ಸಾರಾಂಶ
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ಕಾಲೇಜು ಆಡಳಿತ ಮಂಡಳಿ ಹಾಗೂ ಕೆಲವರ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಗುಂಟೆಯ ಹಾವನೂರು ಬಡಾವಣೆಯಲ್ಲಿ ನಡೆದಿದೆ.
ರುಷ್ಯಂತ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಡಿಪ್ಲೋಮಾ ಮೆಕೋಟ್ರೋನಿಕ್ಸ್ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದ. ಮೊಬೈಲ್ನಲ್ಲಿ ಡೆತ್ ನೋಟ್ ಬರೆದಿಟ್ಟು ಸ್ನೇಹಿತರರಿಗೆ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ಧಾನೆ.
ವಿದ್ಯಾರ್ಥಿ ರುಷ್ಯಂತ್ ಕಾಲೇಜಿನಲ್ಲಿ ಕೆಲವು ಕ್ಷುಲ್ಲಕ ವಿಚಾರದಿಂದಾಗಿ ಮನನೊಂದಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತು ತನ್ನ ಮೊಬೈಲ್ನಲ್ಲಿ ಡೆತ್ ನೋಟ್ ಬರೆದಿಟ್ಟು ಸ್ನೇಹಿತರರಿಗೆ ಕಳುಹಿಸಿದ್ದಾನೆ. ಬಳಿಕ ಮನೆಯಲ್ಲಿ ನೇಣಿಗೆ ಶರಣಾಗುವ ಮೂಲಕ ಅತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.
ಮಂಗಳವಾರ ತಡರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಲು ಯತ್ನಿಸಿದಾಗ ಪೋಷಕರು ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವುನ್ನಪಿದ್ದಾನೆ. ಕಾಲೇಜು ಅಡಳಿತ ಮಂಡಳಿಯ ವಿರುದ್ಧ ಆರೋಪ ಮಾಡುತ್ತಿರುವ ಪೋಷಕರು ಹಾಗೂ ಸ್ಥಳೀಯರು ಎಲೆಕ್ಟ್ರಾನಿಕ್ ಸಿಟಿಯ ಎನ್.ಟಿ.ಟಿ.ಎಫ್ ಕಾಲೇಜು ಅಡಳಿತ ಮಂಡಳಿಯವರು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದು, ಶವವನ್ನು ಎತ್ತುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು.
ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.