸುತ್ತಿದ್ದ. ಈ ನಡುವೆ ಗಾಳಪ್ಪ, ಭರತ್‌ ಜತೆಗೆ ರಾಜೀ ಮಾಡಿಕೊಳ್ಳಲು ಮನಸು ಮಾಡಿದ್ದ. ಆದರೆ, ಭರತ್‌ ರಾಜೀಸಂಧಾನಕ್ಕೆ ಒಪ್ಪಿರಲಿಲ್ಲ. 

ಇದೀಗ ಗಾಳಪ್ಪನನ್ನು ಕೊಚ್ಚಿ ಕೊಲೆಗೈದು ಪ್ರತಿಕಾರ ತೀರಿಸಿಕೊಂಡಿದ್ದಾನೆ ಎನ್ನಲಾಗಿದೆ.

ಭರತ್‌ ಕೈಗೆ ಗಂಭೀರ ಗಾಯ?: ಭರತ್‌ ಹಾಗೂ ಆತನ ಸಹಚರರು ಗಾಳಪ್ಪನ ಮೇಲೆ ದಾಳಿ ಮಾಡಿ ಕೊಲೆ ಮಾಡುವ ಮುನ್ನ ಗಾಳಪ್ಪ ಸಹ ತೀವ್ರ ಪ್ರತಿರೋಧವೊಡ್ಡಿದ್ದಾನೆ. 

ತನ್ನ ಬಳಿಯಿದ್ದ ಡ್ರ್ಯಾಗರ್‌ನಿಂದ ಭರತ್‌ ಹಾಗೂ ಆತನ ಸಹಚರರ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಭರತ್‌ನ ಕೈಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.