ಸಾರಾಂಶ
ಹಲಗೂರು : ಕಾಡು ಹಂದಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಮಹಿಳೆ ದ್ವಿಚಕ್ರ ವಾಹನದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಂದಿಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಿದ್ದರಾಜು ಪತ್ನಿ ಭವ್ಯ (26) ಮೃತಪಟ್ಟವರು. ಸಿದ್ದರಾಜು ತನ್ನ ಹೆಂಡತಿ ಭವ್ಯ ಹಾಗೂ ತಮ್ಮ ಮಗುವಿನೊಂದಿಗೆ ಮಂಗಳವಾರ ರಾತ್ರಿ ಸಂಬಂಧಿಕರ ಮನೆಯಲ್ಲಿ ಪಿತೃ ಪಕ್ಷದ ಊಟ ಮುಗಿಸಿ ತಮ್ಮ ಸ್ವಗ್ರಾಮ ನಂದಿಪುರಕ್ಕೆ ಹೋಗುವಾಗ ಕೆಂಪಯ್ಯನದೊಡ್ಡಿ ಮಧ್ಯೆ ರಸ್ತೆಯಲ್ಲಿ ಕಾಡು ಹಂದಿ ಅಡ್ಡ ಬಂದು ಪರಿಣಾಮ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ.
ಈ ವೇಳೆ ಸಿದ್ದರಾಜು ಹಾಗೂ ಲಕ್ಷ್ಮಿಗೌಡರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಸಿದ್ದರಾಜು ಪತ್ನಿ ಭವ್ಯ ತಲೆಗೆ ತೀವ್ರ ಪೆಟ್ಟಾಗಿ ತಕ್ಷಣ ಅವರನ್ನು ಮಳವಳ್ಳಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗದ ಮಧ್ಯೆ ಮೃತಪಟ್ಟಿದ್ದಾರೆ.
ಬುಧವಾರ ಬೆಳಗ್ಗೆ ಮಳವಳ್ಳಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಶವವನ್ನು ನೀಡಲಾಯಿತು. ಹಲಗೂರು ಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಬಿ.ಮಹೇಂದ್ರ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಯೋಗೇಶ್ ನಾಪತ್ತೆ
ಮೇಲುಕೋಟೆ: ಬೋರಾಪುರ ಗ್ರಾಮದ ಯೋಗೇಶ್ (35) ಕಾಣೆಯಾಗಿದ್ದು ಸಹೋದರ ದಿನೇಶ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯೋಗೇಶ್ ಕೆಲವು ದಿನಗಳ ಹಿಂದೆ ಜಮೀನಿನಿಂದ ಕೆಲಸ ಮುಗಿಸಿ ಹೋದವನು ಮನೆಗೆ ಬಂದಿಲ್ಲ. ನೆಂಟರ ಮನೆಯಲ್ಲೂ ವಿಚಾರಿಸಲಾಗಿ ಎಲ್ಲೂ ಆತನ ಪತ್ತೆಯಾಗಿಲ್ಲ.
ಕಾಣೆಯಾದ ಯೋಗೀಶ್ ಗೋದಿ ಮೈಬಣ್ಣ, ಪಿಂಕ್ ಬಣ್ಣದ ಶರ್ಟ್, ಸೀಮೆಂಟ್ ಕಲರ್ ಪ್ಯಾಂಟ್ ಧರಿಸಿದ್ದ ಈತನ ಬಗ್ಗೆ ಮಾಹಿತಿ ದೊರೆತರೆ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.