ಸಾರಾಂಶ
ಫೋಟೋ- 15ಎಂವೈಎಸ್ 4ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ನಗರಪಾಲಿಕೆ ಎದುರು ಪಾಲಿಕೆ ಸದಸ್ಯರ ಸಮೂಹ ಭಾವಚಿತ್ರ
----ಕನ್ನಡಪ್ರಭ ವಾರ್ತೆ ಮೈಸೂರುಪ್ರತಿಷ್ಠಿತ ಮೈಸೂರು ನಗರ ಪಾಲಿಕೆಯ ಪುರಪಿತೃಗಳ ಅಧಿಕಾರ ಅವಧಿ ಅಂತ್ಯವಾಗಿದ್ದು, ಈಗ ಚುನಾವಣೆಯ ಸಿದ್ಧತೆಗೆ ಮುಂದಾಗುತ್ತಿದ್ದಾರೆ.
ನಗರ ಪಾಲಿಕೆಯ ಐದು ವರ್ಷದ ಅವಧಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯ ಮೇಯರ್ಗಳ ಆಡಳಿತ ನಡೆದಿದ್ದು, ಇಂದಿಗೆ ಅವರ ಆಡಳಿತಾವಧಿ ಅಂತ್ಯವಾಗಿ, ನಗರ ಪಾಲಿಕೆಗೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುವರು.ನಗರ ಪಾಲಿಕೆಯ 65 ಸದಸ್ಯರ ಅವಧಿಗೆ ಬುಧವಾರ ಕೊನೆಗೊಂಡಿತು. 2018ರಲ್ಲಿ ನಗರ ಪಾಲಿಕೆ ಚುನಾವಣೆ ನಡೆಯಿತು. ಯಾವುದೇ ಪಕ್ಷಕ್ಕೂ ಸ್ಪಷ್ಟಬಹುಮತ ಬಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿತು. ಆದರೆ ಈ ಮೈತ್ರಿ ಹೆಚ್ಚು ಕಾಲ ಉಳಿಯಲಿಲ್ಲ. ನಂತರ ಜೆಡಿಎಸ್ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಮೂರು ಪಕ್ಷಗಳು ಮೇಯರ್ಹುದ್ದೆಯನ್ನು ಅನುಭವಿಸಿದವು.
ಮೊದಲಿಗೆ ಪುಷ್ಪಲತಾ ಜಗನ್ನಾಥ್, ನಂತರ ತಸ್ನೀಂ, ಬಳಿಕ ಕೆಲ ತಿಂಗಳು ರುಕ್ಮಿಣಿ ಮಾದೇಗೌಡ, ಅವರ ಸದಸ್ಯತ್ವ ರದ್ದಾದ ಬಳಿಕ ಬಿಜೆಪಿಯ ಸುನಂದಾ ಪಾಲನೇತ್ರ, ಬಳಿಕ ಶಿವಕುಮಾರ್ ಅವರು ಮೇಯರ್ಆದರು. ಮೊದಲ ಬಾರಿಗೆ ಬಿಜೆಪಿ ನಗರ ಪಾಲಿಕೆ ಮೇಯರ್ಸ್ಥಾನವನ್ನು ಸುನಂದಾ ಪಾಲನೇತ್ರ ಅವರ ಮೂಲಕ ಪಡೆಯಿತು.ಈಗ ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರ ಪಾಲಿಕೆ ಅಧಿಕಾರಿಗಳು ಬುಧವಾರ ಎಲ್ಲಾ ಸದಸ್ಯರಿಗೂ ಬೀಳ್ಕೊಡುಗೆ ನೀಡಿದರು. ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಈಗಾಗಲೇ ಡಿಸಿ ಅವರನ್ನೇ ಅಧ್ಯಕ್ಷರನ್ನಾಗಿ ನಿಯೋಜಿಸಿರುವ ಹಿನ್ನೆಲೆಯಲ್ಲಿ ನಗರ ಪಾಲಿಕೆಗೂ ಅವರನ್ನೇ ಆಡಳಿತಾಧಿಕಾರಿಯನ್ನಾಗಿ ನೇಮಿಸುವ ಸಾಧ್ಯತೆ ಇದೆ.
ಡಿಸೆಂಬರ್ ಒಳಗೆ ಚುನಾವಣೆ ನಡೆಸಲು ನಗರಾಭಿವೃದ್ಧಿ ಸಚಿವರು ಬಹಿರಂಗವಾಗಿ ಹೇಳಿದ್ದರೂ ಚುನಾವಣಾ ಆಯೋಗ ನಿರ್ಧರಿಸಬೇಕಿದೆ. ರಾಜ್ಯ ಚುನಾವಣಾ ಆಯೋಗವು 45 ದಿನಗಳ ಮೊದಲು ಚುನಾವಣೆ ನಡೆಸುವ ಬಗ್ಗೆ ಮತದಾರರ ಪಟ್ಟಿ ಪರಿಷ್ಕರಣೆ ಸೇರಿ ಅಧಿಸೂಚನೆ ಹೊರಡಿಸಬೇಕು. ಅಲ್ಲದೆ ಈ ನಡುವೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಬೇಕು ಅಥವಾ ಅದೇ ಮೀಸಲಾತಿ ಮುಂದುವರೆಸುವ ಕುರಿತು ಸ್ಪಷ್ಟನೆ ನೀಡಬೇಕು.