ಸಾರಾಂಶ
ಸಾವನದುರ್ಗದಲ್ಲಿ ಚಾರಣೆ ಮಾಡಲು ಹೋಗಿ ನಾಪತ್ತೆಯಾಗಿದ್ದ ಸಾವನದುರ್ಗಲ್ಲಿ ನಾಪತ್ತೆ ಆಗಿದ್ದ ಬೆಂಗಳೂರಿನ ಟೆಕ್ಕಿ ಶವವಾಗಿ ಪತ್ತೆ. ಉತ್ತರಪ್ರದೇಶ ಮೂಲದ ಯುವಕ ಗಗನ್ ದೀಪ್ ಸಿಂಗ್ ಶವ ಗುರುವಾರ ಪತ್ತೆ.
ಕನ್ನಡಪ್ರಭ ವಾರ್ತೆ ಮಾಗಡಿ
ಸಾವನದುರ್ಗ ಚಾರಣೆ ಮಾಡಲು ಹೋಗಿ ನಾಪತ್ತೆಯಾಗಿದ್ದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶ ಮೂಲದ ಯುವಕ ಗಗನ್ ದೀಪ್ ಸಿಂಗ್ ಗುರುವಾರ ಶವವಾಗಿ ಪತ್ತೆಯಾಗಿದ್ದಾನೆ.ಯುವಕ ಕಳೆದ ಡಿ.24ರಂದು ಗಗನ್ ತನ್ನ ಸ್ನೇಹಿತನ ಜೊತೆ ಸಾವನದುರ್ಗ ಚಾರಣ ಮಾಡಲು ಹೋದ ವೇಳೆ ನಾಪತ್ತೆಯಾಗಿದ್ದ. ಕಳೆದ ಐದು ದಿನಗಳಿಂದ ಅರಣ್ಯಾಧಿಕಾರಿಗಳು, ಪೊಲೀಸರು, ಎಸ್ಡಿಆರ್ಎಫ್ ತಂಡ ಯುವಕನಿಗಾಗಿ ಹುಡುಕಾಟ ನಡೆಸಿದ್ದವು. ಗುರುವಾರ ಮಧ್ಯಾಹ್ನ ಗಗನ್ ಶವ ಪತ್ತೆಯಾಗಿದೆ.
ಸಾವನದರ್ಗ ಬೆಟ್ಟದ ಎಮ್ಮೆಬೀಡು ಪ್ರದೇಶದಲ್ಲಿ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. ಕಳೆದ 4 ದಿನಗಳಿಂದಲೂ ಬೆಟ್ಟದ ತುದಿಯ ಬಸವಣ್ಣನ ಗೋಪುರದ ಆಸುಪಾಸಿನಲ್ಲಿ ನಿರಂತರ ಹುಡುಕಾಟ ನಡೆಸಲಾಗಿದ್ದು, 5ನೇ ದಿನ ಬಸವಣ್ಣ ಗೋಪುರದ ಹಿಂಭಾಗದ ಇಳಿಜಾರು ಬಂಡೆಯಿಂದ ಸುಮಾರು 400 ಅಡಿ ಕೆಳಗೆ ಎಮ್ಮೆಬೀಡು ಪ್ರದೇಶದಲ್ಲಿ ಶವ ಪತ್ತೆಯಾಗಿದೆ.ಗಗನ್ ದೀಪ್ ಸಿಂಗ್ ಪತ್ತೆಗಾಗಿ ಅತ್ಯಾಧುನಿಕ ಡ್ರೋನ್ಗಳನ್ನು ಬಳಸಿ ಸತತ ಹುಡುಕಾಟ ನಡೆಸಲಾಗಿತ್ತು. ಗಗನ್ ರಾತ್ರಿ ವೇಳೆ ದಾರಿ ಕಾಣದೆ ಬಂಡೆಯಿಂದ ಕಾಲು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಗುರುವಾರ ರಾತ್ರಿ ಮಾಗಡಿ ಸರ್ಕಾರಿ ಆಸ್ಪತ್ರೆಗೆ ಶವವನ್ನು ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದರು. ಮಾಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.