ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಹಿಳೆ ಕಿರುಕುಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಿಂದ ಬಂಧನ ವಾರೆಂಟ್ ಜಾರಿಯಾಗಿದೆ ಎಂದು ಬೆದರಿಸಿ ಮಹಿಳೆಯೊಬ್ಬರಿಂದ ₹6.70 ಲಕ್ಷ ವಸೂಲಿ ಮಾಡಿ ಸೈಬರ್ ವಂಚಕರು ವಂಚಿಸಿದ್ದಾರೆ.
ಮೋಸ ಹೋಗಿರುವ ಕೋರಮಂಗಲ 4ನೇ ಹಂತದ ನಿವಾಸಿ ಮಹಿಳೆ ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಕೇಂದ್ರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದೆ ಸಂತ್ರಸ್ತೆಗೆ ಅಪರಿಚಿತ ನಂಬರ್ನಿಂದ ಬಂದ ಕರೆಯಲ್ಲಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ನಿಂದ ಮಹಿಳೆಗೆ ಕಿರುಕುಳ ಸಂದೇಶಗಳ ಬರುತ್ತಿರುವ ಬಗ್ಗೆ ಗೋವಂಡಿ (ಮುಂಬೈ) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಸುಪ್ರೀಂ ಕೋರ್ಟ್ನಿಂದ ಬಂಧನ ವಾರೆಂಟ್ ಜಾರಿಯಾಗಿದೆ ಎಂದಿದ್ದಾಳೆ.
ಇದಾದ ನಂತರ ಮುಂಬೈ ಹಾಗೂ ಸಿಐಡಿ ಪೊಲೀಸರ ಹೆಸರಿನಲ್ಲಿ ಮತ್ತೆ ಅವರಿಗೆ ಕರೆಗಳು ಬಂದಿವೆ. ನಿಮ್ಮ ಬಂಧನ ವಾರೆಂಟ್ನ ಪರಿಶೀಲಿಸಬಹುದು. ಇದು ಸುಪ್ರೀಂಕೋರ್ಟ್ ವೆಬ್ಸೈಟ್ ಎಂದು ಲಿಂಕ್ ಕಳುಹಿಸಿದ್ದರು.
ಅಲ್ಲದೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಕೂಡ ದಾಖಲಿಸಲಾಗುತ್ತದೆ ಎಂದು ದೂರುದಾರರಿಗೆ ಹೆದರಿಸಿದ್ದರು. ಈ ಬ್ಲ್ಯಾಕ್ಮೇಲ್ಗೆ ಹೆದರಿದ ಅವರು, ಕೊನೆಗೆ ಅಪರಿಚಿತರು ಹೇಳಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾಯಿಸಿದ್ದಾರೆ. ನಂತರ ಮಹಿಳೆಗೆ ತಾನು ವಂಚನೆಗೆ ಒಳಗಾಗಿರುವ ಸಂಗತಿ ಅರಿವಾಗಿದೆ ಎಂದು ತಿಳಿದು ಬಂದಿದೆ.