ಸಾರಾಂಶ
ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದ ಮುಂಭಾಗದಲ್ಲಿ ನಿಲ್ಲಿಸಿ ದೇವರ ದರ್ಶನಕ್ಕೆ ತೆರಳುತ್ತಿದ್ದ ಭಕ್ತರ ಮೋಟರ್ ಬೈಕ್ ಗಳನ್ನು ಕದ್ದು ಚಾಮರಾಜನರ ಜಿಲ್ಲೆ ಮತ್ತು ಗಡಿ ಭಾಗದ ಗ್ರಾಮಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದ್ದು, ಈ ಬಗ್ಗೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕನ್ನಡಪ್ರಭ ವಾರ್ತೆ ನಂಜನಗೂಡು
ಶ್ರೀಕಂಠೇಶ್ವರ ದೇವಾಲಯದ ದಾಸೋಹದ ಭವನದ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ಗಳನ್ನು ಕದಿಯುತಿದ್ದ ಚಾಲಾಕಿ ಕಳ್ಳನನ್ನು ಬಂಧಿಸುವಲ್ಲಿ ನಂಜನಗೂಡು ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದು. ಕಳ್ಳನಿಂದ ಸುಮಾರು 15 ಲಕ್ಷ ಮೌಲ್ಯದ 19 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.ಚಾಮರಾಜನಗರದ ಕರಿನಂಜನಪುರ ಗ್ರಾಮದ ಶಂಕರಪ್ಪ (56) ಬಂಧಿತ ಆರೋಪಿ.
ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದ ಮುಂಭಾಗದಲ್ಲಿ ನಿಲ್ಲಿಸಿ ದೇವರ ದರ್ಶನಕ್ಕೆ ತೆರಳುತ್ತಿದ್ದ ಭಕ್ತರ ಮೋಟರ್ ಬೈಕ್ ಗಳನ್ನು ಕದ್ದು ಚಾಮರಾಜನರ ಜಿಲ್ಲೆ ಮತ್ತು ಗಡಿ ಭಾಗದ ಗ್ರಾಮಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದ್ದು, ಈ ಬಗ್ಗೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಬೈಕ್ ಕಳ್ಳನನ್ನು ಪತ್ತೆ ಹಚ್ಚುವ ಸಲುವಾಗಿ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬಸವರಾಜು ಮಾರ್ಗದರ್ಶನದಲ್ಲಿ ಎಸ್.ಐ ಪ್ರಕಾಶ್ ಮೊದಲೂರು, ಅಪರಾಧ ವಿಭಾಗದ ಎಸ್.ಐ ಮಾದೇಗೌಡ ಅವರ ನೇತೃತ್ವದಲ್ಲಿ ಎ.ಎಸ್.ಐ ಎನ್. ಸತೀಶ್, ಹಫಿಜುಲ್ಲಾ ಷರಿಫ್, ಸಿಬ್ಬಂದಿ ಶ್ರೀನಿವಾಸ, ಜಯರಾಮು, ಶಿವಕುಮಾರ್, ತಿಮ್ಮಯ್ಯ, ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ಜೂ. 8 ರಂದು ಪ್ರಕಾಶ್ ಮೊದಲೂರು ರವರ ನೇತೃತ್ವದ ಪೊಲೀಸ್ ತಂಡವು ಶ್ರೀಕಂಠೇಶ್ವರ ದೇವಾಲಯದ ಮುಂಭಾಗದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಆರೋಪಿ ಶಂಕರಪ್ಪ ದಾಸೋಹ ಭವನದ ಮುಂಭಾಗದ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಮೋಟಾರ್ ಬೈಕ್ ಗಳ ಹ್ಯಾಂಡಲ್ ಗಳನ್ನು ಅಲುಗಾಡಿಸಿದ್ದು, ಗಮನಕ್ಕೆ ಬಂದಿದೆ. ಕೂಡಲೇ ಅವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.ಬಂಧಿತನಿಂದ ಸುಮಾರು 15 ಲಕ್ಷ ಮೌಲ್ಯದ 19 ಬೈಕ್ ಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪಟ್ಟಣ ಪೊಲೀಸ್ ಠಾಣೆಯ ಪೊಲೀಸರ ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಹೆಚ್ಚುವರಿ ಎಸ್ಪಿ ಡಾ. ನಂದಿನಿ, ಹೆಚ್ಚುವರಿ ಅಧೀಕ್ಷಕ ನಾಗೇಶ್, ಡಿವೈಎಸ್ಪಿ ರಘು ಶ್ಲಾಘಿಸಿದ್ದಾರೆ.