ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಕೀಯ ಪ್ರಭಾವಿಗಳು ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಗ್ರಾಮದ ಸರ್ವೇ 69ರಲ್ಲಿ ಸುಮಾರು ₹1,600 ಕೋಟಿಗೂ ಅಧಿಕ ಮೌಲ್ಯದ 37.20 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.ಕೆಂಗೇರಿ ಗ್ರಾಮದ ಸರ್ವೇ ನಂ.69ರಲ್ಲಿ ಒಟ್ಟು 183 ಎಕರೆಗಳಷ್ಟು ವಿಸ್ತೀರ್ಣದ ಸರ್ಕಾರಿ ಸ್ವತ್ತು ಇದ್ದು, ಈ ಪೈಕಿ 37.20 ಎಕರೆ ವಿಸ್ತೀರ್ಣದ ಸ್ವತ್ತನ್ನು 1973ರಲ್ಲಿ 25 ಮಂದಿ ಜಮೀನು ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ತಲಾ 1.20 ಎಕರೆ ವಿಸ್ತೀರ್ಣದಂತೆ ಸರ್ಕಾರದ ವತಿಯಿಂದ ಮಂಜೂರು (ಗ್ರ್ಯಾಂಟ್) ಮಾಡಲಾಗಿದೆ. ಈ 25 ಜನರ ಪೈಕಿ ಹಲವರು ಈಗಾಗಲೇ ಮೃತಪಟ್ಟಿದ್ದಾರೆ. ಉತ್ತರಹಳ್ಳಿ-ಕೆಂಗೇರಿ ರಸ್ತೆಯ ಬಿಜಿಎಸ್ ಆಸ್ಪತ್ರೆಗೆ ಹೊಂದಿಕೊಂಡಿರುವ ಈ ಅಮೂಲ್ಯ ಸ್ವತ್ತನ್ನು ಹಲವು ಭ್ರಷ್ಟರು ನಕಲಿ ದಾಖಲೆ ಸೃಷ್ಟಿಸಿ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ನೆಲಗಳ್ಳರೊಂದಿಗೆ ಶಾಮೀಲಾಗಿರುವ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಕೆಎನ್ಎಸ್ ರೆಸಿಡೆನ್ಸಿ ಸಂಸ್ಥೆಯ ಮಾಲೀಕ ಕೆ.ಎನ್.ಸುರೇಂದ್ರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನ್ಯಾಯಾಂಗ ಅಥವಾ ಸಿಐಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.ಅನುಮತಿ ಪಡೆಯದೆ ಮಾರಾಟ: ಸರ್ಕಾರದಿಂದ ಗ್ರ್ಯಾಂಟ್ ಪಡೆದಿದ್ದ 25 ಮಂದಿ ಫಲಾನುಭವಿಗಳ ಪೈಕಿ ಬಹುತೇಕರು 1995-96 ರಿಂದ 1999-2000 ಇಸವಿ ಅವಧಿಯಲ್ಲಿ ಸರ್ಕಾರದಿಂದ ಮಾರಾಟದ ಅನುಮತಿ ಪಡೆಯದೆ 75ಕ್ಕೂ ಹೆಚ್ಚು ಜನರಿಗೆ ನಿವೇಶನಗಳ ರೂಪದಲ್ಲಿ ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಹೀಗಾಗಿ ಆ ಸ್ವತ್ತುಗಳು ತಾನಾಗೇ ಸರ್ಕಾರದ ವಶಕ್ಕೆ ಸೇರುತ್ತವೆ. ಫಲಾನುಭವಿಗಳು ತಮ್ಮ ಹಕ್ಕು ಸ್ವಾಮ್ಯವನ್ನು ಕಳೆದುಕೊಳ್ಳುತ್ತಾರೆ ಎಂದು ರಮೇಶ್ ವಿವರಿಸಿದ್ದಾರೆ.